ಮಂಗಳೂರು: ಉತ್ತರಪ್ರದೇಶ ರೈತರ ಹತ್ಯೆ ಖಂಡಿಸಿ ಪ್ರತಿಭಟನಾ ಪ್ರದರ್ಶನ

ಮಂಗಳೂರು : ಉತ್ತರಪ್ರದೇಶ ಲಖಿಂಪುರ್ ಬೇರಿ ಜಿಲ್ಲೆಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಸಚಿವರ ಬೆಂಗಾವಲು ವಾಹನ ಹರಿಸಿ 4 ಮಂದಿ ರೈತರ ಹತ್ಯೆ ಮಾಡಿರುವುದನ್ನು ಖಂಡಿಸಿ, ವಿವಿಧ ರೈತ ಕಾರ್ಮಿಕ ದಲಿತ ಸಂಘಟನೆಗಳ ಜಂಟಿ ನೇತ್ರತ್ವದಲ್ಲಿ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ರಾಜ್ಯ ನಾಯಕರಾದ ರವಿಕಿರಣ್ ಪೂನಚ, ರೈತ ವಿರೋಧಿಯಾದ ಕೃಷಿ ಕಾಯಿದೆಗಳ ವಿರುದ್ಧ ಕಳೆದ 10 ತಿಂಗಳಿನಿಂದ ದೇಶದ ರೈತರು ಹೋರಾಟದಲ್ಲಿ ತೊಡಗಿದ್ದರೂ ಕನಿಷ್ಠ ರೈತರ ಅಹವಾಲನ್ನು ಆಲಿಸಲು ಸಿದ್ಧವಿಲ್ಲದ ನರೇಂದ್ರ ಮೋದಿ ಸರಕಾರವು ರೈತ ಹೋರಾಟವನ್ನು ಅಪಹಾಸ್ಯ ಮಾಡುತ್ತಿದೆ. ಮಾತ್ರವಲ್ಲದೆ ಹೋರಾಟದ ಹಾದಿಯನ್ನು ತಪ್ಪಿಸಲು ಹಿಂಸೆಗೆ ಪ್ರಚೋದಿಸುವ ದುರುದ್ದೇಶದಿಂದಲೇ ಕೇಂದ್ರ ಸಚಿವರ ಬೆಂಗಾವಲು ವಾಹನ ರೈತರ ಮೇಲೆಯೇ ಹರಿದು ರೈತರನ್ನು ಹತ್ಯೆ ನಡೆಸಿದ್ದು, ಇದನ್ನು ಖಂಡಿಸಲೇಬೇಕಾಗಿದೆ ಎಂದು ಹೇಳಿದರು.
ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ, ಸ್ವಾತಂತ್ರ್ಯ ಚಳುವಳಿಯ ಬಳಿಕ ದೀರ್ಘಕಾಲದ ಐತಿಹಾಸಿಕ ಹೋರಾಟವಾಗಿ ಹೊರಹೊಮ್ಮಿದ ರೈತರ ಹೋರಾಟವು ದೇಶ ಉಳಿಸುವ ದೇಶಪ್ರೇಮಿ ಹೋರಾಟವಾಗಿ ಪರಿವರ್ತನೆ ಗೊಂಡಿದೆ. ಇಂತಹ ರೈತರ ಹೋರಾಟವನ್ನು ವಿರೋಧಿಸುವ, ಅಪಹಾಸ್ಯ ಮಾಡುವ,ವಿನಾಃ ಕಾರಣ ಅಪಪ್ರಚಾರ ಮಾಡುವವರು ನಿಜಕ್ಕೂ ದೇಶದ್ರೋಹಿಗಳು ಎಂದರು.
ಪ್ರತಿಭಟನೆಯನ್ನು ಉದ್ದೇಶಿಸಿ ರೈತ ಸಂಘಟನೆಗಳ ಮುಖಂಡರಾದ ಕ್ರಷ್ಣಪ್ಪ ಸಾಲ್ಯಾನ್, ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡೀಸ್, ರೆನ್ನಿ ಡಿಸೋಜ, ಡಿವೈಎಫ್ಐ ನಾಯಕರಾದ ಸಂತೋಷ್ ಬಜಾಲ್ ಮೊದಲಾದವರು ಮಾತನಾಡಿದರು.
ಈ ಹೋರಾಟದಲ್ಲಿ ವಿವಿಧ ರೈತ ಸಂಘಟನೆಗಳ ಮುಖಂಡರಾದ ರಾಮಣ್ಣ ವಿಟ್ಲ, ವಾಸುದೇವ ಉಚ್ಚಿಲ್, ಶೇಖರ್ ಕುತ್ತಾರ್, ಶಾಹುಲ್ ಹಮೀದ್, ಶಬೀರ್ ಅಹಮ್ಮದ್, ಜಾತ್ಯಾತೀತ ಜನತಾದಳದ ಜಿಲ್ಲಾ ನಾಯಕರಾದ ಸುಮತಿ ಎಸ್ ಹೆಗ್ಢೆ,ಅಲ್ತಾಪ್ ತುಂಬೆ, ಸಿಐಟಿಯು ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು, ಡಿವೈ ಎಫ್ಐ ನಾಯಕರಾದ ನವೀನ್ ಕೊಂಚಾಡಿ, ಜಗದೀಶ್ ಬಜಾಲ್, ನಿತಿನ್ ಬಂಗೇರ, ನಿತಿನ್ ಕುತ್ತಾರ್, ಸಾಮಾಜಿಕ ಚಿಂತಕರಾದ ಪ್ರಮೀಳಾ ದೇವಾಡಿಗ ಮುಂತಾದವರು ಭಾಗವಹಿಸಿದ್ದರು.









