ಪಶ್ಚಿಮಬಂಗಾಳ ಬಿಜೆಪಿ ಸಂಸದ ಮನೆಯ ಮೇಲೆ ಬಾಂಬ್ ದಾಳಿ: "ಪೂರ್ವನಿಯೋಜಿತ" ಎಂದ ಟಿಎಂಸಿ

ಕೋಲ್ಕತ್ತ: ಪಶ್ಚಿಮ ಬಂಗಾಳ ಬಿಜೆಪಿ ಸಂಸದ ಅರ್ಜುನ್ ಸಿಂಗ್ ರ ನಿವಾಸದ ಮೇಲೆ ಬಾಂಬ್ ದಾಳಿ ನಡೆಸಿರುವ ಕುರಿತು ವರದಿಯಾಗಿದೆ. ರಾಷ್ಟ್ರೀಯ ತನಿಖಾದಳವು ದಾಳಿಯ ಕುರಿತು ತನಿಖೆ ನಡೆಸಲು ಆದೇಶ ನೀಡಿದ ಬೆನ್ನಿಗೇ ಈ ಘಟನೆ ಸಂಭವಿಸಿದೆ. ಒಟ್ಟು ಮೂರು ಬಾಂಬ್ ಗಳನ್ನು ಎಸೆದಿರುವುದಾಗಿ ಅವರು ಆರೋಪಿಸಿದ್ದಾರೆ. ಪೊಲೀಸರು ಸಿಸಿ ಕ್ಯಾಮರಾ ಪರಿಶೀಲಿಸುತ್ತಿದ್ದಾರೆ. ಈ ಘಟನೆಯ ಕುರಿತು ತನಿಖೆಗೆ ಆದೇಶ ನೀಡಿದ ಬೆನ್ನಲ್ಲೇ ಮತ್ತೊಂದು ದಾಳಿಯನ್ನೂ ನಡೆಸಲಾಗಿದೆ.
"ರಾಜ್ಯ ಸರಕಾರವು ಬಾಂಬ್ ಗಳೊಂದಿಗೆ ನನ್ನ ಮನೆ ಬಾಗಿಲಿಗೆ ಬಂದು ತಲುಪಿದೆ. ಈಗ ನಾವು ಆತ್ಮರಕ್ಷಣೆಗಾಗಿ ಏನನ್ನಾದರೂ ಮಾಡಬೇಕು. ಎರಡು ತಿಂಗಳ ಹಿಂದೆ ಒಬ್ಬ ವ್ಯಕ್ತಿಗೆ ನನ್ನನ್ನು ಕೊಲ್ಲುವ ಜವಾಬ್ದಾರಿ ನೀಡಲಾಗಿತ್ತು" ಎಂದು ಸಿಂಗ್ ತಿಳಿಸಿದ್ದಾರೆ.
"ಇಲ್ಲಿನ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವು ಬಾಂಬ್ ದಾಳಿ ನಡೆಸುವ ಗೂಂಡಾಗಳಿಗೆ ಆಶ್ರಯ ನೀಡಿದೆ ಎಂದು ಸಿಂಗ್ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ತೃಣಮೂಲ ಕಾಂಗ್ರೆಸ್ ನಿರಾಕರಿಸಿದೆ. ರಾಜಕೀಯವಾಗಿ ಮುನ್ನೆಲೆಗೆ ಬರಬೇಕು ಎಂಬ ಕಾರಣದಿಂದ ಈ ಸ್ಫೋಟವನ್ನು ಪೂರ್ವನಿಯೋಜಿತವಾಗಿ ಮಾಡಲಾಗಿದೆ ಎಂದು ಟಿಎಂಸಿ ಆರೋಪಿಸಿದೆ.
ಸೆಪ್ಟೆಂಬರ್ ೮ರಂದು ಬೆಳಗ್ಗೆ ಬೈಕ್ ನಲ್ಲಿ ಬಂದಿದ್ದ ಆಗಂತುಕರು ಜಗತ್ತಾಲ್ ನಲ್ಲಿರುವ ಸಂಸದರ ಮನೆಯ ಮೇಲೆ ಬಾಂಬ್ ಎಸೆದಿದ್ದರು. ಅವರು ಆ ವೇಳೆ ದಿಲ್ಲಿಯಲ್ಲಿದ್ದು, ಕುಟುಂಬವು ಮನೆಯಲ್ಲಿತ್ತು. ದಾಳಿಯಲ್ಲಿ ಯಾರಿಗೂ ಗಾಯವಾಗಿಲ್ಲ ಮತ್ತು ಮನೆಗೆ ಸಣ್ಣಪುಟ್ಟ ಹಾನಿಗಳು ಸಂಭವಿಸಿದೆ ಎಂದು ವರದಿ ತಿಳಿಸಿದೆ.







