ಮಡಿಕೇರಿ: ರಸ್ತೆಯ ಮಧ್ಯದಲ್ಲೇ ಪ್ರತ್ಯಕ್ಷಗೊಂಡ ಕಾಡಾನೆ; ತೋಟಕ್ಕೆ ನುಗ್ಗಿದ ಕಾರು !
ಮಡಿಕೇರಿ ಸೆ.19 : ರಸ್ತೆಯ ಮಧ್ಯದಲ್ಲಿ ಕಾಡಾನೆ ಪ್ರತ್ಯಕ್ಷಗೊಂಡ ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ತೋಟದೊಳಗೆ ನುಗ್ಗಿ ಮರಕ್ಕೆ ಅಪ್ಪಳಿಸಿರುವ ಘಟನೆ ಸಿದ್ದಾಪುರ ಸಮೀಪದ ಹುಂಡಿ ಗ್ರಾಮದಲ್ಲಿ ನಡೆದಿದೆ.
ರವಿವಾರ ಬೆಳಿಗ್ಗೆ ಬ್ಯಾಂಕ್ ವ್ಯವಸ್ಥಾಪಕರೊಬ್ಬರು ಕಾರಿನಲ್ಲಿ ಪಾಲಿಬೆಟ್ಟದಿಂದ ಹುಂಡಿ ರಸ್ತೆ ಮಾರ್ಗವಾಗಿ ಸಿದ್ದಾಪುರ ಕಡೆ ಬರುತ್ತಿದ್ದಾಗ ಮಾರ್ಗ ಮಧ್ಯ ದಿಢೀರಾಗಿ ಕಾಡಾನೆ ಎದುರಾಗಿದೆ. ಇದರಿಂದ ಕಾರು ಚಲಾಯಿಸುತ್ತಿದ್ದ ಬ್ಯಾಂಕ್ ವ್ಯವಸ್ಥಾಪಕರು ಗಾಬರಿಯಾಗಿದ್ದಾರೆ. ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಯ ತೋಟದೊಳಗೆ ನುಗ್ಗಿ ಆಲದ ಮರಕ್ಕೆ ಢಿಕ್ಕಿಯಾಗಿದೆ.
ಮರ ಸೀಳಿ ಹೋಗಿದ್ದು, ಕಾರಿನ ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಪಘಾತದ ಶಬ್ಧಕ್ಕೆ ಬೆದರಿದ ಕಾಡಾನೆ ಸ್ಥಳದಿಂದ ಕಾಲ್ಕಿತ್ತಿದೆ. ಟ್ರ್ಯಾಕ್ಟರ್ ಬಳಸಿ ಕಾರನ್ನು ತೋಟದೊಳಗಿನಿಂದ ಹೊರಕ್ಕೆ ತೆಗೆಯಲಾಯಿತು.
Next Story