ಮುಖ್ಯಮಂತ್ರಿ ಬೊಮ್ಮಾಯಿ ತಮ್ಮ ಗೊಂದಲಕಾರಿ ಹೇಳಿಕೆ ಹಿಂಪಡೆಯಲು ಪಿಯುಸಿಎಲ್ ಆಗ್ರಹ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು, ಅ. 15: `ನೈತಿಕತೆ' ಹೆಸರಿನಲ್ಲಿ ಮತೀಯ ಗೂಂಡಾಗಿರಿ ಅನೈತಿಕ ಪೊಲೀಸ್ಗಿರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ತಮ್ಮ ಹೇಳಿಕೆ ಹಿಂಪಡೆಯಬೇಕು. ಅಲ್ಲದೆ, ಆಗಿರುವ ಗೊಂದಲ ನಿವಾರಿಸಬೇಕು. ಆ ಮೂಲಕ ಸಿಎಂ ಸ್ಥಾನದ ಘನತೆ, ಸಂವಿಧಾನದ ಆಶಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯ ಉಳಿಸುವ ಕೆಲಸ ಮಾಡಬೇಕು ಎಂದು ಪಿಯುಸಿಎಲ್ ರಾಜ್ಯಾಧ್ಯಕ್ಷ ಪ್ರೊ.ವೈ.ಜೆ.ರಾಜೇಂದ್ರ ಆಗ್ರಹಿಸಿದ್ದಾರೆ.
ಶುಕ್ರವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೋಮು ಸೌಹಾರ್ದ ಮತ್ತು ಶಾಂತಿ ಕಾಪಾಡುವುದು ಸರಕಾರದ ಪ್ರಮುಖ ಕರ್ತವ್ಯ. ಇಂತಹ ಭಾವನಾತ್ಮಕ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು. ಕೇಂದ್ರ ಗೃಹ ಸಚಿವಾಲಯ 2008ರ ಜೂನ್ 23ರಲ್ಲಿ ಹೊರಡಿಸಿರುವ ಮತೀಯ ಸಾಮರಸ್ಯ ಕಾಪಾಡುವ ಮಾರ್ಗಸೂಚಿ ನಿಯಮಗಳಂತೆ ಕೋಮು ಸೌಹಾರ್ದತೆ ಕಾಪಾಡಲು ಕ್ರಮ ಕೈಗೊಳ್ಳಲು ಡಿಜಿಪಿಗೆ ಆದೇಶ ಹೊರಡಿಸಬೇಕು' ಎಂದು ಒತ್ತಾಯಿಸಿದ್ದಾರೆ.
ಜನಸಾಮಾನ್ಯರ ಬದುಕಿನೊಂದಿಗೆ ಆಡವಾಡುತ್ತಿರುವ ಮತೀಯ ಗೂಂಡಾಗಳ ವಿರುದ್ಧ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಂಡು, ಬಂಧಿಸಿ, ಕೇಸು ದಾಖಲಿಸಿ ಕೋರ್ಟ್ ಮುಂದೆ ಹಾಜರುಪಡಿಸಬೇಕು. ಕೋಮು ಸಾಮರಸ್ಯ ಕದಡುವುದು, ಅರಾಜಕತೆ ಸೃಷ್ಟಿಸುತ್ತದೆ. ಆದುದರಿಂದ ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕು. ಶಾಂತಿ ಸುವ್ಯವಸ್ಥೆ ಕಾಪಾಡಲು ಸರಕಾರ ಆಸ್ಥೆ ವಹಿಸಬೇಕು ಎಂದು ರಾಜೇಂದ್ರ ಪ್ರಕಟಣೆಯಲ್ಲಿ ಸಲಹೆ ಮಾಡಿದ್ದಾರೆ.