ಮೆಡಿಕಲ್ ಸೀಟ್ ವಂಚನೆ ಆರೋಪ: ಒಕ್ಕಲಿಗರ ಸಂಘದ ಮಾಜಿ ಸದಸ್ಯರ ವಿರುದ್ಧ ದೂರು

ಬೆಂಗಳೂರು, ಅ.1: ವೈದ್ಯಕೀಯ ಕೋರ್ಸ್ ಪ್ರವೇಶ ಸಂಬಂಧ ಲಕ್ಷಾಂತರ ರೂಪಾಯಿ ವಂಚಿಸಿರುವುದಾಗಿ ಆರೋಪಿಸಿ ಕಿಮ್ಸ್ ಆಡಳಿತ ಮಂಡಳಿ ಮಾಜಿ ಸದಸ್ಯರ ವಿರುದ್ಧ ಇಲ್ಲಿನ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿಮ್ಸ್ ಆಸ್ಪತ್ರೆಯ ಸಿಇಒ ಸಿದ್ದರಾಮಯ್ಯ ಎಂಬುವರು ನೀಡಿದ ದೂರಿನನ್ವಯ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷರಾದ ಕಾಳೇಗೌಡ, ಅಪ್ಪಾಜಿಗೌಡ, ಮಾಜಿ ನಿರ್ದೇಶಕ ನರೇಂದ್ರ ಬಾಬು ವಿರುದ್ಧ ಎಫ್ಐಆರ್ ದಾಖಲಾಗಿದೆ.
2014-2018ರ ಅವಧಿಯಲ್ಲಿ ವೈದ್ಯಕೀಯ ಕೋರ್ಸ್ಗಳ ಪ್ರವೇಶಾತಿ ವೇಳೆ ಸೀಟ್ ಹಂಚಿಕೆ ವಿಷಯದಲ್ಲಿ ಹಗರಣ ನಡೆದಿದೆ. ಮೆಡಿಕಲ್ ಸೀಟ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಕಿಮ್ಸ್ ವಿದ್ಯಾಸಂಸ್ಥೆಗೆ ನೀಡದೇ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
70 ಲಕ್ಷಕ್ಕೂ ಹೆಚ್ಚು ಹಣವನ್ನು ವಂಚಿಸಿರುವುದಾಗಿ ಆರೋಪಿಸಿರುವ ಸಿದ್ದರಾಮಯ್ಯ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದು, ಈ ಸಂಬಂಧ ತನಿಖೆ ನಡೆಸುವಂತೆ ಕೋರಿದ್ದಾರೆ.
Next Story





