ದತ್ತಪೀಠದಲ್ಲಿ ಅನಗತ್ಯವಾಗಿ ನಿರ್ಮಿಸಿರುವ ಘೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರಿಸಿ: ಸಚಿವ ಸುನೀಲ್ ಕುಮಾರ್

ಚಿಕ್ಕಮಗಳೂರು, ಅ.4: ದತ್ತಪೀಠದಲ್ಲಿ ಅನಗತ್ಯವಾಗಿ ನಿರ್ಮಾಣ ಮಾಡಿರುವ ಘೋರಿಗಳನ್ನು ನಾಗೇನಹಳ್ಳಿಗೆ ಸ್ಥಳಾಂತರ ಮಾಡಿ ದತ್ತಪೀಠದಲ್ಲಿ ಹಿಂದುಗಳಿಗೆ ಪೂಜೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಹೈಕೋರ್ಟ್ ನಿರ್ದೇಶನದ ಪರವಾಗಿ ನಾನು ಸೂಚನೆ ನೀಡುತ್ತೇನೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ದತ್ತ ಪೀಠಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ ಸಚಿವರು ಬಳಿಕ ಮಾಧ್ಯಮದರೊಂದಿಗೆ ಮಾತನಾಡುತ್ತಿದ್ದರು.
ದತ್ತಾತ್ರೇಯ ಪೀಠ ಬೇರೆ, ನಾಗೇನಹಳ್ಳಿ ಯಲ್ಲಿರುವ ಬಾಬಾಬುಡನ್ ದರ್ಗಾ ಬೇರೆ. ಈ ವಿಚಾರ ದಾಖಲೆಗಳಲ್ಲಿ ಸಾಬೀತಾಗಿದೆ. ದತ್ತಪೀಠದಲ್ಲಿ ಹಿಂದುಗಳ ಮೂಲಕವೇ ಪೂಜೆಯಾಗಬೇಕು ಎಂದು ಕೋರ್ಟ್ ನಿರ್ದೇಶನ ನೀಡಿದೆ. ಮುಸ್ಲಿಮರು ಕಣ್ತೆರೆದು ಇದನ್ನು ನೋಡಬೇಕು. ನಾಗೇನಹಳ್ಳಿಯ ದರ್ಗಾವನ್ನು ನೀವು ಅಭಿವೃದ್ಧಿ ಮಾಡಿ ಎಂದು ಸುನೀಲ್ ಕುಮಾರ್ ಹೇಳಿದರು.
ಹಿಂದಿನ ಸಿದ್ದರಾಮಯ್ಯ ಸರಕಾರ ದತ್ತ ಪೀಠಕ್ಕೆ ಸಂಬಂಧಿಸಿ ಹಿಂದೂಗಳ ವಿರುದ್ಧದ ನಿರ್ಣಯ ತೆಗೆದುಕೊಂಡಿತ್ತು. ಮುಜಾವರ್ ನೇಮಕ ಮಾಡಿ ಹಿಂದೂ ವಿರೋಧಿಯಾಗಿ ನಡೆದುಕೊಂಡಿತ್ತು. ಆದರೆ ಈಗ ದತ್ತಪೀಠದಲ್ಲಿ ಮುಜಾವರ್ ಪೂಜೆ ಮಾಡುವುದಲ್ಲ, ಹಿಂದೂ ಅರ್ಚಕರು ಪೂಜೆ ಮಾಡಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಸರಕಾರವು ಹಿಂದೂಗಳ ಭಾವನೆಗಳ ಪರವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.







