ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮುಸ್ಲಿಂ ಅಭ್ಯರ್ಥಿಗಳನ್ನು ಸಜ್ಜುಗೊಳಿಸಿ : ದ.ಕ.ಜಿಲ್ಲಾ ಡಿಡಿಪಿಐ ಮಲ್ಲೇಸ್ವಾಮಿ
ಎಂಇಐಎಫ್ ವತಿಯಿಂದ 'ಎನ್ಇಪಿ' ಕುರಿತು ಕಾರ್ಯಾಗಾರ- ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ

ಮಂಗಳೂರು, ಅ.5: ಅಲ್ಪಸಂಖ್ಯಾತರ ಬಾಹುಳ್ಯವಿರುವ ದೇಶದ 100 ಜಿಲ್ಲೆಗಳಲ್ಲಿ ದ.ಕ.ಜಿಲ್ಲೆಯೂ ಒಂದಾಗಿದ್ದು, ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಎಜುಕೇಶನಲ್ ಇನ್ಸ್ಟಿಟ್ಯೂಶನ್ಸ್ ಫೆಡರೇಶನ್ (ಎಂಇಐಎಫ್) ನಂತಹ ಸಂಘಟನೆಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮುಸ್ಲಿಂ ಅಭ್ಯರ್ಥಿಗಳನ್ನು ಸಜ್ಜುಗೊಳಿಸಲು ಮುಂದಾಗಬೇಕು ಎಂದು ದ.ಕ.ಜಿಲ್ಲಾ ಡಿಡಿಪಿಐ ಮಲ್ಲೇಸ್ವಾಮಿ ಕರೆ ನೀಡಿದರು.
ಬೆಂಗಳೂರಿನ ಟೀಕೇಸ್ ಫೌಂಡೇಶನ್ನ ಪ್ರಾಯೋಜಕತ್ವದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಎಜುಕೇಶನಲ್ ಇನ್ಸ್ಟಿಟ್ಯೂಶನ್ಸ್ ಫೆಡರೇಶನ್ (ಎಂಇಐಎಫ್) ವತಿಯಿಂದ ಸಂಸ್ಥೆಯಲ್ಲಿ ನೋಂದಾಯಿಸಲ್ಪಟ್ಟ ಶಿಕ್ಷಣ ಸಂಸ್ಥೆಗಳ ಅಧೀನದಲ್ಲಿರುವ ಶಾಲಾ-ಕಾಲೇಜುಗಳ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಗ್ರ ಶ್ರೇಣಿಯ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗರದ ಕಂಕನಾಡಿಯಲ್ಲಿರುವ ಜಂಇಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನಗೈದು ಅವರು ಮಾತನಾಡಿದರು.
ವಿವಿಧ ಹುದ್ದೆಗಳಲ್ಲಿ ಶೇ.4 ಮುಸ್ಲಿಮರಿಗೆ ಹುದ್ದೆ ಮೀಸಲಿಡಲಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಲು ಸಕಾಲಕ್ಕೆ ಮಾಹಿತಿ ನೀಡಬೇಕಾಗುತ್ತದೆ. ಅಲ್ಲದೆ ಸೂಕ್ತ ರೀತಿಯಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಸಬೇಕಿದೆ. ಮಾಹಿತಿ ನೀಡಲು ಮತ್ತು ಅರ್ಜಿ ಸಲ್ಲಿಸಲು ಮಾಹಿತಿ-ಅರ್ಜಿ ಸ್ವೀಕಾರ ಕೇಂದ್ರ ತೆರೆಯಬೇಕಿದೆ ಎಂದು ಮಲ್ಲೇಸ್ವಾಮಿ ಹೇಳಿದರು.
ಮುಸ್ಲಿಂ ಮಕ್ಕಳು ಶಾಲೆ ಮತ್ತು ಮದ್ರಸದಲ್ಲಿ ಏಕಕಾಲಕ್ಕೆ ಕಲಿಯುವ ಒತ್ತಡದ ಮಧ್ಯೆ ಪರೀಕ್ಷೆಯನ್ನೂ ಕೂಡ ಏಕ ಕಾಲಕ್ಕೆ ಬರೆಯುವ ಸಂದಿಗ್ಧ ಸ್ಥಿತಿಯಲ್ಲಿರುವ ಬಗ್ಗೆ ಇಲಾಖಾ ಮಟ್ಟದಲ್ಲಿ ಈಗಾಗಲೆ ಚರ್ಚೆ ನಡೆದಿದೆ. ಏಕಕಾಲದಲ್ಲಿ ಪರೀಕ್ಷೆ ಬರೆಯುವುದಿಂದ ಎಸೆಸೆಲ್ಸಿ ಫಲಿತಾಂಶದ ಶೇಕಡಾವಾರು ಪ್ರಮಾಣಕ್ಕೆ ಸ್ವಲ್ಪ ಹಿನ್ನಡೆಯಾಗಲಿದೆ. ಹಾಗಾಗಿ ಮದ್ರಸ ಮತ್ತು ಶಾಲೆಗಳ ಪರೀಕ್ಷಾ ಅವಧಿಯ ಮಧ್ಯೆ ಕನಿಷ್ಟ 2 ವಾರಗಳ ಅಂತರವಿರುವಂತೆ ನೋಡಿಕೊಳ್ಳಬೇಕಿದೆ. ಅದಕ್ಕಾಗಿ ಶಿಕ್ಷಣ ಇಲಾಖೆಯು ಮದ್ರಸ ಪರೀಕ್ಷಾ ಬೋರ್ಡ್ಗಳಿಗೆ ಪತ್ರ ಬರೆಯಲು ನಿರ್ಧರಿಸಿದೆ. ಮುಸ್ಲಿಂ ಶಿಕ್ಷಣ ಸಂಸ್ಥೆಗಳು ಮತ್ತು ಮದ್ರಸಗಳ ಕಮಿಟಿಯು ಕೂಡ ಈ ನಿಟ್ಟಿನಲ್ಲಿ ಸಹಕಾರ ನೀಡಬೇಕಿದೆ ಎಂದು ಮಲ್ಲೇಸ್ವಾಮಿ ನುಡಿದರು.
ಮದ್ರಸಗಳಲ್ಲಿ ಗಣಿತ ಮತ್ತು ಪರಿಸರದ ಪಠ್ಯ ಕಲಿಕೆಗಾಗಿ ಕೇಂದ್ರ ಸರಕಾರವು ವಿಶೇಷ ಯೋಜನೆಯನ್ನು ಜಾರಿಗೊಳಿಸಿದೆ. ಎಲ್ಲಾ ಮದ್ರಸಗಳ ಕಮಿಟಿಯವರು ಅರ್ಜಿ ಸಲ್ಲಿಸಿದರೆ ಕಟ್ಟಡ ನಿರ್ಮಾಣಕ್ಕೆ ಅನುದಾನ, ಶಿಕ್ಷಕರಿಗೆ ಸಂಬಳ, ಪಠ್ಯಪುಸ್ತಕ ಇತ್ಯಾದಿ ನೀಡಲಾಗುವುದು. ಹಾಗಾಗಿ ಜಿಲ್ಲೆಯ ಎಲ್ಲಾ ಮದ್ರಸದ ಆಡಳಿತ ಮಂಡಳಿಯು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಲ್ಲೇಸ್ವಾಮಿ ಹೇಳಿದರು.
ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಂಶುಪಾಲೆ ಡಾ. ದೀಪ್ತಿ ನಾಯಕ್ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಂಇಐಎಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ 'ರಾಷ್ಟ್ರೀಯ ಶಿಕ್ಷಣ ನೀತಿ-2020' (ಎನ್ಇಪಿ) ಬಗ್ಗೆ ಮಾಹಿತಿ ನೀಡಿದ ಕಾವೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರೊಫೆಸರ್ ಲೂಯಿಸ್ ಮನೋಜ್ ಎನ್ಇಪಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಗೊಂದಲವಿದೆ. ಯಾವುದೇ ವಿಷಯದ ಬಗ್ಗೆ ಸ್ಪಷ್ಟ ತಿಳುವಳಿಕೆ, ಮಾಹಿತಿ ಇಲ್ಲದೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಸ್ಪಷ್ಟ ಮಾಹಿತಿಯ ಬಳಿಕವೇ ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದರು.
ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎನ್ಇಪಿ ಅನಿವಾರ್ಯವಾಗಿದೆ. ಪದವಿ ಕಲಿಕಾ ಅವಧಿಯನ್ನು ನಾಲ್ಕು ವರ್ಷಕ್ಕೇರಿಸಲಾಗಿದೆ ಎಂಬ ಹೇಳಲಾಗುತ್ತದೆ. ಆದರೆ ಅದು 3 ವರ್ಷಕ್ಕೆ ಸೀಮಿತವಾಗಿದೆ. 1 ವರ್ಷದ ಅವಧಿಯಲ್ಲಿ ಸಂಶೋಧನೆಗೆ ಒತ್ತು ನೀಡಲಾಗಿದ್ದು, ನಾಲ್ಕು ವರ್ಷ ಕಲಿತರೆ ಯಾವುದೇ ವಿಷಯದ ಮೇಲೆ ನೇರ ಡಾಕ್ಟರೇಟ್ ಮಾಡಲು ಅವಕಾಶ ಲಭಿಸಲಿದೆ. ಅಲ್ಲದೆ ಕಾರಣಾಂತರದಿಂದ ರಾಜ್ಯದ ಯಾವುದೇ ಕಡೆ ವರ್ಗಾವಣೆಯಾದರೂ ಕೂಡಾ ಪದವಿಯನ್ನು ಮುಂದುವರಿಸಬಹುದಾಗಿದೆ, ಯಾಕೆಂದರೆ ಎಲ್ಲಾ ವಿವಿಗಳ ಪಠ್ಯಕ್ರಮವೂ ಒಂದೇ ಆಗಿರುತ್ತದೆ ಎಂದು ಲೂಯಿಸ್ ಮನೋಜ್ ನುಡಿದರು.
ವೇದಿಕೆಯಲ್ಲಿ ಎಂಇಐಎಫ್ ಪ್ರಧಾನ ಕಾರ್ಯದರ್ಶಿ ಬಿ.ಎ.ನಝೀರ್, ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ಶಬೀ ಅಹ್ಮದ್ ಖಾಝಿ, ಎಂಇಐಎಫ್ ಉಪಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಮಣಿಪಾಲ, ಕೆ.ಎಂ. ಮುಸ್ತಫಾ ಸುಳ್ಯ, ಕೋಶಾಧಿಕಾರಿ ಅಬ್ದುಲ್ ರಹ್ಮಾನ್, ಕಾರ್ಯದರ್ಶಿಗಳಾದ ಬಿ. ಮಯ್ಯದ್ದಿ, ಪಿ.ಎ. ಇಲ್ಯಾಸ್ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಬಿ.ಎಂ.ಮುಮ್ತಾಝ್ ಅಲಿ ಸ್ವಾಗತಿಸಿದರು. ಕಾರ್ಯದರ್ಶಿ ರಿಯಾಝ್ ಅಹ್ಮದ್ ಕಣ್ಣೂರು ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ಕಾಟಿಪಳ್ಳದ ಮಿಸ್ಬಾಹ್ ವಿಮೆನ್ಸ್ ಕಾಲೇಜಿನ ಪ್ರಾಂಶುಪಾಲೆ ಝಾಹಿದಾ ಜಲೀಲ್ ಕಾರ್ಯಕ್ರಮ ನಿರೂಪಿಸಿದರು.
ವಿದ್ಯಾರ್ಥಿಗಳಿಗೆ ಸನ್ಮಾನ
ಎಂಇಐಎಫ್ ಸಂಸ್ಥೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಸಚಿವ ಬಿ.ಎ.ಮೊಯ್ದಿನ್, ಮಾಜಿ ಅಧ್ಯಕ್ಷರಾದ ಕುಕ್ಕಾಡಿ ಅಬ್ದುಲ್ ಖಾದರ್, ಮುಹಮ್ಮದ್ ಬ್ಯಾರಿ ಎಡಪದವು ಅವರ ನೆನಪಿನಲ್ಲಿ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಮುಲ್ಕಿ ಸಮೀಪದ ಕಿಲ್ಪಾಡಿಯ ಎಂಸಿಟಿ ಪಬ್ಲಿಕ್ ಸ್ಕೂಲ್ನ ಪೂರ್ವಿ ಎನ್. ದೇವಾಡಿಗ, ಸೂರಿಂಜೆಯ ಹಿದಾಯತ್ ಇಂಗ್ಲಿಷ್ ಮಾಧ್ಯಮ ಶಾಲೆಯ ತ್ರಿಶಾ ಟಿ. ಶೆಟ್ಟಿ, ಹೂಡೆಯ ಸ್ವಾಲಿಹತ್ ಎಜುಕೇಶನಲ್ ಇನ್ಸ್ಟಿಟ್ಯೂಶನ್ಸ್ನ ತೂಬಾ ಫಾತಿಮಾ, ಕೃಷ್ಣಾಪುರ 6ನೆ ಬ್ಲಾಕ್ನ ಹೀರಾ ಪಬ್ಲಿಕ್ ಸ್ಕೂಲ್ನ ಆಯಿಶಾ ಶಾಝಿಯಾ, ಕೃಷ್ಣಾಪುರ 4ನೆ ಬ್ಲಾಕ್ನ ಚೈತನ್ಯ ಪಬ್ಲಿಕ್ ಸ್ಕೂಲ್ನ ಮುಹಮ್ಮದ್ ಸುಹೈಲ್ ಹಾಗೂ ಪಿಯುಸಿ ವಿಜ್ಞಾನ ವಿಭಾಗದ ಹೂಡೆಯ ಸ್ವಾಲಿಹತ್ ಗರ್ಲ್ಸ್ ಪಿಯು ಕಾಲೇಜಿನ ಸುಮಯ್ಯ ಅಶ್ರಫ್, ಮೆಲ್ಕಾರ್ ಗರ್ಲ್ಸ್ ಪಿಯು ಕಾಲೇಜಿನ ಆಯಿಶತ್ ಅಫ್ರಾಹ್ ಮತ್ತು ಫಾತುಮಾ ಸುಹಾನಾ, ವಾಣಿಜ್ಯ ವಿಭಾಗದ ಹೂಡೆಯ ಸ್ವಾಲಿಹತ್ ಗರ್ಲ್ಸ್ ಪಿಯು ಕಾಲೇಜಿನ ಬೀಬಿ ಫಾತಿಮಾ ಹಾಮ್ರಾ, ಗಂಗೊಳ್ಳಿಯ ತೌಹೀದ್ ಪಿಯು ಕಾಲೇಜಿನ ರಿದಾ ಮೋಮಿನ್ ಕರಾಣಿ, ಕಲಾ ವಿಭಾಗದ ಬಬ್ಬುಕಟ್ಟೆಯ ಹಿರಾ ಪಿಯು ಕಾಲೇಜಿನ ಸೈಫಾನಾ ಶೇಖ್, ಕಲ್ಲಡ್ಕ ಅನುಗ್ರಹ ವಿಮೆನ್ಸ್ ಪಿಯು ಕಾಲೇಜಿನ ಅಲಿಮತ್ ಶಾದಿಯಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.





















