ಮಲ್ಪೆ: ಹಣಕ್ಕಾಗಿ ಮೀನು ಲಾರಿ ಚಾಲಕನ ಅಪಹರಣ; ದೂರು

ಮಲ್ಪೆ, ಅ.3: ಮೀನು ವ್ಯವಹಾರದ ಹಣದ ವಿಚಾರವಾಗಿ ಮೀನು ಲಾರಿಯ ಚಾಲಕನನ್ನು ಕೇರಳದ ಕೆಲವರು ಅಪಹರಿಸಿ ಕೊಲೆ ಬೆದರಿಕೆಯೊಡ್ಡಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತ: ಚಿಕ್ಕಮಗಳೂರು ಕೊಪ್ಪದ ಸುಲೈಮಾನ್ ಎಂಬವರು ಮಲ್ಪೆಯಲ್ಲಿ ಮೀನು ಲಾರಿಯ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ಸೆ.30ರಂದು ಕೊಪ್ಪದ ಮನೆಯಿಂದ ಮಲ್ಪೆಗೆ ಆಗಮಿಸಿದ್ದರು. ಇವರು ಚಾಲಕ ಕೆಲಸದ ಜೊತೆಗೆ ಮೀನನ್ನು ಮಲ್ಪೆಯಲ್ಲಿ ಖರೀದಿಸಿ ಹೆಚ್ಚಿನ ದರದಲ್ಲಿ ಕೇರಳಕ್ಕೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಅ.2ರಂದು ಬೆಳಗ್ಗೆ ಸುಲೈಮಾನ್ ನ ಮೊಬೈಲ್ನಿಂದ ಅವರ ತಮ್ಮ ಶಂಶುದ್ದೀನ್ಗೆ ಸಮೀರ್ ಎಂಬಾತ ಕರೆ ಮಾಡಿ, ಸುಲೈಮಾನ್ ಮೀನು ವ್ಯವಹಾರದಲ್ಲಿ 15 ಲಕ್ಷ ರೂ. ನಮಗೆ ಕೊಡಬೇಕು. ಆ ಕಾರಣದಿಂದ ಅವನನ್ನು ಕೇರಳದ ಹನಸ್ ಮತ್ತು ಅವರ ಸಹೋದರರು ಅ.1ರಂದು ಮಲ್ಪೆಯಿಂದ ಅಪಹರಣ ಮಾಡಿದ್ದಾರೆ. ನೀವು ಬಂದು ಹಣ ಕೊಟ್ಟು ಕರೆದುಕೊಂಡು ಹೋಗಿ ಇಲ್ಲದಿದ್ದರೆ ಆತನನ್ನು ಕೊಂದು ಸಮುದ್ರಕ್ಕೆ ಬಿಸಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.





