ಅರಿವು ಸಾಲ ಯೋಜನೆ ಮರುಸ್ಥಾಪನೆಗೆ ಒತ್ತಾಯಿಸಿ ಜಿಐಒ ಪೋಸ್ಟರ್ ಬಿಡುಗಡೆ
ಮಂಗಳೂರು, ಸೆ.16: ಅರಿವು ಸಾಲ ಯೋಜನೆಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ದ.ಕ. ಜಿಲ್ಲಾ ಘಟಕವು ಬುಧವಾರ ಪೋಸ್ಟರ್ ಬಿಡುಗಡೆ ಮಾಡಿದೆ.
ಬಳಿಕ ಮಾತನಾಡಿದ ಜಿಐಒ ದ.ಕ. ಜಿಲ್ಲಾಧ್ಯಕ್ಷೆ ಡಾ.ಆಯಿಶಾ ಫಿದಾ ಸರಕಾರವು ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಯೋಜನೆಯನ್ನು ತಕ್ಷಣ ಮರುಸ್ಥಾಪಿಸಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶುಲ್ಕ ಪಾವತಿಸಲು ಸಹಕಾರಿಯಾಗುತ್ತಿದ್ದ ಅರಿವು ಸಾಲ ಯೋಜನೆಯ ಮಂಜೂರಾತಿಯನ್ನು 2019 ರಿಂದ ಕರ್ನಾಟಕ ಸರಕಾರವು ತಡೆ ಹಿಡಿದಿದೆ. ಸರಕಾರದ ಸೌಲಭ್ಯಗಳನ್ನು ನಂಬಿ ಉನ್ನತ ಶಿಕ್ಷಣದ ಕನಸು ಕಂಡ ಅನೇಕ ವಿದ್ಯಾರ್ಥಿಗಳು ಶುಲ್ಕ ಪಾವತಿಸಲು ಸಾಧ್ಯವಾಗದೆ ಅರ್ಧದಲ್ಲಿ ಶಿಕ್ಷಣವನ್ನು ಮೊಟಕುಗೊಳಿಸುವ ಪರಿಸ್ಥಿತಿ ಎದುರಾಗಿದೆ. ಅನೇಕ ಸಂಘ ಸಂಸ್ಥೆಗಳು, ವಿದ್ಯಾರ್ಥಿ ಸಂಘಟನೆಗಳು ಈ ಬಗ್ಗೆ ಸರಕಾರದ ಗಮನ ಸೆಳೆದಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗುತ್ತಿರುವ ಈ ಅನ್ಯಾಯದ ಕುರಿತು ಮನವರಿಕೆ ಮಾಡುವ ನಿಟ್ಟಿನಲ್ಲಿ ಜಿಐಒ ಸಮೀಕ್ಷೆಯನ್ನು ಕೂಡ ನಡೆಸಿತ್ತು ಆದರೆ ಯಾವೊಂದು ಮನವಿಗೂ ಸರಕಾರ ಈವರೆಗೆ ಸ್ಪಂದಿಸಿಲ್ಲ ಎಂದರು.
ಈ ಸಂದರ್ಭ ಜಿಐ ಕರ್ನಾಟಕದ ಮಾಜಿ ರಾಜ್ಯಾಧ್ಯಕ್ಷೆ ಉಮೈರಾ ಬಾನು ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.