ಗಣಕ ವಿಜ್ಞಾನಿ ಕೆಪಿ ರಾವ್ಗೆ ಡಾ.ಶಿವರಾಮ ಕಾರಂತರ ಬಾಲವನ ಪ್ರಶಸ್ತಿ

ಕೆಪಿ ರಾವ್
ಪುತ್ತೂರು: ಡಾ. ಶಿವರಾಮ ಕಾರಂತರ ಬಾಲವನ ಪ್ರಶಸ್ತಿಗೆ ಕಂಪ್ಯೂಟರ್ ವಿಜ್ಞಾನಿ ಕೆ.ಪಿ.ರಾವ್ ಕೀಲಿಮಣೆ ವಿನ್ಯಾಸ ತಜ್ಞ ಕಿನ್ನಿಕಂಬಳ ಪದ್ಮನಾಭ ರಾವ್(ಕೆ.ಪಿ.ರಾವ್) ಅವರನ್ನು ಆಯ್ಕೆ ಮಾಡಲಾಗಿದೆ. ಅ. 10 ಪುತ್ತೂರಿನ ಡಾ. ಶಿವರಾಮ ಕಾರಂತ ಬಾಲವನದಲ್ಲಿ ನಡೆಯಲಿರುವ ಕಾಂತರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗುವುದು ಎಂದು ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್ ತಿಳಿಸಿದ್ದಾರೆ.
ಅವರು ಬುಧವಾರರ ಸಂಜೆ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಅ. 10ರಂದು ಬಾಲವದಲ್ಲಿ ಡಾ. ಶಿವರಾಮ ಕಾರಂತರ ಜನ್ಮದಿನಾಚರಣೆ, ಪ್ರಶಸ್ತಿ ಪ್ರಧಾನ ಸಮಾರಂಭ, ನವೀಕೃತಗೊಂಡ ಡಾ. ಕಾರಂತರ ಬರೆಹದ ಮನೆ ಉದ್ಘಾಟನೆ ಹಾಗೂ ಟ. ಕಾರಂತರ ಕುರಿತ `ಬಾಲವದಲ್ಲಿ ಭಾರ್ಗವ' ಸಂಪಾದಿತ ಕೃತಿಯ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಪುತ್ತೂರಿನ ಹಿರಿಯ ಪತ್ರಕರ್ತ ಬಿ.ಟಿ. ರಂಜನ್ ಅವರಿಗೆ ಪತ್ರಿಕೋದ್ಯಮದ ಜೀವಮಾನದ ಸಾಧನೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಡಾ. ಕಾರಂತರ ಜನ್ಮ ದಿನಾಚರಣೆಯನ್ನು ಮೀನುಗಾರಿಕೆ, ಬಂದರು, ಒಳನಾಡು ಮತ್ತು ಜಲಸಾರಿಗೆ ಇಲಾಖೆಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವಎಸ್. ಅಂಗಾರ ಉದ್ಘಾಟಿಸಲಿದ್ದಾರೆ. ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವ ವಿ.ಸುನಿಲ್ ಕುಮಾರ್ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ನವೀಕೃತ ಬರೆಹದ ಮನೆಯನ್ನು ಉದ್ಘಾಟಿಸಲಿದ್ದಾರೆ.
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಂಪಾದಿತ ಕೃತಿ `ಬಾಲವನದಲ್ಲಿ ಭಾರ್ಗವ' ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದಾರೆ. ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್, ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಂಗಳೂರು ವಿವಿ ಕಾರಂತ ಅಧ್ಯಯನ ಪೀಠದ ಸದಸ್ಯರಾದ ವಿಶ್ರಾಂತ ಕನ್ನಡ ಪ್ರಾಧ್ಯಾಪಕಮ ಡಾ. ನರಸಿಂಹಮೂರ್ತಿ ಅವರು ಡಾ. ಕಾರಂತರ ಕುರಿತು ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮ ನಡೆಯುವ ದಿನದಂದು ಡಾ. ಶಿವರಾಮ ಕಾರಂತರ ಜ್ಞಾನಪೀಠ ಪ್ರಶಸ್ತಿಯನ್ನು ಪ್ರದರ್ಶನಕ್ಕೆ ಇಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಶಿವರಾಮ ಕಾರಂತರ ಬಾಲವನದ ವಿಶೇಷ ಕರ್ತವ್ಯಾಧಿಕಾರಿ ಡಾ. ಸುಂದರ್ ಕೇನಾಜೆ ಉಪಸ್ಥಿತರಿದ್ದರು.
ಪ್ರಶಸ್ತಿ ಪುರಸ್ಕೃತರ ಪರಿಚಯ
ಕೆ.ಪಿ. ರಾವ್ ಮೂಲತಃ ವಿಜ್ಞಾನಿಯಾಗಿರುವ ಕೆ.ಪಿ. ರಾವ್ ಅವರು ಮಂಗಳೂರಿನ ಕಿನ್ನಿಕಂಬಳದವರು. ಹೋಮಿ ಬಾಬಾ ಸೇರಿದಂತೆ ಹಲವು ವಿಜ್ಞಾನಿಗಳ ಜೊತೆ ಕೆಲಸ ಮಾಡಿರುವ ಅನುಭವಿ. ಭಾರತೀಯ ಭಾಷೆಗಳನ್ನು ಕಂಪ್ಯೂಟರ್ಗೆ ಅಳವಡಿಸುವ ಸಂಶೋಧನೆಯಲ್ಲಿ ಮೊದಲು ಸಿಂಧೂ ಲಿಪಿಯನ್ನು ಬಳಸಿ ಯಶಸ್ವಿಯಾದವರು. ಬಳಿಕ ಕನ್ನಡದ ಕೀ ಬೋರ್ಡ್ ರೂಪಿಸಿದರು. ಕನ್ನಡದ ಪ್ರಚಲಿತ ತಂತ್ರಜ್ಞಾನವಾದ ನುಡಿ ಸೇರಿದಂತೆ ಕನ್ನಡದ ಬಹುತೇಕ ಎಲ್ಲಾ ತಂತ್ರಾಂಶಗಳು ಕೆ.ಪಿ. ರಾಯರು ರೂಪಿಸಿದ ಕೀಲಿಮಣೆಯನ್ನು ಆಧಾರವಾಗಿಟ್ಟುಕೊಂಡು ಮುನ್ನಡೆದಿದೆ. ಕೆ.ಪಿ. ರಾವ್ ಕೀಲಿಮಣೆ ವಿನ್ಯಾಸಕ್ಕೆ ಕರ್ನಾಟಕ ಸರ್ಕಾರ ಆಧಿಕೃತ ಮಾನ್ಯತೆ ನೀಡಿದೆ. ಅವರು ಪ್ರಸ್ತುತ ನೂರಾರು ಸಾಫ್ಟ್ ವೇರ್ ತಂತ್ರಜ್ಞರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಪಾಣಿನಿ, ಪತಂಜಲಿಯಂತಹ ಸಂಸ್ಕೃತ ವ್ಯಾಕರಣ ಸೂತ್ರಕಾರರಿಂದ ತೊಡಗಿ ಆದುನಿಕ ಹಲವು ಅಧ್ಯಯನ ಶಿಸ್ತುಗಳಲ್ಲಿ ಆಸಕ್ತಿ ಹೊಂದಿರುವ ಕೆ.ಪಿ. ರಾಯರು ಇತ್ತೀಚೆಗೆ `ವರ್ಣಕ' ಎನ್ನುವ ಕಾದಂಬರಿ ಬರೆದಿದ್ದಾರೆ. ಅವರ ಹಲವಾರು ಲೇಖನಗಳು, ಸಂದರ್ಶನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ನಾಡೋಜ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಕೆ.ಪಿ. ರಾವ್ ಈಗಾಗಲೇ ಪಡೆದುಕೊಂಡಿದ್ದಾರೆ.
ಬಿ.ಟಿ. ರಂಜನ್
ಪುತ್ತೂರಿನ ಹಿರಿಯ ಪತ್ರಕರ್ತರಾಗಿರುವ ಬಿ.ಟಿ. ರಂಜನ್ ಅವರು ಕಳೆದ 36 ವರ್ಷಗಳಿಂದ ಪತ್ರಿಕೋಧ್ಯಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 1985ರಲ್ಲಿ ಮುಂಗಾರು ಪತ್ರಿಕೆಯ ವರದಿಗಾರರಾಗುವ ಮೂಲಕ ಪತ್ರಿಕಾ ರಂಗಕ್ಕೆ ಕಾಲಿರಿಸಿದ್ದರು. ಬಳಿಕ ಮಂಗಳೂರು ಮಿತ್ರ, ಹೊಸದಿಗಂತ, ಉದಯವಾಣಿ ಸೇರಿದಂತೆ ವಿವಿಧ ಪತ್ರಿಕೆಯಗಳಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರು.
ಫೋಟೋ:29ಪಿಟಿಆರ್-ಕೆ.ಪಿ. ರಾವ್, ಬಿ.ಟಿ. ರಂಜನ್







