ಅಧಿವೇಶನದ ಬಳಿಕ ರಾಜ್ಯ ಪ್ರವಾಸ: ಬಿ.ಎಸ್. ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ (File Photo)
ಶಿವಮೊಗ್ಗ: ಅಧಿವೇಶನ ಪೂರ್ಣಗೊಂಡ ಬಳಿಕ ರಾಜ್ಯ ಪ್ರವಾಸ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮೈಸೂರು ಕಡೆಗೆ ಹೋಗಿ ಬಂದಿದ್ದೇನೆ. ರಾಜ್ಯ ಪ್ರವಾಸ ಅಧಿವೇಶನ ನಂತರ ಆರಂಭಿಸಲಾಗುವುದು ಎಂದರು.
ದಾವಣಗೆರೆಯಲ್ಲಿ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಅಲ್ಲಿ ಸಂಘಟನೆ ಬಲಪಡಿಸುವ ಕಡೆ ವಿಶೇಷ ಗಮನ ಹರಿಸಲಾಗುವುದು. ಕೋರ್ ಕಮಿಟಿ ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭಾಗವಹಿಸಲಿದ್ದಾರೆ. ಹೀಗಾಗಿ ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು
ಪಕ್ಷದಿಂದ ವ್ಯಕ್ತವಾಗುವ ಸಲಹೆಗಳನ್ನು ನಾನು ಮತ್ತು ಸಿಎಂ ಸೇರಿ ಕಾರ್ಯ ರೂಪಕ್ಕೆ ತರಲು ಪ್ರಯತ್ನಿಸುತ್ತೇವೆ. ಉಪ ಚುನಾವಣೆ ಅಭ್ಯರ್ಥಿ ಬಗ್ಗೆ ಇಷ್ಟು ಬೇಗ ಚರ್ಚೆ ಆಗುವುದಿಲ್ಲ ಎಂದರು.
ಬೆಲೆ ಏರಿಕೆಯ ಬಗ್ಗೆ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಬರುವ ದಿನದಲ್ಲಿ ಬೆಲೆ ಏರಿಕೆ ಸುಧಾರಣೆ ಮಾಡುವ ಪ್ರಯತ್ನ ಮಾಡಲಾಗುವುದು. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ, ಸದ್ಯದ ಸ್ಥಿತಿಯಲ್ಲಿ ಬೆಲೆ ಇಳಿಕೆ ಮಾಡುವುದು ಕಷ್ಟ. ಈ ಬಗ್ಗೆಯೂ ಕೇಂದ್ರದೊಂದಿಗೆ ಚರ್ಚಿಸಲಾಗುವುದು ಎಂದರು.