ಸರಕಾರದ ಗಮನಕ್ಕೆ ತರದೇ ಮುಖ್ಯ ಕಾರ್ಯದರ್ಶಿ ಪತ್ರ ಬರೆಯಲು ಸಾಧ್ಯವಿಲ್ಲ: ಸಿದ್ದರಾಮಯ್ಯ
ದೇವಸ್ಥಾನಗಳ ತೆರವು ಕಾರ್ಯಾಚರಣೆ

ಬೆಂಗಳೂರು, ಸೆ.15: ಸರಕಾರದ ಗಮನಕ್ಕೆ ತರದೇ ಮುಖ್ಯಕಾರ್ಯದರ್ಶಿಗಳು ದೇವಸ್ಥಾನ ತೆರವುಗೊಳಿಸುವ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲು ಸಾಧ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರು ಸುಪ್ರೀಂ ಕೋರ್ಟ್ನ ತೀರ್ಮಾನದಂತೆ ಸಾರ್ವಜನಿಕ ಸ್ಥಳಗಳಲ್ಲಿ ಇರುವ ಧಾರ್ಮಿಕ ಕಟ್ಟಡಗಳನ್ನು ನೆಲಸಮ ಮಾಡುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರ ವಿರೋಧ ವ್ಯಕ್ತವಾದ ಮೇಲೆ ತಮ್ಮ ಮಾನ ಉಳಿಸಿಕೊಳ್ಳಲು ಸರಕಾರ ಬಣ್ಣ ಬದಲಾಯಿಸಿದೆ ಎಂದು ಟೀಕಿಸಿದರು.
ಈಗ ಅವರಿಗೆ ಒಡೆಯಬೇಡಿ ಎಂಬ ಸೂಚನೆ ಕೊಡ್ತೀವಿ ಎನ್ನುತ್ತಿದ್ದಾರೆ. ಸರಕಾರದ ಗಮನಕ್ಕೆ ಬಾರದೆ ದೇವಾಲಯ ಒಡೆದಿದ್ದಾರ? ಮೈಸೂರು ಸಂಸದರು ಈಗ ದೇವಾಲಯ ಒಡೆದು ಆದಮೇಲೆ ಮಾತಾಡ್ತಾರೆ. ಇದರ ಬದಲು ಸರಕಾರದ ಗಮನಕ್ಕೆ ತಂದು ದೇವಸ್ಥಾನ ಒಡೆಯುವುದನ್ನು ತಡೆಯಬೇಕಿತ್ತು ಎಂದು ಸಿದ್ದರಾಮಯ್ಯ ಹೇಳಿದರು.
ಹಿಂದೂ ದೇವಾಲಯಗಳನ್ನು ಬಿಜೆಪಿಯವರೇ ನಾಶ ಮಾಡೋದು. ಮಾತಾಡಿದ್ರೆ ರಾಮನ ಜಪ, ರಾಮ ಮಂದಿರ ಕಟ್ಟುತ್ತೇವೆ ಅಂತ ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಭಕ್ತರ ಗಮನಕ್ಕೆ ತಂದು ಪರ್ಯಾಯ ವ್ಯವಸ್ಥೆ ಮಾಡಿ ಆಮೇಲೆ ದೇವಸ್ಥಾನ ಕೆಡವಬಹುದಿತ್ತು. ಏಕಾಏಕಿ ದೇವಸ್ಥಾನ ದ್ವಂಸ ಮಾಡಿರುವುದು ಬಿಜೆಪಿಯವರ ಢೋಂಗಿತನವನ್ನು ತೋರಿಸುತ್ತದೆ. ಹಿಂದುತ್ವವಾದ ಎನ್ನೋದು ಕೇವಲ ರಾಜಕಾರಣಕ್ಕಾಗಿ, ಓಟಿಗಾಗಿ ಮಾತ್ರ, ಅಸಲಿಗೆ ಬಿಜೆಪಿಯವರಿಗೆ ಹಿಂದೂ ಧರ್ಮದ ಬಗ್ಗೆ ಗೌರವವಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ತಿಳಿಸಿದರು.
ಸುಪ್ರೀಂ ಕೋರ್ಟ್ ನಿರ್ಣಯ ಬಂದಿದ್ದು ಇವತ್ತು ನಿನ್ನೆಯದಲ್ಲ. ಸರಕಾರ ಇಷ್ಟು ದಿನ ಏನು ಮಾಡ್ತಾ ಇತ್ತು? ಬಿಜೆಪಿ ಸರಕಾರ ಬಂದು ಎರಡೂವರೆ ವರ್ಷ ಆಯ್ತು, ಈಗ ಯಾಕೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡುವ ನಾಟಕ? ಇದು ಢೋಂಗಿತನವಲ್ಲದೆ ಇನ್ನೇನು? ನಾವು ಬಿಜೆಪಿಯವರಂತೆ ರಾಜಕೀಯಕ್ಕಾಗಿ ಧರ್ಮ, ದೇವರನ್ನು ಬಳಸಿಕೊಳ್ಳಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ನಾವು ಯಾವ ಆಪರೇಷನ್ ಮಾಡಲ್ಲ, ಯಾರನ್ನೂ ಬಲವಂತವಾಗಿ ಪಕ್ಷಕ್ಕೆ ಕರೆತರಲ್ಲ. ನಮ್ಮ ಪಕ್ಷದ ಸಿದ್ದಾಂತ ಒಪ್ಪಿ, ಪಕ್ಷಕ್ಕೆ ಬದ್ಧರಾಗಿ ಇರುತ್ತೇನೆಂದು ಬರುವವರಿಗೆ ಪಕ್ಷದಲ್ಲಿ ಅವಕಾಶ ಇದೆ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.







