ಅತ್ಯಾಚಾರ ಯತ್ನವನ್ನು ಪ್ರತಿರೋಧಿಸಿದ್ದ ಮಹಿಳೆಯ ಕಣ್ಣಿಗೆ ಆ್ಯಸಿಡ್ ಸುರಿದಿದ್ದ ಇಬ್ಬರ ಬಂಧನ
photo: The new indian express
ಭೋಪಾಲ, ಸೆ.23: ಪನ್ನಾ ಜಿಲ್ಲೆಯ ಬಾರ್ಹೊ ಗ್ರಾಮದಲ್ಲಿ ತನ್ನ ಮೇಲೆ ಅತ್ಯಾಚಾರವೆಸಗುವ ಯತ್ನವನ್ನು ವಿರೋಧಿಸಿದ್ದ ಮಹಿಳೆಯ ಕಣ್ಣುಗಳಿಗೆ ಆ್ಯಸಿಡ್ ನಂತಹ ದ್ರವವನ್ನು ಸುರಿದಿದ್ದ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಸುಮೇರಸಿಂಗ್ ಮತ್ತು ಗೋಲ್ಡಿ ರಾಜಾ ತಮ್ಮ ಸಂಬಂಧಿಯೋರ್ವ ಗ್ರಾಮದಿಂದ ಪರಾರಿಯಾಗಲು ನೆರವಾಗಿದ್ದಳು ಎಂಬ ಶಂಕೆಯಿಂದ ಮಹಿಳೆ ಮತ್ತು ಆಕೆಯ ಸೋದರನನ್ನು ಅಪಹರಿಸಿದ್ದರು. ಆರೋಪಿಗಳು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವನ್ನೂ ಎಸಗಲು ಮುಂದಾಗಿದ್ದು,ಅದನ್ನು ವಿರೋಧಿಸಿದ್ದ ಆಕೆಯ ಕಣ್ಣುಗಳಿಗೆ ಆ್ಯಸಿಡ್ ಸುರಿದು ಪರಾರಿಯಾಗಿದ್ದರು ಎಂದು ಎಸ್ಪಿ ಧರ್ಮರಾಜ ಮೀನಾ ಅವರು ತಿಳಿಸಿದರು.
ಆ್ಯಸಿಡ್ ದಾಳಿಗೆ ಮುನ್ನ ಆರೋಪಿಗಳು ತನ್ನನ್ನು ಮತ್ತು ತನ್ನ ಸೋದರನನ್ನು ಥಳಿಸಿದ್ದರು ಎಂದು ಮಹಿಳೆ ತಿಳಿಸಿದ್ದಾಳೆ.
ತೀವ್ರ ಸುಟ್ಟಗಾಯಗಳಾಗಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಭಾಗಶಃ ದೃಷ್ಟಿ ನಷ್ಟವಾಗಿದೆ. ಮಹಿಳೆಗೆ ಆಗತ್ಯವಿರುವ ಎಲ್ಲ ಚಿಕಿತ್ಸೆ ಲಭ್ಯವಾಗಿಸುವಂತೆ ಮುಖ್ಯಮಂತ್ರಿ ಶಿವರಾಜ ಚೌಹಾಣ ಅವರು ನಿರ್ದೇಶ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಕೆ.ಮಿಶ್ರಾ ತಿಳಿಸಿದರು.