2020-2021ನೇ ಸಾಲಿನ 'ಬರಗೂರು ಪ್ರಶಸ್ತಿ' ಪ್ರಕಟ

ಗಿರೀಶ್ ಕಾಸರವಳ್ಳಿ, ಸಾರಾ ಅಬೂಬಕರ್, ಬಿ.ಕೆ.ಸುಮಿತ್ರ, ಚಂದ್ರಕಾಂತ ಪೋಕಳೆ
ಬೆಂಗಳೂರು, ಅ.18: ಬರಗೂರು ಪ್ರತಿಷ್ಠಾನ ನೀಡುವ 2020-2021ನೇ ಸಾಲಿನ ‘ಬರಗೂರು ಪ್ರಶಸ್ತಿ’ಗೆ ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿ, ಹಿರಿಯ ಕಥೆಗಾರ್ತಿ ಸಾರಾ ಅಬೂಬಕರ್ ಸೇರಿದಂತೆ ನಾಲ್ವರು ಆಯ್ಕೆಯಾಗಿದ್ದಾರೆ.
ಪ್ರತಿ ವರ್ಷವೂ ಸೃಜನಶೀಲ ಕ್ಷೇತ್ರವಾದ ಸಾಹಿತ್ಯ ಮತ್ತು ಸಿನಿಮಾದಲ್ಲಿ ಸಾಧನೆ ಮಾಡಿದವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಕನ್ನಡ ಸಿನಿಮಾ ಕ್ಷೇತ್ರಕ್ಕೆ ಅಂತರ್ರಾಷ್ಟ್ರೀಯ ಖ್ಯಾತಿಯನ್ನು ತಂದುಕೊಟ್ಟ ಗಿರೀಶ್ ಕಾಸರವಳ್ಳಿ ಮತ್ತು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ ಸಾರಾ ಅಬೂಬಕರ್ ಅವರು 2020ರ ಸಾಲಿನ ಬರಗೂರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಿನಿಮಾ ಗೀತಗಾಯನ ಹಾಗೂ ಸುಗಮ ಸಂಗೀತ ಖ್ಯಾತಿಯ ಬಿ.ಕೆ.ಸುಮಿತ್ರ ಮತ್ತು ಮರಾಠಿಯಿಂದ ಕನ್ನಡಕ್ಕೆ ಭಾಷಾಂತರ ಮಾಡಿದ ಚಂದ್ರಕಾಂತ ಪೋಕಳೆ ಅವರು 2021ರ ಸಾಲಿನ ಬರಗೂರು ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ.
ಪ್ರಶಸ್ತಿಯು ತಲಾ ಇಪ್ಪತೈದು ಸಾವಿರ ರೂಪಾಯಿಗಳನ್ನು ಒಳಗೊಂಡಿದ್ದು, ಪ್ರಶಸ್ತಿ ಫಲಕದೊಂದಿಗೆ ಅಭಿನಂದಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭ ಅ.30ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.





