ದ್ವೇಷದ ರಾಜಕಾರಣ, ಅನೈತಿಕ ಪೊಲೀಸ್ಗಿರಿ ವಿರುದ್ಧ ಅಭಿಯಾನ: ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ

ಮಂಗಳೂರು, ಅ.1: ದ.ಕ.ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ದ್ವೇಷದ ರಾಜಕಾರಣ ಮತ್ತು ಅನೈತಿಕ ಪೊಲೀಸ್ ಗಿರಿ ಹೆಚ್ಚುತ್ತಿದೆ. ಇದರ ವಿರುದ್ಧ ಯುವಜನತೆ ಧ್ವನಿ ಎತ್ತಬೇಕಿದೆ. ಈ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ವತಿಯಿಂದ ಜಿಲ್ಲಾದ್ಯಂತ ಅಭಿಯಾನ ನಡೆಸಲಾಗುವುದು. ವರ್ಷದೊಳಗೆ ಸುಮಾರು 500ರಷ್ಟು ಯುವ ಜನರನ್ನು ಸಂವಿಧಾನದ ರಕ್ಷಕರನ್ನಾಗಿಸುವ ಗುರಿ ಹಾಕಲಾಗಿದೆ ಎಂದು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಹೇಳಿದ್ದಾರೆ.
ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದೊಂದು ವರ್ಷದಲ್ಲೇ 12 ಅನೈತಿಕ ಪೊಲೀಸ್ ಗಿರಿ ನಡೆದಿದೆ. ಶೈಕ್ಷಣಿಕ ಮತ್ತು ಆರೋಗ್ಯ ಹಾಗೂ ಧಾರ್ಮಿಕ ಟೂರಿಸಂ ಕೇಂದ್ರವಾಗಿರುವ ಮಂಗಳೂರಿಗೆ ಇದು ಕಪ್ಪುಚುಕ್ಕೆಯಾಗಿದೆ. ಜಿಲ್ಲಾ ಪೊಲೀಸ್ ಇಲಾಖೆಗೂ ಕಳಂಕವಾಗಿದೆ. ಹೊರ ಜಿಲ್ಲೆ, ಹೊರ ರಾಜ್ಯ, ದೇಶ-ವಿದೇಶದ ಸಾವಿರಾರು ಮಂದಿ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ವಿದ್ಯಾರ್ಥಿಗಳು ಮಾತ್ರವಲ್ಲ ಅವರ ಹೆತ್ತವರು/ಪೋಷಕರು ಕೂಡ ಆತಂಕ ಪಡುವ ಸಾಧ್ಯತೆ ಹೆಚ್ಚಿದೆ. ಬಂಡವಾಳ ಶಾಹಿಗಳು ಕೂಡ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದ್ದು, ಇದರಿಂದ ನಿರುದ್ಯೋಗ ತಾಂಡವಾಡುವ ಅಪಾಯವಿದೆ. ಹಾಗಾಗಿ ಪೊಲೀಸ್ ಇಲಾಖೆಯು ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.
ಸಮಾಜ ಘಾತುಕ ಶಕ್ತಿಗಳ ಈ ದುಷ್ಕೃತ್ಯದಿಂದ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದ ಜನರು ಬಲಿಪಶುಗಳಾಗುತ್ತಿದ್ದಾರೆ. ಚುನಾವಣೆ ಸಂದರ್ಭ ಈ ಶಕ್ತಿಗಳು ಅನೈತಿಕ ಪೊಲೀಸ್ ಗಿರಿ ಮಾಡಿ ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿದ್ದಾರೆ. ಇದನ್ನು ಯುವ ಜನತೆ ಅರ್ಥ ಮಾಡಿಕೊಳ್ಳಬೇಕಿದೆ. ಇನ್ನು ಪ್ರತಿ ತಿಂಗಳು ಯುವ ಕಾಂಗ್ರೆಸ್ 'ಸರ್ವೋದಯ ಸಂಕಲ್ಪ' ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು, ಪ್ರತಿ ಗ್ರಾಮದಿಂದ ಇಬ್ಬರಿಗೆ ತರಬೇತಿ ನೀಡಲಾಗುವುದು ಎಂದು ಲುಕ್ಮಾನ್ ಬಂಟ್ವಾಳ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ಸರ್ಫ್ರರಾಝ್ ನವಾಝ್, ಆಶಿತ್ ಪಿರೇರಾ, ಸೌಮ್ಯಲತಾ, ರಮಾನಂದ ಪೂಜಾರಿ, ಹಸನ್ ಪಳ್ನೀರ್. ತೃಪ್ತಿ ಕೋಟ್ಯಾನ್, ನವೀದ್ ಅಕ್ತರ್, ಸುನೀಲ್ ಪೂಜಾರಿ, ಅಭಿಷೇಕ್ ಬೆಳ್ಳಿಪ್ಪಾಡಿ, ಎಸ್.ಕೆ. ಸೌಹಾನ್, ಹಕೀಂ ಕೊಕ್ಕಡ ಉಪಸ್ಥಿತರಿದ್ದರು.









