ಪರಮಬೀರ್ ಸಿಂಗ್ ವಿರುದ್ಧದ ಹಫ್ತಾ ಪ್ರಕರಣ: ಗುಜರಾತಿನ ಹವಾಲಾ ದಂಧೆಕೋರನ ಬಂಧನ
photo:PTI
ಮುಂಬೈ,ಅ.21: ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮಬೀರ್ ಸಿಂಗ್ ಮತ್ತು ಇತರರ ವಿರುದ್ಧ ದಾಖಲಾಗಿರುವ ಹಫ್ತಾ ವಸೂಲಿ ಪ್ರಕರಣದಲ್ಲಿ ತನ್ನ ತನಿಖೆಗೆ ಸಂಬಂಧಿಸಿದಂತೆ ಹವಾಲಾ ದಂಧೆಕೋರ ಅಲ್ಪೇಶ್ ಪಟೇಲ್ ಎಂಬಾತನನ್ನು ಮುಂಬೈ ಕ್ರೈಂ ಬ್ರಾಂಚ್ ಬುಧವಾರ ರಾತ್ರಿ ಗುಜರಾತಿನ ಮೆಹ್ಸಾನಾ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದೆ.
ಸಿಂಗ್ ಪರವಾಗಿ ಪಟೇಲ್ ದೂರುದಾರ ಬಿಮಲ್ ಅಗರವಾಲ್ ಅವರಿಂದ ಹಣವನ್ನು ಸಂಗ್ರಹಿಸಿದ್ದ ಎಂದು ಕ್ರೈಂ ಬ್ರಾಂಚ್ ಹೇಳಿದೆ.
ಮುಂಬೈನ ಉದ್ಯಮಿ ಅಗರವಾಲ್ ಕೆಲವು ತಿಂಗಳ ಹಿಂದೆ ಸಿಂಗ್,ವಜಾಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಝೆ ಮತ್ತು ಇತರ ಹಲವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು.
ಸಿಂಗ್ ವಿರುದ್ಧದ ಹಫ್ತಾ ವಸೂಲಿ ಪ್ರಕರಣದಲ್ಲಿ ಹೆಸರಿಸಲಾಗಿರುವ ಭೂಗತ ಲೋಕದ ಪಾತಕಿ ದಾವೂದ್ ಇಬ್ರಾಹೀಂ ಸಹಚರ ರಿಯಾಝ್ ಭಾಟಿಗಾಗಿ ತಾನು ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಕ್ರೈಂ ಬ್ರಾಂಚ್ ಶುಕ್ರವಾರ ತಿಳಿಸಿತ್ತು.
ಸಿಂಗ್,ವಝೆ ಮತ್ತು ಇತರರ ವಿರುದ್ಧ ಜ.23ರಂದು ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ಹಫ್ತಾ ವಸೂಲಿ ಪ್ರಕರಣ ದಾಖಲಾಗಿದ್ದು,ಬಳಿಕ ತನಿಖೆಯನ್ನು ಕ್ರೈಬ್ರಾಂಚ್ಗೆ ಹಸ್ತಾಂತರಿಸಲಾಗಿತ್ತು.