ಮಂಗಳೂರು: ಏಕಮುಖ ಸಂಚಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ
ಮಂಗಳೂರು, ಅ.27: ನಗರದ ಎ.ಬಿ.ಶೆಟ್ಟಿ ವೃತ್ತದಿಂದ ಓಲ್ಡ್ಕೆಂಟ್ ರಸ್ತೆಯಲ್ಲಿ ಏಕಮುಖ ವಾಹನ ಸಂಚಾರ ಕಲ್ಪಿಸಿರುವುದನ್ನು ವಿರೋಧಿಸಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಜೆಡಿಎಸ್ ಸಮಿತಿಯ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಪಕ್ಷದ ನಾಯಕ ಸುಶೀಲ್ ನೊರೊನ್ಹಾ ಮಾತನಾಡಿ ದಿಢೀರ್ ಆಗಿ ರಸ್ತೆ ಮಾರ್ಪಾಡಿನಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗಿದೆ. ಈ ನಿರ್ಧಾರವನ್ನು ಕೂಡಲೇ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಸ್ಮಾರ್ಟ್ಸಿಟಿ ಯೋಜನೆಗೆ ಕೇಂದ್ರ ಹಾಗು ರಾಜ್ಯ ಸರಕಾರದಿಂದ ಕೋಟ್ಯಂತರ ಹಣ ಬಿಡುಗಡೆಯಾಗಿದೆ. ನಗರದ ಎಲ್ಲಾ ರಸ್ತೆಗಳನ್ನು ಅಗೆಯ ಲಾಗಿದ್ದು, ಯಾವುದೇ ಕಾಮಗಾರಿಯನ್ನು ಪೂರ್ಣಗೊಳಿಸದ ಕಾರಣ ವಾಹನ ಸಂಚಾರಕ್ಕೆ ಭಾರೀ ಅಡ್ಡಿಯಾಗಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಸ್ಮಾರ್ಟ್ಸಿಟಿಯ ಬಗ್ಗೆ ಸರಕಾರಿ ಕಚೇರಿಗಳಲ್ಲಿ ವಿಚಾರಿಸಲು ಹೋದರೆ ಅಧಿಕಾರಿಗಳು ಯಾವುದೇ ವಿವರಣೆಯನ್ನು ನೀಡಲು ನಿರಾಕರಿಸುತ್ತಿದ್ದಾರೆ ಎಂದು ಸುಶೀಲ್ ನೊರೊನ್ಹಾ ಆರೋಪಿಸಿದರು.
ಈ ಸಂದರ್ಭ ಜೆಡಿಎಸ್ ಮಹಿಳಾ ಘಟಕದ ಮಾಜಿ ಅಧ್ಯಕ್ಷ ಸುಮತಿ ಹೆಗ್ಹಡೆ, ಪಕ್ಷದ ಮುಂಖಡ ಎನ್ಪಿ.ಪುಷ್ಪರಾಜನ್, ಸುಮಿತ್ ಸುರ್ವಣ, ಸವಾಝ್, ಶಿವಾನಂದ , ಬಿಲಾಲ್, ಮುನ್ನಾ, ನಝೀರ್, ಹರ್ಷಿತಾ, ಭವಾನಿ ಜೋಗಿ, ಹಪ್ಲಾಲ್, ಅಲ್ತಾಫ್ ತುಂಬೆ, ಲತೀಫ್ ಬೆಂಗ್ರೆ, ಶಫೀಕ್ ಕಲ್ಲಾಪು, ನಝೀರ್ ಸಾಮಣಿಗೆ, ವೀಣಾ.ಶೆಟ್ಟಿ, ಶಾರದಾ ಶೆಟ್ಟಿ, ಕಲೀಲ್ ಉಪಸ್ಥಿತರಿದ್ದರು.
ಜೆಡಿಎಸ್ ರಾಜ್ಯ ಮೀನುಗಾರಿಕಾ ಘಟಕದ ಅಧ್ಯಕ್ಷ ರತ್ನಾಕರ ಸುವರ್ಣ ಸ್ವಾಗತಿಸಿದರು. ಯುವ ನಾಯಕ ಪೈಝಲ್ ರಹ್ಮಾನ್ ವಂದಿಸಿದರು. ಮುನೀರ್ ಮುಕ್ಕಚೇರಿ ಕಾರ್ಯಕ್ರಮ ನಿರೂಪಿಸಿದರು.