ದ್ವಿಮುಖ ಸಂವಹನ ಸಂಪರ್ಕ ಸಾಧನದ ದೋಷ ಸರಿಪಡಿಸಲು ಸಚಿವ ಅಂಗಾರ ಸೂಚನೆ

ಮಂಗಳೂರು, ಸೆ.27: ಯಾಂತ್ರಿಕೃತ ಮೀನುಗಾರಿಕೆಗೆ ತೆರಳುವ ಬೋಟುಗಳಲ್ಲಿ ದ್ವಿಮುಖ ಸಂವಹನ ಸಂಪರ್ಕ ಸಾಧನಕ್ಕೆ ಅಗತ್ಯವಿರುವ ಬ್ಯಾಟರಿಯನ್ನು ಸೋಲಾರ್ ಮೂಲಕ ರಿಚಾರ್ಜ್ ಮಾಡಿಸಿಕೊಳ್ಳುವ ಸಾಧ್ಯತೆಗಳ ಕುರಿತು ಪರಿಶೀಲಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ದ.ಕ.ಜಿಲ್ಲಾ ಉಸ್ತುವಾರಿ ಹಾಗೂ ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಸೂಚನೆ ನೀಡಿದರು.
ದ.ಕ.ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಮಿನುಗಾರಿಕಾ ಇಲಾಖಾಧಿಕಾರಿಗಳ ಜೊತೆ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮೀನುಗಾರರ ಸುರಕ್ಷೆ ಸರಕಾರದ ಆದ್ಯತೆಯಾಗಿದೆ. ಸಮುದ್ರದ ಬಹುದೂರ ಹೋಗಿ ಮೀನುಗಾರಿಕೆ ಮಾಡುವವರ ಬೋಟುಗಳ ಸ್ಥಿತಿಗತಿಗಳನ್ನು ಅವಲೋಕಿಸಲು ಹಾಗೂ ಮೀನುಗಾರರ ಸುರಕ್ಷತಾ ದೃಷ್ಟಿಯಿಂದ ದ್ವಿಮುಖ ಸಂವಹನ ಸಂಪರ್ಕ ಸಾಧನವನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಈ ಸಾಧನದಲ್ಲಿರುವ ಬ್ಯಾಟರಿಗಳ ಚಾರ್ಜ್ ಖಾಲಿಯಾದಲ್ಲಿ ಬೋಟುಗಳಲ್ಲಿಯೇ ಸೋಲಾರ್ ಮೂಲಕ ಅವುಗಳನ್ನು ರಿಚಾರ್ಜ್ ಮಾಡಿಕೊಳ್ಳಲು ಸಾಧ್ಯವಾಗುವಂತಹ ಯತ್ನಗಳ ಬಗ್ಗೆ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಸಚಿವರು ಹೇಳಿದರು.
ಉಪ್ಪು ನೀರಿನಲ್ಲಿ ಸೋಲಾರ್ ಪ್ಯಾನಲ್ಗಳು ಸೂಕ್ತವಾಗಿ ಕಾರ್ಯನಿರ್ವಹಿಸುವುದಿಲ್ಲ ಹಾಗೂ ಬಾಳಿಕೆಯೂ ಬರುವುದಿಲ್ಲ. ಹಾಗಾಗಿ ಪರ್ಯಾಯ ಕ್ರಮಗಳನ್ನು ಪತ್ತೆ ಮಾಡಲು ಚಿಂತಿಸಲಾಗಿದೆ, ಬೋಟ್ಗಳ ಮೇಲೆಯೆ ಕವಚದಂತಹ ಸೋಲಾರ್ ಫಲಕಗಳನ್ನು ಅಳವಡಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುವುದು ಎಂದ ಸಚಿವರು ಈ ಸಾಧನಗಳಲ್ಲಿರುವ ಕಂಡುಬಂದಿರುವ ಕೆಲವು ತಾಂತ್ರಿಕ ದೋಷಗಳನ್ನು ಸರಿಪಡಿಸಲು ತಜ್ಞರ ಸಮಿತಿಯೊಂದನ್ನು ರಚಿಸಿಕೊಂಡು ಅವುಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮೀನುಗಾರ ಸ್ನೇಹಿಯನ್ನಾಗಿಸಲಾಗುವುದು ಎಂದರು.
ಸ್ಕೈಲೋ ಅಥವಾ ಇಸ್ರೋ ಆಗಲಿ ಯಾವುದೇ ಸಂಸ್ಥೆ ತಯಾರಿಸಿದ ದ್ವಿಮುಖ ಸಂವಹನ ಸಂಪರ್ಕ ಸಾಧನಕ್ಕೆ ಗ್ಯಾರಂಟಿ ಇರಬೇಕು, ಆ ಯಂತ್ರದ ಸರ್ವಿಸ್ ಮಾಡಿಕೊಡುವ ಬಗ್ಗೆಯೂ ಖಚಿತತೆ ಇರಬೇಕು ಎಂದ ಸಚಿವರು, ಮೀನುಗಾರರಿಗೆ ಇದೀಗ 1.12 ಲಕ್ಷ ಕೆ.ಎಲ್. ಡೀಸೆಲ್ ಸಬ್ಸಿಡಿ ಈಗಾಗಲೇ ನೀಡಲಾಗುತ್ತಿದೆ. ಅದನ್ನು 1.50 ಲಕ್ಷ ಕೆ.ಎಲ್ ಗೆ ವಿಸ್ತರಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಗುರುವಾರ ಚರ್ಚಿಸಲಾಗುವುದು ಎಂದು ಸಚಿವ ಅಂಗಾರ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾತನಾಡಿ ದ್ವಿಮುಖ ಸಂವಹನ ಸಂಪರ್ಕ ಸಾಧನದಲ್ಲಿ ಕಂಡುಬಂದಿರುವ ದೋಷಗಳನ್ನು ಸರಿಪಡಿಸಲು ತಾಂತ್ರಿಕ ನಿಪುಣರ ಸಮಿತಿಯೊಂದನ್ನು ರಚಿಸಲಾಗುವುದು. ಆ ಸಮಿತಿಯು ಸಾಧಕ-ಬಾಧಕಗಳನ್ನು ಅರಿತು ನ್ಯೂನ್ಯತೆಗಳನ್ನು ಸರಿಪಡಿಸಿ ಮೀನುಗಾರಿಕಾ ಇಲಾಖೆಯ ನಿರ್ದೇಶಕರ ಮೂಲಕ ಫಲಾನುಭವಿಗಳಿಗೆ ಒದಗಿಸಲಾಗುವುದು ಎಂದು ಹೇಳಿದರು.
ಶಾಸಕರಾದ ವೇದವ್ಯಾಸ ಕಾಮತ್, ರಘುಪತಿ ಭಟ್, ರಾಜ್ಯ ಮೀನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಕರಾವಳಿ ಕಾವಲು ಪಡೆಯ ಡಿಐಜಿ ವೆಂಕಟೇಶ್, ಮೀನುಗಾರಿಕಾ ಇಲಾಖೆಯ ನಿರ್ದೇಶಕ ರಾಮಾಚಾರ್ಯ, ಉಪ ನಿರ್ದೇಶಕ ಹರೀಶ್ ಕುಮಾರ್, ಉಡುಪಿ ಜಿಲ್ಲಾ ಉಪನಿರ್ದೇಶಕ ಗಣೇಶ್, ಮಲ್ಪೆಮೀನುಗಾರರ ಸಂಘ, ಟ್ರಾಲ್ಬೋಟ್, ಪರ್ಸಿನ್ ಬೋಟ್ ಮೀನುಗಾರರ ಸಂಘ, ಆಳ ಸಮುದ್ರ ಮೀನುಗಾರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.







