ಮನಗೂಳಿ ಕಾಕಾ ಸಾಧನೆ ಕಾಂಗ್ರೆಸ್ ಹೈಜಾಕ್ ಮಾಡಲಾಗದು: ಕುಮಾರಸ್ವಾಮಿ
`ಬಿಜೆಪಿ ಸರಕಾರ ಎಲ್ಲ ಕ್ಷೇತ್ರಗಳಲ್ಲೂ ವಿಫಲ'

ವಿಜಯಪುರ, ಅ. 19: `ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬಕ್ಕೆ, ಜಾತ್ಯತೀತ ಜನತಾದಳ ಮತ್ತು ಸಿಂದಗಿ ಕ್ಷೇತ್ರದ ನಡುವೆ ವಾತ್ಸಲ್ಯಪೂರ್ಣವಾದ ಕರುಳುಬಳ್ಳಿಯ ಸಂಬಂಧ ಇದೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಣ್ಣಿಸಿದ್ದಾರೆ.
ಮಂಗಳವಾರ ಸಿಂದಗಿ ಕ್ಷೇತ್ರದ ಹೊಲಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, `ಸುಮಾರು 30 ವರ್ಷಗಳ ಕಾಲ ಮನಗೂಳಿ ಕಾಕಾ ದೇವೇಗೌಡರ ಕುಟುಂಬದ ಸದಸ್ಯರಂತೆ ಇದ್ದರು. ಅವರನ್ನು ದೇವೇಗೌಡರು ಸ್ವಂತ ಸಹೋದರನಂತೆ ನೋಡುತ್ತಿದ್ದರು. ಏಳು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡು ಸಲ ಗೆದ್ದ ಅವರನ್ನು ಎರಡೂ ಸಲವೂ ಪಕ್ಷ ಮಂತ್ರಿ ಮಾಡಿತ್ತು' ಎಂದು ನೆನಪು ಮಾಡಿಕೊಂಡರು.
ದೇವೇಗೌಡರು ಸಿಂದಗಿ ಕ್ಷೇತ್ರಕ್ಕೆ ಅನೇಕ ಯೋಜನೆಗಳನ್ನು ನೀಡಿದ್ದರು. ನೀರಾವರಿ ಯೋಜನೆಗಳನ್ನು ಜಾರಿ ಮಾಡಿದ್ದರು. ಅದಕ್ಕೆ ಕುರುಹಾಗಿ ದೇವೇಗೌಡರು ಮತ್ತು ಮನಗೂಳಿ ಅವರಿಬ್ಬರ ಪ್ರತಿಮೆಗಳನ್ನು ಜನರು ಕೃತಜ್ಞತಾಪೂರ್ವಕವಾಗಿ ಇಲ್ಲಿ ಸ್ಥಾಪನೆ ಮಾಡಿದ್ದಾರೆ. ಇಂಥ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳುವ ಅದೃಷ್ಟ ನನ್ನದು ಎಂದು ಕುಮಾರಸ್ವಾಮಿ ನುಡಿದರು.
ಮನಗೂಳಿ ಸಾಧನೆಯನ್ನು ಹೈಜಾಕ್ ಮಾಡಲಾಗದು: ಕಾಂಗೆಸ್ ಪಕ್ಷಕ್ಕೆ ಅಭ್ಯರ್ಥಿಯ ಗತಿ ಇಲ್ಲದೆ ಮನಗೂಳಿ ಕಾಕಾ ಅವರ ಪುತ್ರನನ್ನು ಹೈಜಾಕ್ ಮಾಡಿ ಅಭ್ಯರ್ಥಿ ಮಾಡಿರಬಹುದು. ಆದರೆ, ಕಾಕಾ ಅವರ ಜನಪ್ರಿಯತೆ, ಅವರು ಮಾಡಿದ ಸೇವೆ ಹಾಗೂ ಸಿಂದಗಿ ಕ್ಷೇತ್ರಕ್ಕೆ ಜೆಡಿಎಸ್ ಕೊಟ್ಟಿರುವ ಕೊಡುಗೆಯನ್ನು ಹೈಜಾಕ್ ಮಾಡಲಾಗದು ಎಂದು ಎಚ್ಡಿಕೆ ಕಾಂಗ್ರೆಸ್ ಪಕ್ಷಕ್ಕೆ ಕುಟುಕಿದರು.
ಸಿದ್ದರಾಮಯ್ಯ ಜೆಡಿಎಸ್ ಪಕ್ಷದ ವಿರುದ್ಧ ನಿರಂತರವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಯಾವ ನಾಲಿಗೆಯಲ್ಲಿ ಕಾಂಗ್ರೆಸ್ ನಾಯಕರು ಜೆಡಿಎಸ್ ಪಕ್ಷ ಬಿಜೆಪಿ `ಬಿ' ಟೀಮ್ ಎನ್ನುತ್ತಿದ್ದರೋ ಅದೇ ನಾಯಕರು ಕಳೆದ ಚುನಾವಣೆ ನಂತರ ಸರಕಾರ ಮಾಡಬೇಕು ಎಂದು ನಮ್ಮ ಪಕ್ಷದ ಬಾಗಿಲಲ್ಲಿ ನಿಂತಿದ್ದರು. ಯಾರು ನಮ್ಮ ಪಕ್ಷಕ್ಕೆ ಮತ ಹಾಕಬೇಡಿ ಎಂದು ಜನರಿಗೆ ಹೇಳಿದರೋ ಅವರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ದೇವೇಗೌಡರ ಮನೆ ಮುಂದೆ ನಿಂತರು. ಆದರೆ, ಸಿದ್ದರಾಮಯ್ಯ ಅವರ ಸುಳ್ಳು ಮಾತುಗಳಿಂದ ನಮ್ಮ ಪಕ್ಷಕ್ಕೆ ಆ ಚುನಾವಣೆಯಲ್ಲಿ ಹಾನಿ ಆಯಿತು ಎಂದು ಕುಮಾರಸ್ವಾಮಿ ಟೀಕಿಸಿದರು.
ಜೆಡಿಎಸ್ ಗೆಲವು ಖಚಿತ: ಸಿಂದಗಿ ಕ್ಷೇತ್ರದಲ್ಲಿ ಹಣಾಹಣಿ ಇರುವುದು ಜೆಡಿಎಸ್ ಮತ್ತು ಬಿಜೆಪಿ ನಡುವೆ ಮಾತ್ರ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿತ್ತು. ಯಾವ ಚುನಾವಣೆಯಲ್ಲಿಯೂ ಇಲ್ಲಿ ಆ ಪಕ್ಷ ಎರಡನೇ ಸ್ಥಾನಕ್ಕೆ ಬಂದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ವಿಫಲ:
`ನನ್ನ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಪತನಗೊಳಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಉತ್ತರ ಕರ್ನಾಟಕ ಪ್ರದೇಶದಲ್ಲಿ ನೆರೆ ಬಂತು. ಅದನ್ನು ಸರಿಯಾಗಿ ನಿರ್ವಹಣೆ ಮಾಡಲಿಲ್ಲ. ಮನೆ ಕಳೆದುಕೊಂಡ ಕುಟುಂಬಗಳಿಗೆ 5ಲಕ್ಷ ರೂ. ಪರಿಹಾರವನ್ನು ನೀಡಲಿಲ್ಲ. ಕೊರೋನ ನಿರ್ವಹಣೆಯಲ್ಲಿ ಸರಕಾರ ಸರಿಯಾಗಿ ಕೆಲಸ ಮಾಡಲಿಲ್ಲ. ಪ್ರಾಣಹಾನಿ ಅದ ಕುಟುಂಬಗಳಿಗೆ ಯಾವ ನೆರವನ್ನೂ ಕೊಡಲಿಲ್ಲ. ಕಾರ್ಮಿಕ ಮತ್ತು ಶ್ರಮಿಕ ವರ್ಗದ ಜನರಿಗೆ ಕೊನೆಪಕ್ಷ 10 ಸಾವಿರ ರೂ.ಹಣವನ್ನು ನೀಡಲಿಲ್ಲ'
-ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ







