ಶಕ್ತಿ ವಿದ್ಯಾ ಸಂಸ್ಥೆ: ಮಹಾತ್ಮ ಗಾಂಧಿ-ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

ಮಂಗಳೂರು, ಅ.2: ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆ, ಶಕ್ತಿ ಪದವಿ ಪೂರ್ವ ಕಾಲೇಜು ಮತ್ತು ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಜಂಟಿ ಆಶ್ರಯದಲ್ಲಿ ಮಹಾತ್ಮ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಆಗಮಿಸಿದ್ದ ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟೆಯ ಕನ್ನಡ ವಿಭಾಗ ಮುಖ್ಯಸ್ಥ ಡಾ. ಮಾಧವ್ ಎಂ.ಕೆ. ಮಾತನಾಡಿ, ಮಹಾತ್ಮ ಗಾಂಧಿಯವರು ನಡೆ, ನುಡಿ ಹಾಗೂ ಸತ್ಯತೆಯಿಂದ ರಾಷ್ಟ್ರಪಿತ ಸ್ಥಾನವನ್ನು ಪಡೆದರು. ದೇಶದಲ್ಲಿದ್ದ ಬಡತನಕ್ಕೋಸ್ಕರ ತಾನು ಐಶಾರಾಮಿ ಜೀವನ ನಡೆಸದೆ ಜನರ ಮಧ್ಯೆ ಇದ್ದು ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ದೇಶಕ್ಕೋಸ್ಕರ ಸ್ವಾತಂತ್ರ ಹೋರಾಟವನ್ನು ಮಾಡಿದರು ಎಂದರು.
ಗಾಂಧೀಜಿಯವರ ಸ್ವಾವಲಂಬಿ ಜೀವನ ಇಂದಿನ ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು. ಕಷ್ಟಪಟ್ಟು, ಇಷ್ಟಪಟ್ಟು ಓದಬೇಕು. ಯಾರೂ ಒತ್ತಡ ಹಾಕಿ ಓದಿಸಬಾರದು. ಸ್ವಾಲಂಬಿಯಾಗಿದ್ದಲ್ಲಿ ಜೀವನದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯವಿದೆ ಎಂದು ಅವರು ಹೇಳಿದರು. ಲಾಲ್ ಬಹದ್ದೂರ್ ಶಾಸ್ತ್ರಿಯವರ ಪ್ರಾಮಾಣಿಕತೆಯ ಜೀವನವನ್ನು ವಿದ್ಯಾರ್ಥಿಗಳಿಗೆ ಅರ್ಥಪೂರ್ಣವಾಗಿ ವಿವರಿಸಿದರು. ದೇಶದ ಸೈನಿಕರು ಮತ್ತು ರೈತರಿಗೆ ಸಮಾನವಾದ ಗೌರವವನ್ನು ಶಾಸ್ತ್ರಿಯವರು ನೀಡಿದರು ಎಂಬುದನ್ನು ನೆನಪಿಸಿದರು. ಅವರು ಪ್ರಧಾನಿಯಾಗಿದ್ದ ದೇಶವು ಪ್ರಗತಿಯತ್ತ ಮುನ್ನಡೆಯುವಂತೆ ಅವರು ಮಾಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ ನಾಯಕ್, ಗಾಂಧೀಜಿಯವರ ರಾಮರಾಜ್ಯದ ಕನಸು ನನಸಾಗಲು ವಿದ್ಯಾರ್ಥಿಗಳು ಅವರ ಪ್ರಾಮಾಣಿಕತೆಯ ದಾರಿಯಲ್ಲಿ ನಡೆದು ದೇಶದ ಋಣ ತೀರಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ದೇಶದ ಅಭಿವೃದ್ಧಿಗೆ ನಾವೆಲ್ಲರೂ ಈ ಮಹಾನೀಯರ ಜಯಂತಿಯ ದಿನದಂದು ಪಣ ತೊಡಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರರ ಮೇಶಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ರೈ, ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಚಾಲಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು.
ಶಕ್ತಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ. ರಾಜಾರಾಮ್ ರಾವ್ ಸ್ವಾಗತಿಸಿದರು. ಶಕ್ತಿ ರೆಸಿಡೆನ್ಶಿಯಲ್ ಶಾಲಾ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್ ವಂದಿಸಿದರು. ಅಧ್ಯಾಪಕಿ ದೀಪ್ತಿ ನಿರೂಪಿಸಿದರು. ಕನ್ನಡ ಅಧ್ಯಾಪಕ ಶರಣಪ್ಪ ಅತಿಥಿಗಳನ್ನು ಪರಿಚಯಿಸಿದರು.


















