ಬಾಬುಲ್ ಸುಪ್ರಿಯೋಗೆ ನೀಡಿದ್ದ ಸಶಸ್ತ್ರ ಭದ್ರತೆ ಕಡಿತಗೊಳಿಸಿದ ಕೇಂದ್ರ ಸರಕಾರ
ಹೊಸದಿಲ್ಲಿ:ಇಂದು ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್ ಸೇರಿದ ಬಾಬುಲ್ ಸುಪ್ರಿಯೋಗೆ ನೀಡಲಾದ ಕೇಂದ್ರೀಯ ಅರೆಸೇನಾ ಕಮಾಂಡೋಗಳ ಸಶಸ್ತ್ರ ಭದ್ರತೆಯನ್ನು ಕೇಂದ್ರ ಸರಕಾರ ಕಡಿತಗೊಳಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕೇಂದ್ರ ಗೃಹ ಸಚಿವಾಲಯವು ಶುಕ್ರವಾರ ಆದೇಶ ಹೊರಡಿಸಿದ ನಂತರ ಸುಪ್ರಿಯೋಗೆ ನೀಡಿರುವ ಭದ್ರತೆಯನ್ನು ಎರಡನೇ ಅತ್ಯುನ್ನತ ಮಟ್ಟದ Z ವರ್ಗದಿಂದ Y ವರ್ಗಕ್ಕೆ ಇಳಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಕೇಂದ್ರೀಯ ಯೋಜನೆಯಡಿ ವಿವಿಐಪಿಗಳು ಹಾಗೂ ಹೆಚ್ಚಿನ ಅಪಾಯದ ವ್ಯಕ್ತಿಗಳಿಗೆ ನೀಡಲಾಗಿರುವ ಭದ್ರತಾ ರಕ್ಷಣೆಯು ಅತ್ಯಧಿಕ Z+ ನಿಂದ ಹಿಡಿದು Z, Y+, Y ಹಾಗೂ X ವರ್ಗಗಳವರೆಗೆ ಇರುತ್ತದೆ.
ಜುಲೈನಲ್ಲಿ ನರೇಂದ್ರ ಮೋದಿ ಸಚಿವ ಸಂಪುಟದಿಂದ ಕೈಬಿಟ್ಟ ಸುಪ್ರಿಯೋ (50 ವರ್ಷ) ಅವರನ್ನು ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಸಶಸ್ತ್ರ ದಳದಿಂದ ರಕ್ಷಣೆ ನೀಡಲಾಗುತ್ತಿತ್ತು.
ಪ್ರಯಾಣದ ಸಮಯದಲ್ಲಿ ಸುಮಾರು ಆರು-ಏಳು ಕಮಾಂಡೋಗಳಿಂದ ರಕ್ಷಿಸಲ್ಪಡುತ್ತಿದ್ದ ಸುಪ್ರಿಯೋ ಅವರನ್ನು ಇನ್ನು ಮುಂದೆ ಇಬ್ಬರು ಸಶಸ್ತ್ರ ಸಿಬ್ಬಂದಿಗಳು ರಕ್ಷಣೆ ನೀಡಲಿದ್ದಾರೆ.