ಪ್ರಾಯಶ್ಚಿತ್ತಕ್ಕಾಗಿ ಸಮಾಜ ಸೇವೆ ಮಾಡಿ:ಆ್ಯಸಿಡ್ ಎರಚುವ ಬೆದರಿಕೆ ಹಾಕಿದ್ದ ಆರೋಪಿಗೆ ದಿಲ್ಲಿ ಹೈಕೋರ್ಟ್ ಆದೇಶ
ಹೊಸದಿಲ್ಲಿ: ಮಹಿಳೆಯ ಮುಖದ ಮೇಲೆ ಆ್ಯಸಿಡ್ ಎರಚುವುದಾಗಿ ಬೆದರಿಕೆ ಹಾಕಿದ ಆರೋಪಿಯ ವಿರುದ್ಧ ಎಫ್ಐಆರ್ ರದ್ದುಗೊಳಿಸಿದ ದಿಲ್ಲಿ ಹೈಕೋರ್ಟ್ ಪಾಪದ ಪ್ರಾಯಶ್ಚಿತ್ತಕ್ಕಾಗಿ ಒಂದು ತಿಂಗಳ ಕಾಲ ಸಮಾಜ ಸೇವೆ ಮಾಡುವಂತೆ ಆ ವ್ಯಕ್ತಿಗೆ ನಿರ್ದೇಶಿಸಿದೆ ಎಂದು Live Law.in ವರದಿ ಮಾಡಿದೆ.
ಲೋಕ ನಾಯಕ ಜಯ ಪ್ರಕಾಶ್ ನಾರಾಯಣ್ ಆಸ್ಪತ್ರೆಯಲ್ಲಿ ಒಂದು ತಿಂಗಳು ಸಮುದಾಯ ಸೇವೆಯನ್ನು ಮಾಡುವಂತೆ ಹಾಗೂ ರೂ.35,000 ವೆಚ್ಚವನ್ನೂ ಭರಿಸುವಂತೆ ಜಸ್ಟಿಸ್ ಸುಬ್ರಮೊನಿಯಮ್ ಪ್ರಸಾದ್ ಆದೇಶಿಸಿದರು. ರೂ.35,000 ವನ್ನು ಆರ್ಮಿ ವೆಲ್ಫೇರ್ ಫಂಡ್ ನಲ್ಲಿ ಜಮೆ ಮಾಡಲಾಗುತ್ತದೆ.
354, 354 ಎ, 354 ಡಿ ಹಾಗೂ ಐಪಿಸಿಯ ಸೆಕ್ಷನ್ 506 ಅಡಿ ಎಫ್ ಐಆರ್ ದಾಖಲಿಸಲಾಗಿದೆ. ವ್ಯಕ್ತಿಯ ವಿರುದ್ಧ ಮಹಿಳೆಯನ್ನು ಹಿಂಬಾಲಿಸುವುದು ಹಾಗೂ ಆ್ಯಸಿಡ್ ಎರಚುವ ಬೆದರಿಕೆ ಹಾಕಿರುವ ಆರೋಪ ಹೊರಿಸಲಾಗಿತ್ತು.
ಕಕ್ಷಿದಾರರು ತಮ್ಮ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಸಮುದಾಯ ಸೇವೆಯನ್ನು ಪೂರ್ಣಗೊಳಿಸಿದ ನಂತರ ಲೋಕ ನಾಯಕ ಜಯ ಪ್ರಕಾಶ್ ನಾರಾಯಣ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಂದ ಪ್ರಮಾಣಪತ್ರ ಸಲ್ಲಿಸಬೇಕೆಂದು ನ್ಯಾಯಾಲಯವು ವ್ಯಕ್ತಿಗೆ ತಿಳಿಸಿದೆ.