ರಂಗೇರಿದ ಉಪಚುನಾವಣಾ ಕಣ: ಸಿಎಂ, ಪ್ರತಿಪಕ್ಷ ನಾಯಕರಿಂದ ಭರ್ಜರಿ ಮತಬೇಟೆ

ಬೆಂಗಳೂರು, ಅ. 17: ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತೀವ್ರ ಪೈಪೋಟಿ ಸೃಷ್ಟಿಸಿರುವ ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪಚುನಾವಣಾ ಕಣ ರಂಗೇರಿದೆ. ಪ್ರಚಾರದ ಅಖಾಡಕ್ಕಿಳಿದಿರುವ ಸಿಎಂ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹಿತ ಹಲವು ಗಣ್ಯರು ಎರಡು ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಮತಬೇಟೆ ನಡೆಸಿದರು.
ರವಿವಾರ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ್ ಅವರ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ಸಿಎಂ ಬಸವರಾಜ ಬೊಮ್ಮಾಯಿ, `ಉಪಚುನಾವಣೆ ನಡೆಯಲಿರುವ ಎರಡೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತ. ಉಪಚುನಾವಣೆ ತಮಗೆ ಪ್ರತಿಷ್ಠೆ ಪ್ರಶ್ನೆಯಲ್ಲ. ಬದಲಿಗೆ ಎರಡೂ ಕ್ಷೇತ್ರಗಳ ಅಭಿವೃದ್ಧಿಯ ಭವಿಷ್ಯದ ಪ್ರಶ್ನೆ ಮುಖ್ಯ' ಎಂದು ತಮ್ಮ ಅಭ್ಯರ್ಥಿಗಳ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ಈ ಮಧ್ಯೆ ನಿನ್ನೆಯಿಂದ ಹಾನಗಲ್ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕ್ಷೇತ್ರ ವ್ಯಾಪ್ತಿಯ ಮಾಸನಕಟ್ಟೆ, ಕಂಚಿನಗಳೂರು, ಬೊಮ್ಮನಹಳ್ಳಿ ಸೇರಿದಂತೆ ವಿವಿಧೆಡೆಗಳಲ್ಲಿ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಮಾನೆ ಪರ ಪ್ರಚಾರ ನಡೆಸಿದರು. `ಕೋವಿಡ್ ಸಂಕಷ್ಟದ ಸಮಯದಲ್ಲಿ ಶ್ರೀನಿವಾಸ ಮಾನೆ ಜನರ ನೆರವಿಗೆ ಧಾವಿಸಿದ್ದು, ಅವರಿಗೆ ಮತ ನೀಡುವ ಮೂಲಕ ಅವರನ್ನು ವಿಧಾನಸಭೆ ಕಳುಹಿಸಿಕೊಡಿ' ಎಂದು ಮನವಿ ಮಾಡಿದರು.
ಮತ್ತೊಂದೆಡೆ ಸಿಂದಗಿ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹಿತ ಇನ್ನಿತರ ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿ ಅಶೋಕ್ ಮನಗೂಳಿ ಪರ ಪ್ರಚಾರದಲ್ಲಿ ತೊಡಗಿದರೆ, ಬಿಜೆಪಿ ಅಭ್ಯರ್ಥಿ ರಮೇಶ್ ಬೂಸನೂರು ಪರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ಕ್ಷೇತ್ರ ವ್ಯಾಪ್ತಿಯ ವಿವಿಧೆಡೆಗಳಲ್ಲಿ ಬಿರುಸಿನ ಪ್ರಚಾರ ಮೂಲಕ ಮತಭೇಟೆ ನಡೆಸಿದರು. ಉಪಚುನಾವಣಾ ರಣಕಣ ದಿನದಿನಕ್ಕೂ ರಂಗೇರುತ್ತಿದೆ.
ಆರೋಪ-ಪ್ರತ್ಯಾರೋಪ: ಉಪಚುನಾವಣೆ ಮತದಾನಕ್ಕೆ (ಅ.30) ದಿನಗಣನೆ ಆರಂಭವಾಗುತ್ತಿದ್ದು, ಚುನಾವಣಾ ಅಖಾಡದಲ್ಲಿ ಆಡಳಿತರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳ ನಾಯಕರ ನಡುವೆ ಆರೋಪ-ಪ್ರತ್ಯಾರೋಪ ನಡೆಯುತ್ತಿದೆ. ಅಭಿವೃದ್ಧಿ ವಿಚಾರಗಳ ಬದಲಿಗೆ ಈ ಬಾರಿಯ ಉಪಚುನಾವಣೆಯಲ್ಲಿ `ಆರೆಸ್ಸೆಸ್' ಕಾರ್ಯವೈಖರಿ ಸುತ್ತಲೇ ಚರ್ಚೆ ಆರಂಭವಾಗಿರುವುದು ವಿಶೇಷವಾಗಿದೆ.
`ಯಾವುದೇ ಉಪಚುನಾವಣೆ ಭವಿಷ್ಯದ ಚುನಾವಣೆ ದಿಕ್ಸೂಚಿಯಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಗೆದ್ದರು. ಮುಂದಿನ ಸಾರ್ವತ್ರಿಕ ಚುನಾವಣೆ ಸೋತರು. ಹೀಗಾಗಿ ಸಾರ್ವತ್ರಿಕ ಚುನಾವಣೆಯಲ್ಲಿ ಇಡೀ ರಾಜ್ಯ ತೀರ್ಮಾನಿಸುತ್ತದೆ. ಚುನಾವಣೆಗೂ ಮುನ್ನ ಹಾನಗಲ್ ಸಮಗ್ರ ಅಭಿವೃದ್ಧಿಯ ವಿಷನ್ ಡಾಕ್ಯುಮೆಂಟ್ ಬಿಡುಗಡೆ ಮಾಡಲಿದ್ದೇವೆ'
-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
`ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು 2 ವರ್ಷ ಆಗಿದೆ. ಎಂ.ಸಿ.ಮನಗೂಳಿ ಅವರು ಐಕ್ಯರಾಗಿ 8 ತಿಂಗಳಾಗಿವೆ. ಚುನಾವಣೆ ಬರುತ್ತದೆ ಎಂದು ಎಲ್ಲರಿಗೂ ಗೊತ್ತಿತ್ತು. ಮುಂದೆ ಆಗೋದು ಬಿಡಿ, ಈ ಚುನಾವಣೆಗಾಗಿಯಾದರೂ ಈ ಕ್ಷೇತ್ರಕ್ಕೆ ಬಿಜೆಪಿಯವರು ಒಂದು ಕಾರ್ಯಕ್ರಮ ಕೊಟ್ಟಿದ್ದಾರಾ? ಕೋವಿಡ್ ಸಮಯದಲ್ಲಿ ರೈತರಿಗೆ ಬೆಂಬಲ ಬೆಲೆ, ಪರಿಹಾರ ಕೊಟ್ಟರಾ? ಕೂಲಿ ಕಾರ್ಮಿಕರು, ಚಾಲಕರು, ಬಟ್ಟೆ ಹೊಲಿಯುವವರು, ಕೋವಿಡ್ನಿಂದ ಸತ್ತವರಿಗೆ ಪರಿಹಾರ ಕೊಟ್ಟರಾ? ಮತ್ತೇಕೆ ಮತ ಕೇಳಲು ಬರುತ್ತಿದ್ದಾರೆ? ಇದನ್ನು ಜನ ಪ್ರಶ್ನಿಸಬೇಕು'
-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
`ಸಂಗೂರು ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ಉದಾಸಿ ಅವರು ಅಧ್ಯಕ್ಷ ಮತ್ತು ಶಿವರಾಜ ಸಜ್ಜನರ್ ಉಪಾಧ್ಯಕ್ಷ ಆಗಿದ್ದರು. ಕಾರ್ಖಾನೆ ದಿವಾಳಿಯಾಗಿದ್ದು ನಮ್ಮಿಂದಲೋ? ಸಜ್ಜನರ್ ಮತ್ತು ಉದಾಸಿಯಿಂದಲೋ? ಇಂತಹವರು ಸಜ್ಜನರಲ್ಲ ದುರ್ಜನರು. ಭ್ರಷ್ಟಾಚಾರದ ಆರೋಪ ಇರುವ ವ್ಯಕ್ತಿಯನ್ನು ಶಾಸಕರಾಗಿ ಆಯ್ಕೆ ಮಾಡ್ತೀರಾ? ಸಜ್ಜನರ್ ಮೇಲೆ ನನಗೆ ವೈಯಕ್ತಿಕ ದ್ವೇಷವಿಲ್ಲ. ಆದರೆ, ಸತ್ಯ ಜನರಿಗೆ ಗೊತ್ತಾಗಬೇಕಲ್ವಾ?'
-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ







