ಮಂಗಳೂರು: ಪಿಎಚ್ಡಿ ವಿದ್ಯಾರ್ಥಿನಿಯ ಫೋಟೊ ಎಡಿಟ್ ಮಾಡಿ ಕಿರುಕುಳ ನೀಡುತ್ತಿದ್ದ ಪ್ರಾಧ್ಯಾಪಕ ಸೆರೆ

ಮಂಗಳೂರು, ಅ.2: ಪಿಎಚ್ಡಿ ವಿದ್ಯಾರ್ಥಿನಿಯ ಫೋಟೊ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಲ್ಲದೆ ಆಕೆಗೆ ಕರೆ ಮಾಡಿ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಪ್ರಾಧ್ಯಾಪಕನನ್ನು ನಗರ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಕೊಂಡೂರು ಸುಧೀರ್ ಕುಮಾರ್ ಬಂಧಿತ ಆರೋಪಿ.
2019ರಿಂದ ವಿದ್ಯಾರ್ಥಿನಿ ಮಂಗಳೂರಿನ ಪ್ರಾಧ್ಯಾಪಕಿಯೊಬ್ಬರ ಮಾರ್ಗದರ್ಶನದಲ್ಲಿ ಪಿಎಚ್ಡಿ ಮಾಡುತ್ತಿದ್ದರು. 2018ರಲ್ಲಿ ಪರಿಚಯವಾದ ಆರೋಪಿ ಡಾ. ಕೊಂಡೂರು ತನ್ನನ್ನು ಮಾರ್ಗದರ್ಶಕನನ್ನಾಗಿ ನೇಮಿಸುವಂತೆ ವಿದ್ಯಾರ್ಥಿನಿಯಲ್ಲಿ ಒತ್ತಾಯಿಸಿದ್ದ. ಅದಕ್ಕೆ ಒಪ್ಪಿ ವಿಶ್ವವಿದ್ಯಾನಿಲಯಕ್ಕೆ ಅನುಮತಿಗೆ ಕಳುಹಿಸಿದಾಗ ಆ ವ್ಯಕ್ತಿಗೆ ಅರ್ಹತೆಯಿಲ್ಲ ಎನ್ನುವ ಕಾರಣಕ್ಕೆ ಕೋರಿಕೆಯನ್ನು ನಿರಾಕರಿಸಲಾಗಿತ್ತು. ಇದಾದ ಬಳಿಕ ಈತ ವಿದ್ಯಾರ್ಥಿನಿಗೆ ಮತ್ತು ಮನೆಯವರಿಗೆ ಕಿರುಕುಳ ನೀಡಲು ಆರಂಭಿಸಿದ್ದ ಎನ್ನಲಾಗಿದೆ.
ವಿದ್ಯಾರ್ಥಿನಿಗೆ ತಿಳಿಯದಂತೆ ಆಕೆಯ ಭಾವಚಿತ್ರವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ ಎಂದು ಆರೋಪಿಸಿ ಮನೆಯವರು ನಗರದ ಸೈಬರ್ ಠಾಣೆಗೆ 2021ರ ಮಾರ್ಚ್ 10ರಂದು ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಆಂಧ್ರಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯದ ಷರತ್ತು ಬದ್ಧ ಜಾಮೀನು ಮೇಲೆ ಬಿಡುಗಡೆಗೊಳಿಸಲಾಗಿದೆ.







