ಮಂಗಳೂರು: ಸ್ಕೂಟರ್ ಢಿಕ್ಕಿ; ಉದ್ಯಮಿಗೆ ಗಾಯ
ಮಂಗಳೂರು, ಅ.29: ಪ್ರಸಿದ್ಧ ಐಡಿಯಲ್ ಐಸ್ಕ್ರೀಂ ಸಂಸ್ಥೆಯ ಸ್ಥಾಪಕ ಎಸ್.ಪ್ರಭಾಕರ ಕಾಮತ್ (ಪಬ್ಬಾ ಮಾಮ್) (79) ರಸ್ತೆ ಅಪಘಾತದಲ್ಲಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಜೈ ಬಳಿ ಗುರುವಾರ ರಾತ್ರಿ 8:45ರ ವೇಳೆಗೆ ಕಾಪಿಕಾಡ್ನ 1ನೇ ಅಡ್ಡರಸ್ತೆಯಲ್ಲಿ ತನ್ನ ಮನೆ ಕಡೆಗೆ ನಡೆದುಕೊಂಡು ಹೋಗುವಾಗ ಲಾಲ್ಬಾಗ್ ಕಡೆಯಿಂದ ಬಂದ ದ್ವಿಚಕ್ರ ವಾಹನ ಹಿಂಬದಿಯಿಂದ ಢಿಕ್ಕಿಯಾಗಿದೆ. ಪರಿಣಾಮ ಕಾಮತ್ ರಸ್ತೆಗೆ ಬಿದ್ದು ಎಡಕಣ್ಣಿನ ಹುಬ್ಬಿಗೆ, ಮೂಗಿಗೆ, ಕೈಗಳಿಗೆ ಗಾಯವಾಗಿದೆ ಎನ್ನಲಾಗಿದೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಈ ಬಗ್ಗೆ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story