42ನೇ ರಂಗಭೂಮಿ ನಾಟಕ ಸ್ಪರ್ಧೆಗೆ ಅರ್ಜಿ ಆಹ್ವಾನ
ಉಡುಪಿ, ಅ.5:ರಾಜ್ಯದ ಹೆಸರಾಂತ ಹವ್ಯಾಸಿ ನಾಟಕ ಸಂಸ್ಥೆ ರಂಗಭೂಮಿ ಉಡುಪಿ ತನ್ನ 56ನೇ ವರ್ಷದಲ್ಲಿ ಇದೇ ಡಿಸೆಂಬರ್ ತಿಂಗಳ 3ನೇ ವಾರದಲ್ಲಿ ಡಾ.ಟಿ.ಎಂ.ಎ.ಪೈ, ಮಲ್ಪೆ ಮಧ್ವರಾಜ್ ಮತ್ತು ಎಸ್.ಎಲ್. ನಾರಾಯಣ ಭಟ್ ಸ್ಮಾರಕ ರಾಜ್ಯ ಮಟ್ಟದ 42ನೇ ಕನ್ನಡ ನಾಟಕ ಸ್ಪರ್ಧೆಯನ್ನು ಕೋವಿಡ್-19 ಸಂಬಂಧಿಸಿದ ಸರಕಾರದ ಮಾರ್ಗಸೂಚಿಗೆ ಅನುಗುಣವಾಗಿ ನಡೆಸಲಿದೆ.
ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ತಂಡಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕಾಸರಗೋಡು ಸಹಿತ ಕರ್ನಾಟಕ ರಾಜ್ಯದ ಯಾವುದೇ ಪ್ರದೇಶದ ಹವ್ಯಾಸಿ ನಾಟಕ ತಂಡಕ್ಕೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ನಾಟಕಗಳು ಕನಿಷ್ಠ ಒಂದೂವರೆ ಗಂಟೆಯಿಂದ ಗರಿಷ್ಠ ಎರಡು ಗಂಟೆ 15 ನಿಮಿಷಗಳ ಅವಧಿಯಲ್ಲಿರಬೇಕು. ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಜಾನಪದ ಅಥವಾ ಯಾವುದೇ ಪ್ರಕಾರದ ನಾಟಕ ಪ್ರದರ್ಶನ ಮಾಡಬಹುದು. ಕೊರೋನಾ ಸಮಸ್ಯೆಯಿಂದಾಗಿ ಈ ಬಾರಿ ಸ್ಪರ್ಧೆಗೆ ಗರಿಷ್ಠ 7ರಿಂದ 10 ತಂಡ ಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು.
ನಾಟಕ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಮೊದಲ ಮೂರು ಬಹುಮಾನ ಗಳ ಜೊತೆಗೆ ಕ್ರಮವಾಗಿ 35,000ರೂ., 25,000 ರೂ., ರೂ.15,000 ರೂ. ನಗದು ಹಾಗೂ ಪರ್ಯಾಯ ಫಲಕಗಳನ್ನು ನೀಡಲಾಗುವುದು. ಅಲ್ಲದೆ ಶ್ರೇಷ್ಠ ನಿರ್ದೇಶನ, ನಟ, ನಟಿ, ಸಂಗೀತ, ಬೆಳಕು, ರಂಗಪರಿಕರ, ಪ್ರಸಾಧನ, ಬಾಲನಟನೆ/ಹಾಸ್ಯ ಪಾತ್ರಗಳಿಗೂ ನಗದು ಸಹಿತ ಬಹುಮಾನ ನೀಡಲಾ ಗುವುದು. ಭಾಗವಹಿಸುವ ತಂಡಗಳಿಗೆ ಉಚಿತ ಊಟ, ವಸತಿ ಜೊತೆಗೆ ಗರಿಷ್ಠ 10ಸಾವಿರ ರೂ.ವರೆಗೆ ಪ್ರಯಾಣ ವೆಚ್ಚ ನೀಡಲಾಗುವುದು.
ಭರ್ತಿ ಮಾಡಿದ ಪ್ರವೇಶ ಪತ್ರಗಳನ್ನು ಸ್ವೀಕರಿಸಲು ನವಂಬರ್ 8 ಕೊನೆಯ ದಿನವಾಗಿರುತ್ತದೆ.ಆಸಕ್ತ ತಂಡಗಳು ಪ್ರವೇಶ ಪತ್ರಕ್ಕಾಗಿ ಪ್ರದೀಪ್ಚಂದ್ರ ಕುತ್ಪಾಡಿ, ಪ್ರಧಾನ ಕಾರ್ಯದರ್ಶಿ, ‘ರಂಗಭೂಮಿ’, ಕುತ್ಪಾಡಿ, ಉಡುಪಿ-574118 ಇವರಿಗೆ ಬರೆಯಬೇಕು. ಹೆಚ್ಚಿನ ಮಾಹಿತಿಗಳಿಗೆ ಮೊಬೈಲ್: 9448952847 (ಪ್ರದೀಪ್ಚಂದ್ರ ಕುತ್ಪಾಡಿ) ಅಥವಾ ಉಪಾಧ್ಯಕ್ಷರಾದ ನಂದಕುಮಾರ್ ಎಂ. (9980524431) ಹಾಗೂ ಭಾಸ್ಕರ ರಾವ್ ಕಿದಿಯೂರು (9844742166) ಇವರನ್ನು ಸಂಪರ್ಕಿಸಬಹುದು ಎಂದು ರಂಗಭೂಮಿ ಪ್ರಕಟಣೆ ತಿಳಿಸಿದೆ.







