ಅಖಿಲ ಭಾರತ ಬ್ಯಾರಿ ಪರಿಷತ್ ವತಿಯಿಂದ ಬ್ಯಾರಿ ಭಾಷಾ ದಿನಾಚರಣೆ

ಮಂಗಳೂರು: ಮಾತೃಭಾಷೆ- ಸಂಸ್ಕೃತಿಯನ್ನು ಯಾರು ಪ್ರೀತಿ ಮಾಡುತ್ತಾರೋ ಅಂತಹವರು ಇನ್ನೊಂದು ಭಾಷೆ-ಜನಾಂಗವನ್ನು ಪ್ರೀತಿಸುತ್ತಾರೆ. ಇಂತಹ ಪ್ರೀತಿಯಿಂದಲೇ ಸಮಾಜದಲ್ಲಿ ಶಾಂತಿ, ಸೌಹಾರ್ದತೆಯ ಬದುಕು ನಿರ್ಮಾಣಗೊಂಡಿದೆ ಎಂದು ರೆಡ್ ಕ್ರಾಸ್ ಸೊಸೈಟಿಯ ಗೌರವ ಕಾರ್ಯದರ್ಶಿ ಪ್ರಭಾಕರ ಶರ್ಮಾ ಹೇಳಿದರು. ಅವರು ಮಂಗಳೂರು ಶ್ರೀನಿವಾಸ ಹೋಟೆಲಿನಲ್ಲಿ ಅಖಿಲ ಭಾರತ ಬ್ಯಾರಿ ಪರಿಷತ್ ಏರ್ಪಡಿಸಿದ್ದ "ಬ್ಯಾರಿ ಬಾಸೆರೊ ನಾಲಾಚರಣೆ" ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಬ್ಯಾರಿ ಮುಂದಾಳು ಅಬ್ದುಲ್ ಖಾದರ್ ಕೊಣಾಜೆ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಜಿ.ಎಮ್. ಶಾಹುಲ್ ಹಮೀದ್ ಮೆಟ್ರೋ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಮಾತನಾಡಿ ಸಾವಿರಾರು ವರ್ಷಗಳ ಇತಿಹಾಸವಿರುವ ಬ್ಯಾರಿ ಭಾಷೆಗೆ ಮಾನ್ಯತೆ ನೀಡಿ ಗಜೆಟ್ ಪ್ರಕಟಣೆಯ ಮೂಲಕ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು 2013 ರ ಅಕ್ಟೋಬರ್ 03 ರಂದು ಅಸ್ತಿತ್ವಕ್ಕೆ ಬಂದಿದೆ. ಆದುದರಿಂದ ಅಕ್ಟೋಬರ್ 3 ನ್ನು ಬ್ಯಾರಿ ಭಾಷಾ ದಿನಾಚರಣೆಯನ್ನಾಗಿ ಆಚರಿಸುತ್ತಾ ಬಂದಿದ್ದೇವೆ. ಇದನ್ನು ಮುಂದಿನ ದಿನಗಳಲ್ಲಿ ಸಾರ್ವತ್ರಿಕವಾಗಿ ಶಾಲೆ, ಮದ್ರಸ ಮತ್ತು ಹಳ್ಳಿ ಹಳ್ಳಿಗಳಲ್ಲಿ ಆಚರಿಸುವಂತಾಗಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆಯ ಸದಸ್ಯ ಅಬ್ದಲ್ ಲತೀಫ್ ಕಂದಕ, ಬ್ಯಾರಿ ವಾರ್ತೆಯ ಸಂಪಾದಕ ಬಶೀರ್ ಬೈಂಕಪಾಡಿ, ಮೀಫ್ ಅಧ್ಯಕ್ಷರಾದ ಮೂಸಬ್ಬ ಪಿ.ಬ್ಯಾರಿ, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಬಂಟ್ವಾಳ ಪುರಸಭಾ ಮಾಜಿ ಸದಸ್ಯ ರಿಯಾಝ್ ಬಂಟ್ವಾಳ, ಸಾಹಿತಿ ಪೇರೂರು ಜಾರು, ಇಸ್ಮಾಯಿಲ್ ಪೆರಿಂಜೆ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಬ್ಯಾರಿ ಗಾದೆ ಹಾಗೂ ಪ್ರಬಂಧ ಸ್ಪರ್ಧೆಯ ವಿಜೇತರನ್ನು ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಜೆ.ಹುಸೇನ್ ಪುರಸ್ಕರಿಸಿದರು.
ಹಸನಬ್ಬ ಮೂಡುಬಿದಿರೆ, ಹುಸೈನ್ ಕಾಟಿಪಳ್ಳ, ಇಬ್ರಾಹಿಮ್ ಬಾತಿಷಾ ಇವರಿಂದ ಬ್ಯಾರಿ ಗಾಯನ ನಡೆಯಿತು. ಇಬ್ರಾಹಿಂ ಕೋಣಾಜೆ ಬ್ಯಾರಿ ಕವನ ವಾಚಿಸಿದರು.
ಸಂಸ್ಥೆಯ ಗೌರವಾಧ್ಯಕ್ಷ ಯೂಸುಫ್ ವಕ್ತಾರ್ ಸ್ವಾಗತಿಸಿ, ಇಂಜಿನಿಯರ್ ಮುಹಮ್ಮದ್ ಇಕ್ಬಾಲ್ ಬ್ಯಾರಿ ಸ್ತುತಿ ಗೀತೆ ಹಾಡಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಹಕ್ ಕಾರ್ಯಕ್ರಮ ನಿರೂಪಿಸಿದರು.











