ಕಾಂಗ್ರೆಸ್ ನೊಂದಿಗಿನ ರಹಸ್ಯ ಮಾತುಕತೆ ವರದಿ ಕುರಿತು ಅಮರಿಂದರ್ ಸಿಂಗ್ ಪ್ರತಿಕ್ರಿಯೆ

ಚಂಡೀಗಢ: ಪಂಜಾಬ್ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ತನ್ನನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕತ್ವದ ಜೊತೆಗೆ "ರಹಸ್ಯ ಮಾತುಕತೆ" ನಡೆಸುತ್ತಿದ್ದಾರೆ ಎಂಬ ವರದಿಗಳನ್ನು ತಳ್ಳಿಹಾಕಿದ್ದು, ಸ್ವಂತ ಪಕ್ಷ ರಚಿಸಲು ತಯಾರಿ ನಡೆಸುತ್ತಿರುವುದಾಗಿ ಹೇಳಿದ್ದಾರೆ.
"ಕಾಂಗ್ರೆಸ್ನೊಂದಿಗೆ ರಹಸ್ಯ ಮಾತುಕತೆಗಳ ವರದಿಗಳು ತಪ್ಪಾಗಿದೆ. ಹೊಂದಾಣಿಕೆಯ ಸಮಯ ಮುಗಿದಿದೆ. ಸೋನಿಯಾ ಗಾಂಧಿ ಅವರ ಬೆಂಬಲಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಆದರೆ ಈಗ ಕಾಂಗ್ರೆಸ್ನಲ್ಲಿ ಉಳಿಯುವುದಿಲ್ಲ" ಎಂದು ಸಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಅವರ ಸಹಾಯಕ ರವೀನ್ ತುಕ್ರಾಲ್ ಟ್ವೀಟಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಅಮರಿಂದರ್ ಅವರು ಹೊಸ ಪಕ್ಷವನ್ನು ಪ್ರಾರಂಭಿಸುವ ಘೋಷಣೆ ಮಾಡಿದ ನಂತರ ಸಿಂಗ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಮನವೊಲಿಸಲು ಹಿರಿಯ ಕಾಂಗ್ರೆಸ್ ನಾಯಕರು ರಹಸ್ಯ ಮಾತುಕತೆಯಲ್ಲಿ ತೊಡಗಿದ್ದಾರೆ ಎಂದು ಚಂಡೀಗಡ ಮೂಲದ ದಿನಪತ್ರಿಕೆ 'ದಿ ಟ್ರಿಬ್ಯೂನ್' ವರದಿ ಮಾಡಿದೆ.
ರೈತರ ಸಮಸ್ಯೆ ಬಗೆಹರಿದ ನಂತರ ಪಂಜಾಬ್ ಚುನಾವಣೆಗೆ ಬಿಜೆಪಿ, ಒಡೆದುಹೋದ ಅಕಾಲಿ ಬಣಗಳು ಹಾಗೂ ಇತರರೊಂದಿಗೆ ಸೀಟು ಹಂಚಿಕೆಗೆ ಮಾತುಕತೆ ನಡೆಸುವುದಾಗಿ ಹಾಗೂ ಶೀಘ್ರದಲ್ಲೇ ತಮ್ಮದೇ ಆದ ಪಕ್ಷವನ್ನು ಪ್ರಾರಂಭಿಸುವುದಾಗಿ ಮಾಜಿ ಮುಖ್ಯಮಂತ್ರಿ ಪರವಾಗಿ ತುಕ್ರಾಲ್ ಟ್ವೀಟ್ ಮಾಡಿದ್ದಾರೆ
‘Reports of backend talks with @INCIndia are incorrect. The time for rapprochement is over. The decision to part ways with party was taken after much thought and is final. I'm grateful to #SoniaGandhi ji for her support but will not stay in Congress now.': @capt_amarinder 1/2 pic.twitter.com/FbO7Toj28V
— Raveen Thukral (@RT_Media_Capt) October 30, 2021







