ನವವಿವಾಹಿತ ಜೋಡಿಯ ಬರ್ಬರ ಹತ್ಯೆ

ಚಂಡೀಗಢ: ಮನೆಯಿಂದ ಓಡಿಹೋಗಿ ವಿವಾಹವಾಗಿದ್ದ ಅಂತರ್ಜಾತಿ ಜೋಡಿಯನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣ ಪಂಜಾಬ್ನ ಫಜೀಲ್ಕಾ ಜಿಲ್ಲೆಯ ಸಪ್ಪನ್ ವಾಲಿ ಗ್ರಾಮದಲ್ಲಿ ನಡೆದಿದೆ.
ಯುವ ದಂಪತಿಯ ಮೃತದೇಹ ಅನಾಥವಾಗಿ ಬಿದ್ದಿರುವುದು ಇಡೀ ಗ್ರಾಮವನ್ನು ಬೆಚ್ಚಿ ಬೀಳಿಸಿದೆ.
ಹತ್ಯೆಗೀಡಾದ ವ್ಯಕ್ತಿ ಪರಿಶಿಷ್ಟ ಜಾತಿಗೆ ಸೇರಿದವನಾಗಿದ್ದು, ಯುವತಿ ಇತರ ಹಿಂದುಳಿದ ವರ್ಗಕ್ಕೆ ಸೇರಿದವಳು. ಹತ್ಯೆಗೀಡಾದ ರೋಹ್ತಾಶ್ ಕುಮಾರ್ (25) ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದರೆ, ಸುಮನಾ ರಾಣಿ ಹಿಂದುಳಿದ ವರ್ಗದ ಕುಟುಂಬಕ್ಕೆ ಸೇರಿದವಳು.
ಇಬ್ಬರೂ ಫಾಝಿಲ್ಕಾ ಜಿಲ್ಲೆಯ ಅಬೋಹರ್ನ ಸಪ್ಪನ್ ವಾಲಿ ಗ್ರಾಮದವರಾಗಿದ್ದು, ಯುವತಿಯ ಕುಟುಂಬದವರ ವಿರುದ್ಧ ಕೊಲೆ ಪ್ರಕರಣ ದಾಖಲಿಸುವರೆಗೂ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ಅವಕಾಶ ನೀಡುವುದಿಲ್ಲ ಎಂದು ಯುವಕನ ಕುಟುಂಬದವರು ಪಟ್ಟು ಹಿಡಿದಿದ್ದಾರೆ.
"ರೋಹ್ತಾ ಗ್ರಾಮದಲ್ಲಿರುವ ಯುವಕನ ಸಹೋದರಿಯ ಮನೆಯಿಂದ ಇಬ್ಬರನ್ನೂ ಅಪಹರಿಸಲಾಗಿದೆ ಎಂಬ ಮಾಹಿತಿ ನಮಗೆ ಬಂದಿದೆ. ಮೃತ ಯುವಕನ ಭಾವ ನೀಡಿದ ದೂರಿನ ಅನ್ವಯ ಹತ್ಯೆ, ಅಪಹರಣ ಮತ್ತು ಅಪರಾಧ ಪಿತೂರಿ ಪ್ರಕರಣ ದಾಖಲಿಸಲಾಗಿದೆ" ಎಂದು ಮೋಗಾ ಹಿರಿಯ ಪೊಲೀಸ್ ಅಧೀಕ್ಷಕ ಎಸ್.ಎಸ್.ಮಂದ್ ಹೇಳಿದ್ದಾರೆ.
ರೋಹ್ತಾಶ್ ಕುಮಾರ್ ಹಾಗೂ ಸುಮನ್ ಪರಸ್ಪರ ವಿವಾಹವಾಗುವ ಬಯಕೆಗೆ ಕುಟುಂಬದವರು ಒಪ್ಪಿಗೆ ನೀಡಿರಲಿಲ್ಲ. ಇದರಿಂದ ಸೆಪ್ಟೆಂಬರ್ 28ರಂದು ಓಡಿಹೋದ ಜೋಡಿ, ಚಂಡೀಗಢ ನ್ಯಾಯಾಲಯದಲ್ಲಿ ನೋಂದಣಿ ಮಾಡಿಸಿಕೊಂಡ ಬಳಿಕ ಅಕ್ಟೋಬರ್ 1ರಂದು ವಿವಾಹವಾಗಿದ್ದರು. ಬಳಿಕ ಈ ಜೋಡಿ ಯುವಕನ ಸಹೋದರಿಯ ಮನೆಗೆ ತೆರಳಿತ್ತು. ಯುವತಿಯ ಕುಟುಂಬದವರಿಗೆ ಜೋಡಿಯ ಚಲನ ವಲನಗಳ ಬಗ್ಗೆ ತಿಳಿದಿತ್ತು ಎನ್ನಲಾಗಿದೆ. ರವಿವಾರ 16 ಮಂದಿಯ ಗುಂಪು ಯುವಕನ ಸಹೋದರಿಯ ಮನೆಗೆ ನುಗ್ಗಿ ದಂಪತಿಯನ್ನು ಅಪಹರಿಸಿತ್ತು.