ಮೋದಿ, ಶಾ ಮತ್ತು ಆರೆಸ್ಸೆಸ್ ಕುತಂತ್ರದಿಂದ ನನ್ನನ್ನು ಚುನಾವಣೆಯಲ್ಲಿ ಸೋಲಿಸಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ತಾವು ಜನರ ಹತ್ತಿರದಲ್ಲೇ ಇದ್ದು ಐದು ದಶಕಗಳ ಕಾಲ ಜನ ಸೇವೆ ಮಾಡಿಕೊಂಡಿದ್ದು ಜನರಿಂದ ದೂರವಿದ್ದು ಜೀವನ ನಡೆಸುವುದು ಅಸಾಧ್ಯ. ಆದರೆ, ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ತಾವು ಕಳೆದ ಒಂದು ವರ್ಷ ನಾಲ್ಕು ತಿಂಗಳಿನಿಂದಾಗಿ ಕಲಬುರಗಿಯ ಪುಣ್ಯಭೂಮಿಗೆ ಬರಲಾಗಲಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡರಾದ, ರಾಜ್ಯಸಭಾ ವಿರೋಧಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ತಾವು ತಾಯ್ನಾಡಿಗೆ ಬರದಿರುವ ಕಾರಣ ಬಿಚ್ಚಿಸಿಟ್ಟರು.
ನಗರದ ಜೈ ಭವಾನಿ ಫಂಕ್ಷನ್ ಪ್ಯಾಲೇಸ್ ನಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಇಷ್ಟು ದಿನ ನಾನು ಬರಲಾಗಲಿಲ್ಲ ದೇಶದ ಇಬ್ಬರು ಮಹಾನ್ ನಾಯಕರಾದ ಮಹಾತ್ಮಾ ಗಾಂಧಿ ಹಾಗೂ ಲಾಲ ಬಹಾದ್ದೂರ ಶಾಸ್ತ್ರಿ ಅವರ ಜಯಂತಿಯ ದಿನದಂದ ತಮ್ಮನ್ನೆಲ್ಲಾ ನೋಡುವ ಭಾಗ್ಯ ಇಂದು ಒದಗಿಬಂತು.
" ನನಗೆ ಹನ್ನೊಂದು ಸಲ ಜನ ಜಯಿಸಿ ಕಳಿಸಿದ್ದೀರಿ. ಯಾವುದೋ ಕಾರಣದಿಂದ ನಾನು ಈ ಸಲ ಸೋತೆ. ನನ್ನ ಸೋಲಿಗೆ ಕಲಬುರಗಿ ಯ ಜನ ಕಾರಣರಲ್ಲ. ಬದಲಿಗೆ ಮೋದಿ, ಶಾ ಹಾಗೂ ಆರೆಸ್ಸೆಸ್ ನವರು ಕುತಂತ್ರ ಮಾಡಿ ಸೋಲಿಸಿದರು" ಎಂದರು.
ಸಂಸತ್ತಿನಲ್ಲೇ ಮೋದಿ ಬಹಿರಂಗವಾಗಿ ನನ್ನ ಸೋಲಿನ ಬಗ್ಗೆ ಹೇಳಿದ್ದರು. ಅದರಂತೆ ನಡೆದುಕೊಂಡು ಸೋಲಿಸಿದರು. ಅವರು ವಾರ್ನ್ ಮಾಡಿದ ನಂತರ ನಮ್ಮವರು ಎಚ್ಚರಗೊಳ್ಳಬೇಕಿತ್ತು. ಆದರೆ, ಅವರ ಕುತಂತ್ರ ಅರಿಯಲು ವಿಫಲರಾದರು.
" ಇತ್ತೀಚಿಗೆ ಪಿಎಂ ಮನೆಯಲ್ಲಿ ನಡೆದ ಮಾನವ ಹಕ್ಕುಗಳ ಕುರಿತಾದ ಸಭೆಯಲ್ಲಿ ನಾನು ಭಾಗವಹಿಸಿದ್ದೆ. ಆಗ ಮೋದಿ ಹೇಳಿದ್ದೇನೆಂದರೆ ಖರ್ಗೆಜೀ ನೀವು ಹಲವಾರು ವರ್ಷದಿಂದ ಚುನಾವಣೆ ಗೆಲ್ಲುತ್ತಲೆ ಬಂದಿದ್ದೀರಲ್ಲ ಎಂದರು. ಆಗ ನಾನು ಉತ್ತರಿಸಿದೆ, ಮೋದಿಜೀ ನಾನು ನಲವತ್ತೊಂಬತ್ತು ವರ್ಷದಿಂದ ಚುನಾವಣೆ ಗೆಲ್ಲುತ್ತಲೇ ಬಂದಿದ್ದೆ ನೀವು ಅಡ್ಡಗಾಲು ಹಾಕದೇ ಇದ್ದಿದ್ದರೆ ಸತತ ಐವತ್ತು ಗೆದ್ದ ಜನಪ್ರತಿನಿಧಿ ಆಗುತ್ತಿದ್ದೆ ಎಂದು ಹೇಳಿರುವುದಾಗಿ ಹೇಳಿದ ಅವರು ರಾಜಕೀಯದ ಕುತಂತ್ರವನ್ನು ಅರಿಯಬೇಕು" ಎಂದರು.
ದಿನ ದಲಿತರು ಒಂದಾಗುವುದನ್ನು ಬಿಜೆಪಿ ಸಹಿಸುವುದಿಲ್ಲ. ಮೋದಿ- ಯೋಗಿ ಅವರು ದಲಿತರಿಗೆ ಹಿಂದುಳಿದವರು ಎಷ್ಟು ಜನರಿಗೆ ಅಧಿಕಾರ ಕೊಟ್ಟಿದ್ದಾರೆ? ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಎಲ್ಲ ಜನಾಂಗದ ನಾಯಕರಿಗೆ ಮಹತ್ವದ ಖಾತೆ ಕೊಡಲಾಗಿತ್ತು ಎಂದು ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯದ ಪರವಾಗಿದೆ ಎಂದರು.
ಆರ್ಟಿಕಲ್ 371 ಜೆ ದಂತಹ ಪ್ರಮುಖ ಬದಲಾವಣೆಯನ್ನು ಕಾಂಗ್ರೆಸ್ ತಂದಿದೆ. ಬಿಜೆಪಿ ಏನು ಮಾಡಿದೆ? ಮೋದಿ ಈಗಲೂ ನಮಗೆ ಕೇಳುತ್ತಾರೆ, " ಸತ್ತರ್ ಸಾಲ್ ತುಮ್ನೆ ಕ್ಯಾ ಕೀಯಾ " ಅಂತ " ಅರೇ ಹಮ್ನೆ ಇತ್ನೆ ಕಿಯಾ ಇಸ್ ಲಿಯೇ ತುಮ್ ಜಿಂದಾ ಹೈ " ನಮ್ಮ ಕಾಲದಲ್ಲಿ ಜಾರಿಗೆ ತಂದ ಯೋಜನೆಗಳಿಗೆ ತಡೆಹಿಡಿಯಲಾಗಿದೆ ಇಲ್ಲವೇ ಹೆಸರು ಬದಲಾಯಿಸಿದ್ದ ಮೋದಿ ಸಾಧನೆ. ಪೆಟ್ರೋಲ್ ಡಿಸೇಲ್, ಅಡುಗೆ ಅನಿಲ ಬೆಲೆ ಹೆಚ್ಚಾಗಿದೆ ಇದು ಬಿಜೆಪಿ ಹಾಗೂ ಮೋದಿ ಪ್ರಗತಿ ಎಂದು ಕುಟುಕಿದ ಅವರು ಬೆಲೆಗಳ ಹೆಚ್ಚಳ ಮಾಡಿರುವ ಮೋದಿ ಸರ್ಕಾರಕ್ಕೆ ಏಳು ವರ್ಷದಲ್ಲಿ 25 ಲಕ್ಷ ಕೋಟಿ ಲಾಭವಾಗಿದೆ.
ಬಿಜೆಪಿ ಸರ್ಕಾರದ ಜನವಿರೋಧಿ ಧೋರಣೆ ಅನುಸರಿಸುತ್ತಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಮೋದಿ ಹೇಳಿದ ಸುಳ್ಳಗಳನ್ನೇ ಸತ್ಯ ಎಂದು ಬಿಂಬಿಸಿ ಹರಿದಾಡಿಸಲಾಗುತ್ತದೆ. ನಾನು ಸಚಿವನಾಗಿದ್ದಾಗ ರೈಲ್ವೆ 14.50 ಲಕ್ಷ ನೌಕರರು ಕೆಲಸ ಮಾಡುತ್ತಿದ್ದರು ಈಗ 12.76 ಲಕ್ಷಕ್ಕೆ ಇಳಿದಿದೆ. ನಾಲ್ಕು ಇನ್ಶೂರನ್ಸ್ ಕಂಪನಿಗಳಿಗೆ ಹೊಸ ಕಾನೂನು ತಂದು ತೊಂದರೆ ಕೊಡಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ ಟೆಲಿಫೋನ್, ಬ್ಯಾಂಕ್, ಇನ್ಶೂರೆನ್ಸ್, ರೇಲ್ವೆ, ಬಿಇಎಲ್ ಕಂಪನಿಗಳಲ್ಲಿ ಸುಮಾರು ಮೂರು ಕೋಟಿ ಉದ್ಯೋಗ ಕಡಿತಗೊಳಿಸಲಾಗಿದೆ. ಇದನ್ನು ಸರ್ಕಾರವೇ ವ್ಯವಸ್ಥಿತವಾಗಿ ಮಾಡುತ್ತಿದೆ.
ಭೂ ಸಾಧಾರಣ ಕಾಯಿದೆ ತಂದು ಉಳುವವನೇ ಒಡೆಯ ಎಂದು ಮಾಡಿ ಭೂಮಿ ಇಲ್ಲದವರಿಗೆ ಭೂಮಿ ನೀಡಲಾಗಿತ್ತು. ಆದರೆ ಈಗ ಮೋದಿ ಅವರು ಯಾರು ಬೇಕಾದರೂ ಎಷ್ಟು ಬೇಕಾದರೂ ಭೂಮಿ ಖರೀದಿ ಮಾಡಲು ಅನುಕೂಲ ಮಾಡಿಕೊಟ್ಟುರು. ಶ್ರೀಮಂತರೇ ಹೆಚ್ಚು ಹೆಚ್ಚು ಭೂಮಿ ತೆಗೆದುಕೊಳ್ಳಲು ಅನುಮತಿಕೊಟ್ಟರು. ಇದರಿಂದಾಗಿ ಬಡವರು ಭೂಮಿ ಕಳೆದುಕೊಂಡು ಬಡವರಾದರು. ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದು ಯಾರು ಬೇಕಾದರೂ ಎಲ್ಲಿ ಬೇಕಾದರೂ ಖರೀದಿ ಮಾಡಲು ಅನುಮತಿಕೊಟ್ಟರು. ಇವೆಲ್ಲ ಮೋದಿ ಅವರ ಸಾಧನೆಗಳು ಜನಸಾಮಾನ್ಯರು, ರೈತರು ತೀವ್ರ ತೊಂದರೆಗೊಳಗಾದರು ಎಂದು ಟೀಕಿಸಿದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲ ಧರ್ಮದ ಜಾತಿಯ ಜನರು ಜೀವಿಸಬೇಕು ಆದರೆ ಆರೆಸ್ಸೆಸ್ ಸಿದ್ದಾಂತ ಇಂತದಕ್ಕೆಲ್ಲ ಅವಕಾಶ ನೀಡುವುದಿಲ್ಲ. ಇದನ್ನು ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕು. ಬುದ್ದ ಬಸವ ಅಂಬೇಡ್ಕರ್ ಅವರ ತತ್ವ ಸಿದ್ದಾಂತಕ್ಕೆ ವಿರೋಧ ನೀತಿಗಳ ಬಗ್ಗೆ ಜನ ಜಾಗೃತರಾಗಿರಬೇಕು. ತತ್ವಸಿದ್ದಾಂತಗಳ ವಿರೋಧ ಹೊಂದಿರುವುದಕ್ಕಾಗಿ ಬಿಜೆಪಿ, ಆರ್ ಎಸ್ ಎಸ್ ನವರು ಕುತಂತ್ರ ಮಾಡಿ ನನ್ನನ್ನು ಸೋಲಿಸಿದ್ದರು, ನೀವು ಸೋಲಿಸಿದ್ದಲ್ಲ.
ರಾಜ್ಯಸಭೆ ಸದಸ್ಯತ್ವ ಮುಗಿದ ನಂತರ ನೀವು ನಿವೃತ್ತರಾಗುತ್ತೀರಲ್ಲ ಎಂದು ಯಾರೋ ಒಬ್ಬರು ಕೇಳುತ್ತಿದ್ದರು. ನಾನು ಹೇಳೋದೇನೆಂದರೆ, ನಾನು ನನ್ನ ಕೊನೆಯ ಉಸಿರು ಇರುವವರೆಗೆ ಪಲಾಯನ ಮಾಡದೆ, ಜನರ ಸೇವೆಯೇ ಮಾಡುತ್ತೇನೆ. ಅದಕ್ಕೆ ರಾಜಕೀಯ ಅಧಿಕಾರದ ಅವಶ್ಯಕತೆ ಇಲ್ಲ.
ಸಾರ್ವಜನಿಕ ಇಲಾಖೆ, ಸಹಕಾರಿ ಸಂಘಗಳ ಸ್ಥಾಪನೆ, ಖಾಸಗಿ ವಲಯ, ಮೈಕ್ರೋ ಇಂಡಸ್ಟ್ರೀ ಹಾಗೂ ಮೈಕ್ರೋ ಎಕಾನಮಿ ಜವಾಹರಲಾಲ್ ನೆಹರು ಅವರ ಸಾಧನೆಯಾಗಿತ್ತು. ನಿಮ್ಮ ಸಾಧನೆ ಏನು? ಸಾರ್ವಜನಿಕ ವಲಯವನ್ನು ಖಾಸಗಿಯವರ ಪಾಲು ಮಾಡಲಾಗುತ್ತಿದೆ. ವೈಟ್ ರೆವ್ಯೂಲೇಷನ್ ಹಾಗೂ ಗ್ರೀನ್ ರೆವ್ಯೂಲೇಷನ್ ನಂತಹ ಪ್ರಮುಖ ನಿರ್ಧಾರಗಳು ನೆಹರು ಅವರ ಕೊಡುಗೆಯಾಗಿದೆ.
ಆರ್ಟಿಕಲ್ 371 ಜೆ ದಿಂದಾಗಿ ಇಂದು ವೈದ್ಯಕೀಯ ಹಾಗೂ ಇಂಜೀನಿಯರಿಂಗ್ ವಿದ್ಯಾರ್ಥಿಗಳಿಗೆ ಸೀಟು ಸಲೀಸಾಗಿ ಸಿಗುತ್ತಿವೆ. ಏಳು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಭಾಗದಲ್ಲಿ ನೇಮಕಾತಿ ನಡೆದರೆ ಶೇ. 8 ರಷ್ಟು ಉದ್ಯೋಗ ಮೀಸಲಾತಿ ಕೊಡಬೇಕು. ಇದನ್ನು ಕಾನೂನು ಮಾಡಿದ್ದು ಕಾಂಗ್ರೆಸ್ ಪಕ್ಷ, ಸೋನಿಯಾಗಾಂಧಿ. ಇಂತಹ ಮಹತ್ತರ ನಿರ್ಧಾರ ಮಾಡಿ ತನ್ನ ಕ್ಷೇತ್ರದ ಎಂಪಿ ಬೇರೆ ಯಾರಾದರು ಮಾಡಿದ್ದಾರೆಯೇ? ಹಾಗೆ ಮಾಡಿದ್ದು ತೋರಿಸಿದರೆ ನಾನು ಇಂದೆ ರಾಜೀನಾಮೆ ಕೊಡುತ್ತೇನೆ ಎಂದು ಸವಾಲೆಸೆದರು.
ತೆಲಂಗಾಣದಲ್ಲಿ ಆರ್ಟಿಕಲ್ 371 ಡಿ ತರಬೇಕಾದರೆ ಜನರು ಗುಂಡೇಟು ತಿನ್ನಬೇಕಾಯಿತು, ರಕ್ತಹರಿಸಬೇಕಾಯಿತು. ಆದರೆ ನಮ್ಮಲ್ಲಿ ಯಾರು ಹಾಗೆ ಮಾಡಿದ್ದಾರೆ? ಒಂದೇ ಒಂದು ಪ್ರತಿಭಟನೆ ಆಗದೆ ಆರ್ಟಿಕಲ್ 371 ಜೆ ಜಾರಿಗೆ ಬಂದಿದೆ ಎಂದರು.
ಇಂದು ದೇಶದಲ್ಲಿ ಮುಕ್ತವಾದ ಸ್ವಾತಂತ್ರ್ಯ ಯಾರಿಗಿದೆ? ಪತ್ರಿಕೆಯವರ ಸ್ವಾತಂತ್ರ್ಯ ಕಿತ್ತುಕೊಳ್ಳಲಾಗಿದೆ. ಪೆಗಾಸಸ್ ನಂತ ಸಂಸ್ಥೆಯಿಂದ ಗೂಡಚರ್ಯೆ ನಡೆಸಲಾಗುತ್ತಿದೆ. ಅದರಲ್ಲಿ ಪತ್ರಿಕೆಯವರು, ರಾಜಕಾರಣಿಗಳು ಅಧಿಕಾರಿಗಳು ಜಡ್ಜ್ ನಂತವರೂ ಕೂಡಾ ಗೂಡಚರ್ಯೆಗೆ ಒಳಗಾಗಬೇಕಾಗಿದೆ. ಇದು ಮೋದಿಯ ಜನಪರ ಆಡಳಿತ. ಇದೆಲ್ಲ ಜನರಿಗೆ ಅರ್ಥವಾಗುತ್ತಿಲ್ಲ. ಇಷ್ಟೆಲ್ಲ ಆದರೂ ಕೂಡಾ ಮೋದಿ, ಮೋದಿ, ಮೋದಿ ಎನ್ನುತ್ತಿದ್ದಾರೆ ಎಂದರು.
ತತ್ವಸಿದ್ದಾಂತದ ಮೇಲೆ ನಾನು ರಾಜಕಾರಣ ಮಾಡುತ್ತೇನೆ. ಕೊನೆಯ ಉಸಿರು ಇರುವವರೆಗೆ ನಾನು ಜನರ ಪರ ಹೋರಾಡುತ್ತಲೇ ಇರುತ್ತೇನೆ. ನಿವೃತ್ತಿಯಾಗುವ ಮಾತೇ ಇಲ್ಲ. ನಮ್ಮ ಕಾಂಗ್ರೆಸ್ ಪಕ್ಷವನ್ನ ಮುಗಿಸುವುದು ಸಾಧ್ಯವೇ ಇಲ್ಲ ಎಂದರು.
ನಡುನಡುವೆ ಉರ್ದು ಶಾಹರಿ ಹೇಳುವ ಮೂಲಕ ತಮ್ಮ ಪಕ್ಷದ ಸಿದ್ದಾಂತ, ರಾಜಕೀಯ ಹೋರಾಟ ಬಗ್ಗೆ ಹೇಳಿದ್ದಲ್ಲದೇ ಯುವ ಜನರಿಗೆ ಜಾತ್ಯಾತೀತ ತತ್ವದ ಬಗ್ಗೆ ತಿಳಿ ಹೇಳಿದರು.
ವೇದಿಕೆಯ ಮೇಲೆ ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಮುಖ್ಯ ಸಚೇತಕ ಹಾಗೂ ಶಾಸಕರಾದ ಡಾ ಅಜಯ್ ಸಿಂಗ್, ಶಾಸಕರಾದ ಕನೀಜ್ ಫಾತೀಮಾ, ಶರಣಬಸಪ್ಪಗೌಡ ದರ್ಶನಾಪುರ, ರಾಜಶೇಖರ್ ಪಾಟೀಲ್, ಎಂ. ವೈ . ಪಾಟೀಲ್, ಮಾಜಿ ಸಚಿವರಾದ ಡಾ ಶರಣಪ್ರಕಾಶ ಪಾಟೀಲ್, ಮಾಜಿ ಎಂ ಎಲ್ ಸಿ ಅಲ್ಲಮಪ್ರಭು ಪಾಟೀಲ್, ಶರಣಪ್ಪ ಮಟ್ಟೂರು, ತಿಪ್ಪಣ್ಣಪ್ಪ ಕಮಕನೂರು, ಮಾಜಿ ಶಾಸಕರಾದ ವೆಂಕಟಪ್ಪ ನಾಯಕ, ಜಿಪಂ, ತಾಪಂ ಸದಸ್ಯರು, ಮಹಾನಗರಪಾಲಿಕೆ ಸದಸ್ಯರು ಸೇರಿದಂತೆ ಮತ್ತಿತರು ಇದ್ದರು.







