ಪೊಲೀಸ್ ಠಾಣೆಯನ್ನು ಕೇಸರಿಕರಣ ಮಾಡಲು ಹೊರಟಿದ್ದಾರೆ: ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್ (File Photo)
ಸಿಂದಗಿ: ಆಯುಧಪೂಜೆ ಹಬ್ಬದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ತಮ್ಮ ಸಮವಸ್ತ್ರ ಕಳಚಿ ಕೇಸರಿ ಬಟ್ಟೆ ಧರಿಸಿದ್ದನ್ನು ನೀವೆಲ್ಲ ನೋಡಿದ್ದೀರಿ. ಇದು ದೇಶಕ್ಕೆ ಅಪಾಯಕಾರಿ ಬೆಳವಣಿಗೆ. ಸಂವಿಧಾನದ ಹೆಸರಲ್ಲಿ ಪ್ರಮಾಣ ಮಾಡಿದ ಮುಖ್ಯಮಂತ್ರಿ, ಗೃಹ ಸಚಿವರು, ಪೊಲೀಸ್ ಅಧಿಕಾರಿಗಳು ಪೊಲೀಸ್ ಠಾಣೆಯನ್ನೂ ಕೇಸರಿಕರಣ ಮಾಡಲು ಹೊರಟಿದ್ದಾರೆ. ಇದನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಮಂಗಳವಾರ ಸಿಂದಗಿ ವಿಧಾನಸಭಾ ಕ್ಷೇತ್ರದ ಬಳಗನೂರು, ಚಾಂದಕವಠೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಿದ ಅವರು, ಇದು ಪ್ರತಿಯೊಬ್ಬ ಭಾರತೀಯನನ್ನು ಕೆರಳಿಸುವ ವಿಚಾರ. ಉಪಚುನಾವಣೆ ಇಲ್ಲದಿದ್ದರೆ, ನಾನೇ ಹೋಗಿ ಪೊಲೀಸ್ ಠಾಣೆ ಮುಂದೆ ರಾಷ್ಟ್ರಧ್ವಜ ಹಾರಿಸುತ್ತಿದ್ದೆ. ಉಪಚುನಾವಣೆ ಮುಗಿದ ಬಳಿಕ ರಾಷ್ಟ್ರಧ್ವಜ ಹಾಗೂ ಖಾಕಿ ಬಟ್ಟೆಯನ್ನು ಆ ಪೊಲೀಸ್ ಅಧಿಕಾರಿಗಳಿಗೆ ಉಡುಗೊರೆಯಾಗಿ ನೀಡುತ್ತೇವೆ ಎಂದರು.
ದೇಶದ ಐಕ್ಯತೆ, ಸಮಗ್ರತೆ, ಶಾಂತಿ ಕಾಪಾಡಲು ಸಂವಿಧಾನದಲ್ಲಿ ಪೊಲೀಸರಿಗೆ ಅಧಿಕಾರ ನೀಡಿದ್ದಾರೆ. ಆದರೆ ಅದಕ್ಕೆ ಅಗೌರವ ತರುವಂತೆ ಪೊಲೀಸರು ವರ್ತಿಸುತ್ತಿದ್ದಾರೆ. ಸರಕಾರ ಇದಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದಾಗ ಅದನ್ನು ನೋಡಿಕೊಂಡು ಕೂರಲು ಹೇಗೆ ಸಾಧ್ಯ? ಎಂದು ಶಿವಕುಮಾರ್ ಪ್ರಶ್ನಿಸಿದರು.
ಪ್ರಜಾಪ್ರಭುತ್ವದಲ್ಲಿ ಮತದಾರರೇ ಮಾಲಕರು. ಅವರ ತೀರ್ಮಾನವೇ ದೇಶದ ತೀರ್ಮಾನ. ನಿಮ್ಮ ಒಂದು ಮತ, ಆಚಾರ ವಿಚಾರ, ಭಾವನೆಗೆ ಅದರದೇ ಆದ ಬೆಲೆ ಇದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ದೇಶದ ಸಂವಿಧಾನ ಕೊಟ್ಟಾಗ ಯಾರು ಯಾವ ಕೆಲಸ ಮಾಡಬೇಕು ಎಂದು ಮಾರ್ಗಸೂಚಿ ಹಾಕಿಕೊಟ್ಟಿದ್ದಾರೆ. ನಾವದನ್ನು ರಕ್ಷಿಸಬೇಕು ಎಂದು ಅವರು ಹೇಳಿದರು.
ನೀವೆಲ್ಲ ಎಂ.ಸಿ.ಮನಗೂಳಿ ಅವರನ್ನು 5 ವರ್ಷಕ್ಕೆ ಗೆಲ್ಲಿಸಿದ್ದಿರಿ. ಆದರೆ ಅವರು ವಿಧಿವಶರಾಗಿದ್ದು, ಈಗ ನಡೆಯುತ್ತಿರುವ ಉಪಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಒಗ್ಗಟ್ಟಿನಿಂದ ಅವರ ಪುತ್ರ ಅಶೋಕ ಮನಗೂಳಿ ಅವರನ್ನು ಅಭ್ಯರ್ಥಿಯಾಗಿ ನಿಲ್ಲಿಸಿದೆ. ಈ ಚುನಾವಣೆಯನ್ನು ನಾವು ಬಯಸಿರಲಿಲ್ಲ ಎಂದು ಶಿವಕುಮಾರ್ ತಿಳಿಸಿದರು.
ಸಿದ್ದರಾಮಯ್ಯ ಸಂಪುಟದಲ್ಲಿ ನಾನು ಇಂಧನ ಸಚಿವನಾಗಿದ್ದಾಗ ರಾಜ್ಯದಲ್ಲಿ 10 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಪ್ರಮಾಣ ಹೆಚ್ಚಿಸಿದ್ದೆವು. ಆದರೆ ಕಳೆದ ಒಂದು ವಾರದಿಂದ ಪತ್ರಿಕೆಗಳಲ್ಲಿ ರಾಜ್ಯದಲ್ಲಿ ವಿದ್ಯುತ್ ಅಭಾವ ತಲೆದೊರಿದೆ ಎಂಬ ವರದಿಗಳು ಬರುತ್ತಿವೆ. ನಮ್ಮ ರಾಜ್ಯದಿಂದ ಆಯ್ಕೆಯಾದವರೇ ಕೇಂದ್ರದಲ್ಲಿ ಕಲ್ಲಿದ್ದಲು ಮಂತ್ರಿಯಾಗಿದ್ದಾರೆ. ಆದರೂ ರಾಜ್ಯದಲ್ಲಿ ಕಲ್ಲಿದ್ದಲ ಕೊರತೆ ಎಂದು ಅವರು ಟೀಕಿಸಿದರು.
ನಮ್ಮ ರಾಜ್ಯದವರೇ ರಸಗೊಬ್ಬರ ಸಚಿವರಾಗಿದ್ದಾರೆ. ಆದರೂ ಗೊಬ್ಬರ ಬೆಲೆ ಗಗನಕ್ಕೇರಿದ್ದು, ಸರಿಯಾಗಿ ಪೂರೈಕೆಯಾಗದೇ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ನಮ್ಮಿಂದ ರಾಜ್ಯಸಭೆಗೆ ಹೋದವರೇ ಹಣಕಾಸು ಮಂತ್ರಿಯಾಗಿದ್ದಾರೆ. ಆದರೂ ರಾಜ್ಯಕ್ಕೆ ಹೆಚ್ಚಿನ ಅನುದಾನ ಸಿಗುತ್ತಿಲ್ಲ. ಬರಬೇಕಾದ ಜಿಎಸ್ಟಿ ಬಾಕಿಯೂ ಬರುತ್ತಿಲ್ಲ. ಇವರೆಲ್ಲ ನಮ್ಮ ನಾಯಕರಾ? ರಾಜ್ಯದಿಂದ 25 ಸಂಸದರನ್ನು ಗೆಲ್ಲಿಸಲಾಗಿತ್ತು. ಒಬ್ಬರೂ ಪ್ರಧಾನಿ ಬಳಿ ಹೋಗಿ ರಾಜ್ಯದ ಕಷ್ಟದ ಬಗ್ಗೆ ಮನವಿ ಮಾಡಲಿಲ್ಲ, ಧ್ವನಿ ಎತ್ತಲಿಲ್ಲ. ನೀರಾವರಿ, ಹಣಕಾಸಿನ ವಿಚಾರದಲ್ಲಿ ಆಸಕ್ತಿ ತೋರಲಿಲ್ಲ. ನಮ್ಮ ಸರಕಾರ ಇದ್ದಾಗ ಹಲವು ಯೋಜನೆಗಳನ್ನು ತಂದೆವು ಎಂದು ಶಿವಕುಮಾರ್ ಹೇಳಿದರು.
ಕೋವಿಡ್ ಸಮಯದಲ್ಲಿ ಭ್ರಷ್ಟಾಚಾರ ತಾಂಡವವಾಡಿತು. ಬೆಡ್ ನಿಂದ ಔಷಧಿವರೆಗೂ ಎಲ್ಲ ಹಂತದಲ್ಲೂ ಲಂಚ ಹೊಡೆದರು. ವೆಂಟಿಲೇಟರ್ ನಿಂದ ಹಿಡಿದು ಮಾಸ್ಕ್ ವರೆಗೂ ಎಲ್ಲದರಲ್ಲೂ ಭ್ರಷ್ಟಾಚಾರ. ಇದನ್ನು ಬಯಲು ಮಾಡಿದರೂ ಅವರು ಮಾನಮರ್ಯಾದೆ ಇಲ್ಲದೆ ಅಧಿಕಾರದಲ್ಲಿ ಕೂತಿದ್ದಾರೆ. ಆಸ್ಪತ್ರೆ ಸೇರಲು, ಔಷಧಿ ಪಡೆಯಲು, ಆಕ್ಸಿಜನ್ ಗಾಗಿ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಬಂತು. ಕೊನೆಗೆ ಸತ್ತವರನ್ನು ಅಂತ್ಯಸಂಸ್ಕಾರ ಮಾಡಲೂ ಕ್ಯೂ ನಿಲ್ಲಬೇಕಾಯಿತು ಎಂದು ಶಿವಕುಮಾರ್ ಹೇಳಿದರು.
ಕೋವಿಡ್ ನಿಂದ ಸತ್ತವರಿಗೂ ಸರಕಾರ ಯಾವುದೇ ನೆರವು ನೀಡಲಿಲ್ಲ. ಆದರೆ ಮನಗೂಳಿ ಕುಟುಂಬದವರು 50 ಹಾಸಿಗೆಗಳ ಸಣ್ಣ ಆಸ್ಪತ್ರೆ ಇಟ್ಟುಕೊಂಡು ಈ ತಾಲೂಕಿನ ಬಡ ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಅವರು ತಿಳಿಸಿದರು.
ಎಂ.ಬಿ.ಪಾಟೀಲ್ ಅವರು ಜಿಲ್ಲಾ ಆಸ್ಪತ್ರೆಯಲ್ಲಿ ಹಾಗೂ ಶಾಮನೂರು ಶಿವಶಂಕರಪ್ಪನವರು ರಾಜ್ಯದಲ್ಲೇ ದಾಖಲೆ ಮಟ್ಟದಲ್ಲಿ ಕೋವಿಡ್ ಲಸಿಕೆ ಹಾಕಿಸಿದ್ದಾರೆ. ಡಾ.ಜಿ.ಪರಮೇಶ್ವರ್ ಅವರು ತಮ್ಮ ಆಸ್ಪತ್ರೆಯಲ್ಲಿ, ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ಜನರ ಸೇವೆ ಮಾಡಿದ್ದಾರೆ. ಶಿವಶಂಕರಪ್ಪನವರು 3 ಲಕ್ಷ ಜನರಿಗೆ ಲಸಿಕೆ ನೀಡಿದರು. ಖರ್ಗೆ ಅವರು ಪುಣೆಯಿಂದ ಲಸಿಕೆ ತರಿಸಿ ಕೊಟ್ಟರು. ಆದರೆ ಬಿಜೆಪಿಯವರು ಅದನ್ನು ವ್ಯಾಪಾರಕ್ಕೆ ಇಟ್ಟಿದ್ದರು. ನಿಮಗೆ ಇಂದು ಉಚಿತ ಲಸಿಕೆ ಸಿಕ್ಕಿದೆ ಎಂದರೆ ಅದು ಕಾಂಗ್ರೆಸ್ ಹೋರಾಟದ ಫಲ ಎಂದು ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಸರಕಾರ ಉಚಿತ ಅಕ್ಕಿಯಿಂದ, ಮಕ್ಕಳಿಗೆ ಹಾಲು, ಜನತೆಗೆ ಸಮರ್ಪಕ ವಿದ್ಯುತ್, ಎಂ.ಬಿ. ಪಾಟೀಲ್ ನೀರಾವರಿ ಮಂತ್ರಿಯಾಗಿದ್ದಾಗ ಈ ಭಾಗದಲ್ಲಿ ನೀರಾವರಿ ಯೋಜನೆ ಸಿಕ್ಕಿದೆ. ಎಲ್ಲ ವರ್ಗದ ಜನರಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ಕೊಟ್ಟಿದೆ. ನಮ್ಮ ಕೆಲಸಕ್ಕೆ ನೀವು ಬೆಂಬಲ ನೀಡಬೇಕು, ನಮಗೆ ನೀವು ಸಹಾಯ ಮಾಡಬೇಕು ಎಂದು ಅವರು ಕೋರಿದರು.
ಮಸ್ಕಿಯಲ್ಲಿ ಅವರು ಹಣ ಹಂಚಿದಂತೆ ಇಲ್ಲಿಯೂ ಹಂಚುತ್ತಾರೆ. ಯಾವುದೇ ಕಾರಣಕ್ಕೂ ಅವರು ಹಣ ಕೊಟ್ಟರೆ ಬೇಡ ಎನ್ನಬೇಡಿ. ಬಿಜೆಪಿ ನೋಟು, ಕಾಂಗ್ರೆಸ್ ಗೆ ವೋಟು. ನಿಮ್ಮ ಹಸ್ತದಿಂದ ಹಸ್ತದ ಗುರುತಿಗೆ ಮತ ಹಾಕಿದಾಗ ಬರುವ ಶಬ್ಧ ಬೊಮ್ಮಾಯಿ, ಯಡಿಯೂರಪ್ಪ ಹಾಗೂ ಮೋದಿ ಅವರಿಗೆ ಕೇಳಬೇಕು. ಹೀಗಾಗಿ ನಿಮ್ಮ ಸ್ವಾಭಿಮಾನದ ಮತ ಅಶೋಕ್ ಮನಗೂಳಿ ಅವರಿಗೆ ನೀಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಶಿವಕುಮಾರ್ ತಿಳಿಸಿದರು.







