ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡುವ ಟ್ವೀಟ್ ಸುಳ್ಳು ಪ್ರಚಾರವಾಗಿದೆ: ಭಾರತದ ರಾಯಭಾರಿ ಕಚೇರಿ

ಹೊಸದಿಲ್ಲಿ, ಸೆ.29: ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ನೀಡುವ ಅರೆಬಿಕ್ ಟ್ವಿಟರ್ ಹ್ಯಾಶ್ಟ್ಯಾಗ್ ಬಗ್ಗೆ ಸುಮಾರು 1 ವರ್ಷದ ಬಳಿಕ ಎಚ್ಚರಿಕೆ ನೀಡಿರುವ ಖತರ್ನಲ್ಲಿನ ಭಾರತೀಯ ರಾಯಭಾರಿ ಕಚೇರಿ, ಇದು ಭಾರತದ ವಿರುದ್ಧದ ಸುಳ್ಳುಪ್ರಚಾರವಾಗಿದೆ ಎಂದು ಪ್ರತಿಕ್ರಿಯಿಸಿದೆ.
ಸಾಮಾಜಿಕ ಮಾಧ್ಯಮದ ಮೂಲಕ ಭಾರತದ ಬಗ್ಗೆ ಸುಳ್ಳು ಸುದ್ಧಿ ಪ್ರಚಾರ ಮಾಡಿ ದ್ವೇಷತ್ವ ಮತ್ತು ಅಸಾಮರಸ್ಯ ಹರಡುವ ದುರುದ್ದೇಶಪೂರಿತ ಪ್ರಯತ್ನ ನಡೆಯುತ್ತಿದೆ ಎಂದು ಖತರ್ನಲ್ಲಿನ ಭಾರತೀಯ ದೂತಾವಾಸ ಮಂಗಳವಾರ ಟ್ವೀಟ್ ಮಾಡಿದೆ. ಇಂತಹ ಸುಳ್ಳು ಸುದ್ಧಿ, ಪ್ರಚಾರ, ತಿರುಚಿದ ವೀಡಿಯೊಗಳನ್ನು ನಂಬಿ ಮೋಸಹೋಗದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು. ಎಲ್ಲಾ ಭಾರತೀಯ ಪ್ರಜೆಗಳೂ ಏಕತೆ ಮತ್ತು ಸಾಮರಸ್ಯ ಕಾಪಾಡಿಕೊಳ್ಳಬೇಕು ಎಂದು ಟ್ವೀಟ್ನಲ್ಲಿ ತಿಳಿಸಲಾಗಿದೆ.
ಸುಮಾರು 15 ನಿಮಿಷದ ಬಳಿಕ ಇದೇ ಟ್ವೀಟ್ ಅನ್ನು ಅರೆಬಿಕ್ನಲ್ಲೂ ಮಾಡಲಾಗಿದೆ. ಬಾಯ್ಕಿಟ್ ಇಂಡಿಯನ್ ಪ್ರಾಡಕ್ಟ್ಸ್(ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಿ) ಎಂಬ ಟ್ವಿಟರ್ ಟ್ರೆಂಡ್ ಖತರ್ನಲ್ಲಿ ಅಗ್ರ ಟ್ವಿಟರ್ ಟ್ರೆಂಡ್ಗಳಲ್ಲಿ ಒಂದಾಗಿದೆ. ಧಾರ್ಮಿಕ ಮತಭೇದದ ಬೀಜ ಬಿತ್ತುವ ಪ್ರಯತ್ನಗಳ ವಿರುದ್ಧ ಎಚ್ಚರಿಕೆಯಿಂದ ಇರುವಂತೆ 2020ರಲ್ಲಿ ಕೊಲ್ಲಿರಾಷ್ಟ್ರಗಳಲ್ಲಿನ ಹಲವು ಭಾರತೀಯ ನಿಯೋಗಗಳು ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ರವಾನಿಸಿದ್ದವು.
ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ಕೆಲವು ಭಾರತೀಯರು ಇಸ್ಲಾಮೊಫೋಬಿಕ್(ಇಸ್ಲಾಂ ಅಥವಾ ಮುಸ್ಲಿಮರ ವಿರುದ್ಧ ಪೂರ್ವಾಗ್ರಹ ಪೀಡಿತ ಭಾವನೆ) ಪೋಸ್ಟ್ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡಿದ ಪ್ರಕರಣಗಳನ್ನು ಅರಬ್ನ ಟ್ವಿಟರ್ ಬಳಕೆದಾರರು ಉಲ್ಲೇಖಿಸಿದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ದಿಲ್ಲಿಯಲ್ಲಿ ನಡೆದಿದ್ದ ತಬ್ಲೀಗಿ ಜಮಾತ್ ಅಧಿವೇಶನವನ್ನು ಕೊರೋನ ಹರಡುವ ಹಾಟ್ಸ್ಪಾಟ್ ಎಂದು ಭಾರತ ಸರಕಾರ ಹಾಗೂ ಮಾಧ್ಯಮದ ಒಂದು ವಿಭಾಗ ಬಣ್ಣಿಸಿರುವುದನ್ನು ಖಂಡಿಸಿ ಕೊಲ್ಲಿ ರಾಷ್ಟ್ರಗಳಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಅಸ್ಸಾಂನ ದರಾಂಗ್ನಲ್ಲಿ ಜನರನ್ನು ತೆರವುಗೊಳಿಸುವ ಸಂದರ್ಭ ಪೊಲೀಸರು ಗುಂಡುಹಾರಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಪ್ರಕರಣದ ವೀಡಿಯೊ ವೈರಲ್ ಆಗಿತ್ತು. ಬಾಯ್ಕಿಟ್ ಇಂಡಿಯನ್ ಪ್ರೊಡಕ್ಟ್ಸ್ ಟ್ವೀಟ್ನ ಹ್ಯಾಶ್ಟ್ಯಾಗ್ ಮಂಗಳವಾರ ರಾತ್ರಿಯವರೆಗೆ ಖತರ್ನ ಅಗ್ರ 5 ಟ್ವಿಟರ್ ಹ್ಯಾಶ್ಟ್ಯಾಗ್ನ ಪೈಕಿ 2ನೇ ಸ್ಥಾನದಲ್ಲಿದ್ದರೆ ಬುಧವಾರವೂ ಅಗ್ರ 5ರೊಳಗೆ ಸ್ಥಾನ ಪಡೆದಿತ್ತು. ಬಹುತೇಕ ಪೋಸ್ಟ್ಗಳಲ್ಲಿ ‘ಭಾರತ ಸರಕಾರ ಭಾರತೀಯ ಮುಸ್ಲಿಮರಿಗೆ ಕಿರುಕುಳ ನೀಡುತ್ತಿರುವದರಿಂದ ಭಾರತದ ಉತ್ಪನ್ನಗಳನ್ನು ಬಹಿಷ್ಕರಿಸಿ’ ಎಂದು ಕರೆನೀಡಲಾಗಿದೆ.