ಅಯ್ಯಂಗೇರಿಯಲ್ಲಿ ವಿವಾಹಿತೆಯ ಆತ್ಮಹತ್ಯೆ ಪ್ರಕರಣ: ವರದಕ್ಷಿಣೆ ಕಿರುಕುಳ ಆರೋಪ
ಪತಿ, ಮಾವ, ಅತ್ತೆಯ ಪತ್ತೆಗೆ ತನಿಖೆ ಚುರುಕು

ಸಾಂದರ್ಭಿಕ ಚಿತ್ರ
ಮಡಿಕೇರಿ ಅ.7 : ವಿವಾಹಿತೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಯ್ಯಂಗೇರಿ ಗ್ರಾಮದಲ್ಲಿ ನಡೆದಿದೆ. ವರದಕ್ಷಿಣೆ ಕಿರುಕುಳ ಮಹಿಳೆಯ ಸಾವಿಗೆ ಕಾರಣವೆಂದು ಕುಟುಂಬ ವರ್ಗ ಆರೋಪಿಸಿದ್ದು, ಆಕೆಯ ಪತಿ, ಮಾವ ಮತ್ತು ಅತ್ತೆ ನಾಪತ್ತೆಯಾಗಿದ್ದಾರೆ.
ಅಯ್ಯಂಗೇರಿ ಗ್ರಾಮದ ನಿವಾಸಿ ಎಂ.ಎಸ್.ಮೊಹಮ್ಮದ್ ಹಾಗೂ ಅಲೀಮಾ ದಂಪತಿಗಳ ಪ್ರಥಮ ಪುತ್ರಿ ಎಂ.ಎಂ.ಅಮೀರಾ (21) ಸಾವನ್ನಪ್ಪಿರುವವರು.
ಕಕ್ಕಬ್ಬೆ ಕುಂಜಿಲ ಗ್ರಾಮದ ನಿವಾಸಿ ಕುಂಡಂಡ ಅಬ್ದುಲ್ಲಾ ಹಾಗೂ ಜಮೀಲಾ ದಂಪತಿಗಳ ಪುತ್ರ ರುವೈಜ್ ಕೆ.ಎ ಮತ್ತು ಅಯ್ಯಂಗೇರಿಯ ಅಮೀರ ನಾಪೋಕ್ಲು ಕಾಲೇಜಿನ ವಿದ್ಯಾರ್ಥಿಗಳಾಗಿದ್ದ ಅವಧಿಯಿಂದಲೇ ಪರಸ್ಪರ ಪ್ರೀತಿಸುತ್ತಿದ್ದರು. ಇವರ ವಿವಾಹ ಕಳೆದ 2020ರ ನವೆಂಬರ್ 1 ರಂದು ಅಯ್ಯಂಗೇರಿ ಮದ್ರಸದಲ್ಲಿ ನಡೆದಿತ್ತು. ಈ ಸಂದರ್ಭ ಅಮೀರಳ ತಂದೆ ಮೊಹಮ್ಮದ್ರಿಗೆ ಈ ಮೊದಲೇ ನಿಗದಿಯಾಗಿದ್ದಂತೆ 25 ಪವನ್ ಚಿನ್ನವನ್ನು ವರದಕ್ಷಿಣೆಯಾಗಿ ನೀಡಲು ಸಾಧ್ಯವಾಗದೆ, 16 ಪವನ್ ಚಿನ್ನವನ್ನಷ್ಟೆ ನೀಡಿದ್ದರು.
ವಿವಾಹದ ಬಳಿಕ ಅತ್ತೆ ಮಾವ ವರದಕ್ಷಿಣೆಯ ಚಿನ್ನಾಭರಣಕ್ಕೆ ಆಗ್ರಹಿಸಿ ಅಮೀರಳಿಗೆ ಕಿರುಕುಳ ನೀಡುತ್ತಿದ್ದರು, ಇದರಿಂದ ಮನನೊಂದು ತವರು ಮನೆಗೆ ಬಂದ ಅಮೀರಾ ನೇಣಿಗೆ ಶರಣಾಗಿದ್ದಾಳೆ ಎಂದು ಕುಟುಂಬದ ಸದಸ್ಯರು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆ ನಡೆದ ನಂತರ ಪತಿ, ಅತ್ತೆ ಹಾಗೂ ಮಾವ ನಾಪತ್ತೆಯಾಗಿದ್ದು, ಬಾಗಮಂಡಲ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.





