ಬೆಂಗಳೂರಿನ ಹಳೆಯ ಕಟ್ಟಡಗಳ ಬಗ್ಗೆ ಶೀಘ್ರ ತೀರ್ಮಾನ: ಸಿಎಂ ಬೊಮ್ಮಾಯಿ

ಬೆಂಗಳೂರು, ಅ. 4: ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಲಯಗಳ ತಗ್ಗು ಪ್ರದೇಶದ ಮನೆಗಳಿಗೆ ಮಳೆ ಮತ್ತು ಕೊಳಚೆ ನೀರು ನುಗ್ಗಿದ್ದು, ಆ ನೀರನ್ನು ತೆರವು ಮಾಡುವುದು ನಮ್ಮ ಮೊದಲ ಆದ್ಯತೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಹಳೆಯ ಕಟ್ಟಡಗಳ ಬಗ್ಗೆ ಶೀಘ್ರದಲ್ಲೇ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಏನು ಮಾಡಬೇಕೆಂಬ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಮಾಡಲಾಗುವುದು. ಮಳೆ ಹಾನಿಗೆ ತಕ್ಷಣ ಹಣಕಾಸಿನ ನೆರವನ್ನು ಸರಕಾರ ನೀಡಲಿದೆ.
ನಿನ್ನೆ ಮಲ್ಲತ್ತಹಳ್ಳಿ ಕೆರೆ, ಪಶ್ಚಿಮ ವಲಯದ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಮನೆಗಳಿಗೆ, ಸೇತುವೆಗಳಿಗೆ ನೀರು ನುಗ್ಗಿದೆ. ರಸ್ತೆಗಳ ಮೇಲೆ ನೀರು ಬಂದಿದೆ. ವಲಯ ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತರು ಸೂಚನೆ ನೀಡಿದ್ದಾರೆ. ಮಳೆ ನೀರು ತೆರವು ಮಾಡಲು ಹಾಗೂ ತಕ್ಷಣವೇ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಾನೇ ಖುದ್ದಾಗಿ ಗಮನಿಸ್ತಿದ್ದೇನೆ. ನಿನ್ನೆಯಿಂದ ಆಯುಕ್ತರ ಜತೆ ಸಂಪರ್ಕದಲ್ಲಿದ್ದೇನೆ. ರಸ್ತೆಗಳ ಮೇಲಿನ ನೀರು ತೆಗೆದು ವಾಹನ ಓಡಾಟ ಸುಗಮ ಮಾಡಬೇಕಿದೆ. ಮಳೆಯಿಂದ ವಾಹನಗಳ ಮೇಲೆ ಮರ, ಗಿಡ ಬಿದ್ದು ಜಖಂಗೊಂಡಿವೆ. ಕೆಲವೆಡೆ ಜಾನುವಾರುಗಳು ಮೃತಪಟ್ಟಿವೆ ಎಂದು ತಿಳಿಸಿದರು.







