ಚಂದ್ರಶೇಖರ್ ಚಡಗರಿಗೆ ಕಾರಂತ ಪುರಸ್ಕಾರ ಪ್ರದಾನ
ಕೋಟ ಅ.18: ಗೆಳೆಯರ ಬಳಗ ಕಾರ್ಕಡ -ಸಾಲಿಗ್ರಾಮ ಇವರ ಆಶ್ರಯ ದಲ್ಲಿ ಡಾ.ಕೋಟ ಶಿವರಾಮ ಕಾರಂತ ಜನ್ಮ ದಿನಾಚರಣೆಯ ಪ್ರಯುಕ್ತ ಗಾನನಮನ ಕಾರಂತ ಸಂಸ್ಮರಣೆ ಹಾಗೂ 2021ರ ಕಾರಂತ ಪುರಸ್ಕಾರ ಪ್ರದಾನ ಸಮಾರಂಭವು ಸಾಲಿಗ್ರಾಮ ಗಿರಿಜಾ ಕಲ್ಯಾಣ ಮಂಟಪದಲ್ಲಿ ರವಿವಾರ ಜರಗಿತು.
ಈ ಸಂದರ್ಭದಲ್ಲಿ ಕಾರಂತರ ಒಡನಾಡಿ, ಪ್ರಗತಿಪರ ಚಿಂತಕ, ಸಾಹಿತಿ ಪಾಂಡೇಶ್ವರ ಚಂದ್ರಶೇಖರ್ ಚಡಗ ಕಾರಂತ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಿವರಾಮ ಕಾರಂತರು ನನ್ನ ಮಾನಸ ಗುರು. ದ್ರೋಣನಿಗೆ ಏಕಲವ್ಯ ಶಿಷ್ಯನಾದರೆ ನಾನು ಶಿವರಾಮ ಕಾರಂತರಿಗೆ ಶಿಷ್ಯ. ಇವತ್ತು ನನಗೆ ಮಾಡಿದ ಸನ್ಮಾನ ಶಿವರಾಮ ಕಾರಂತರಿಗೆ ಸಲ್ಲುತ್ತದೆ. ಕಾರಂತರಿಗೆ ದೇವರ ಬಗ್ಗೆ ನಂಬಿಕೆ ಇಲ್ಲದಿದ್ದರು, ಧರ್ಮದ ಬಗ್ಗೆ ಅಪಾರ ಾದ ಗೌರವ ಇದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಮಂಗಳೂರು ಕ್ಯಾಂಪ್ಕೋ ಲಿಮಿಟೆಡ್ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು. ಮಂಗಳೂರಿನ ಕಲ್ಕೂರ ಪ್ರತಿಷ್ಠಾ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಕಾರಂತ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಹಿರಿಯ ಸಾಹಿತಿ ಕುಂದಾಪುರದ ಎ.ಎಸ್.ಎನ್.ಹೆಬ್ಬಾರ್ ಕಾರಂತ ಸಂಸ್ಮರಣೆ ಮಾಡಿದರು. ಅಧ್ಯಕ್ಷತೆಯನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ವಹಿಸಿದ್ದರು. ಸಾಲಿಗ್ರಾಮ ಪಟ್ಟಣ ಪಂಚಾಯತ ಅಧ್ಯಕ್ಷೆ ಸುಲತಾ ಹೆಗ್ಡೆ, ಕೋಟ ಸಿ.ಎ ಬ್ಯಾಂಕ್ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಸಾಹಿತಿ ಎಚ್.ಜನಾರ್ಧನ ಹಂದೆ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉಪಸ್ಥಿತರಿದ್ದರು.
ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ಚಂದ್ರಕಾಂತ ನಾಯರಿ ವಂದಿಸಿದರು. ಉಪಾಧ್ಯಕ್ಷ ಕೆ.ಶಶಿಧರ ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಅಚ್ಚುತ್ ಪೂಜಾರಿ,ಕಾರ್ಕಡ ಸಂಜೀವ ದೇವಾಡಿಗ ಹಾಗೂ ಚಂದ್ರ ಕಾಂತ್ ನಾಯಿರಿ ಇವರ ಸಂಯೋಜನೆಯಲ್ಲಿ ಗಾನನಮನ ಕಾರ್ಯಕ್ರಮ ನಡೆಯಿತು. ಶಶಿಕಾಂತ್ ಶೆಟ್ಟಿ ಕಾರ್ಕಳ ತಂಡದಿಂದ ಯಕ್ಷಗಾನ ಪ್ರದರ್ಶನ ಜರಗಿತು.