ಬೆಂಗಳೂರು ಅಭಿವೃದ್ಧಿಯಲ್ಲಿ ಜನರ ಪಾಲ್ಗೊಳ್ಳುವಿಕೆ ಅಗತ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಅ. 4: ಬೃಹತ್ ಬೆಂಗಳೂರು ಮಹಾನಗರದ ಅಭಿವೃದ್ಧಿಯಲ್ಲಿ ಜನರ ಪಾಲ್ಗೊಳ್ಳುವಿಕೆ ಅಗತ್ಯ. ಸಾರ್ವಜನಿಕರ ಸಲಹೆ-ಸೂಚನೆಗಳನ್ನು ಪಡೆಯಲು ನಗರದ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸೋಮವಾರ ಮುಖ್ಯಮಂತ್ರಿ ನಗರೋತ್ಥಾನ ಯೋಜನೆಯಡಿ ರಾಜಾಜಿನಗರ ಕ್ಷೇತ್ರದಲ್ಲಿ ಶಿವನಗರ 1 ಮತ್ತು 8ನೆ ಮುಖ್ಯರಸ್ತೆ ಕೂಡುವ ಸ್ಥಳದಲ್ಲಿ 71.98 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಇಂಟಿಗ್ರೇಟೆಡ್ ಮೇಲ್ಸೇತುವೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನ ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ಮೊಬೈಲ್ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತಿದ್ದು, ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಶೀಘ್ರದಲ್ಲಿಯೇ ಎಲ್ಲ್ಲ 28 ಕ್ಷೇತ್ರಗಳಲ್ಲಿ ಪ್ರಾರಂಭ ಮಾಡಲಾಗುವುದು ಎಂದು ಹೇಳಿದರು.
ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಅತಿ ಹೆಚ್ಚು ಜನದಟ್ಟಣೆ ಇರುವ ಶಿವನಗರ ಸುತ್ತಮುತ್ತಲಿನ ಪ್ರದೇಶದಲ್ಲಿ ದಟ್ಟಣೆ ಕಡಿಮೆ ಮಾಡಲು ಇಂಟಿಗ್ರೇಟೆಡ್ ಮೇಲ್ಸೇತುವೆ ಬಹಳ ಸಹಕಾರಿಯಾಗಿದೆ. ಈ ಕ್ಷೇತ್ರದ ಬಡಾವಣೆಯನ್ನು ಒಟ್ಟುಗೂಡಿಸಿರುವ ಕೆಲಸ ಅಭಿನಂದನೀಯ. ತುಮಕೂರು-ಮೈಸೂರು ಹೆದ್ದಾರಿ ಹೈಡೆನ್ಸಿಟಿ ಕಾರಿಡಾರ್ ಆಗಿದ್ದು, ವೆಸ್ಟ್ ಆಫ್ ಕರ್ಡ್ ರೋಡ್ ಬಳಿ ವಾಹನ ದಟ್ಟಣೆ ಜಾಸ್ತಿ ಇರುತ್ತದೆ.
ಸೋಪ್ ಫ್ಯಾಕ್ಟರಿಯಿಂದ ಮೈಸೂರು ರಸ್ತೆ ತನಕ ತಡೆರಹಿತ ರಸ್ತೆ ನಿರ್ಮಾಣ ಮಾಡಲು ಬಸವೇಶ್ವರ ನಗರ ಲಿಂಕ್ ಮಾಡುವ ಮಹತ್ವದ ಕಾಮಗಾರಿಯನ್ನು ಶೀಘ್ರದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹಾರ ನೀಡಿದರೆ ಜನಸ್ಪಂದನೆಯುಳ್ಳ ಜನಪರ ಸರಕಾರ ಎನಿಸಿಕೊಳ್ಳುತ್ತದೆ. ನಗರ ಯೋಜನೆಯ ದೃಷ್ಟಿಕೋನ ಬದಲಾವಣೆ ಆಗಿ, ಬೆಂಗಳೂರಿನ ಯೋಜನಾಬದ್ಧ ಸಮಗ್ರ ಅಭಿವೃದ್ಧಿ ಹೊಂದಬೇಕು ಎಂದ ಅವರು, ಬಂಡವಾಳ ಹೂಡಿಕೆ, ಪ್ರವಾಸೋದ್ಯಮ ಮುಂತಾದ ಎಲ್ಲ ಕ್ಷೇತ್ರಗಳಿಗೂ ಬೆಂಗಳೂರನ್ನು ಗುರುತಿಸಲಾಗುತ್ತದೆ. ಆದುದರಿಂದ ಅಂತರರಾಷ್ಟ್ರೀಯ ಮಟ್ಟದ ಸೇವೆಯನ್ನು ನೀಡಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು. ಯೋಜನಾಬದ್ದ ಹಾಗೂ ಹೊಸ ಚಿಂತನೆಯ ಬೆಂಗಳೂರು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಶಾಸಕ ಸುರೇಶ್ ಕುಮಾರ್ ಕೆಳಹಂತದ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ನಾಗರಿಕ ಸೌಲಭ್ಯಗಳನ್ನು ಒದಗಿಸಿದ್ದಾರೆ. ಸಮಸ್ಯೆಗಳ ಪರಿಹಾರದ ಜೊತೆಗೆ ಅವರು ಸದಾ ಇರುತ್ತಾರೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜಕಾಲುವೆ, ಕರೆಗಳನ್ನು ನಿರ್ಮಿಸಿರುವುದು, ತಗ್ಗು ಪ್ರದೇಶದಲ್ಲಿ ನೀರು ಹರಿಯದಂತೆ ತಡೆಯುವುದು ಮುಂತಾದ ಕ್ರಮಗಳನ್ನು ಕೈಗೊಂಡು ಬೆಂಗಳೂರನ್ನು ಸುರಕ್ಷಿತ, ಸುಂದರ, ಹಸಿರು ನಗರವನ್ನಾಗಿಸಲು ಸರ್ಕಾರವು ಬದ್ಧವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ, ಕೆ.ಗೋಪಾಲಯ್ಯ, ಶಾಸಕ ಸುರೇಶ್ ಕುಮಾರ್, ಸಂಸದರಾದ ಪಿ.ಸಿ.ಮೋಹನ್, ಡಾ.ಎಲ್.ಹನುಮಂತಯ್ಯ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ ಉಪಸ್ಥಿತರಿದ್ದರು.







