ಪುನೀತ್ ಮೃತದೇಹ ಕಂಡು ಭಾವುಕರಾದ ದಿಗ್ಗಜರು

ಬೆಂಗಳೂರು, ಅ.30: ಪುನೀತ್ ರಾಜ್ಕುಮಾರ್ ಅವರ ಆಕಸ್ಮಿಕ ನಿಧನಕ್ಕೆ ಮರುಗಿದ ಭಾರತೀಯ ಚಿತ್ರರಂಗದ ದಿಗ್ಗಜರು, ಕಂಠೀರವ ಕ್ರೀಡಾಂಗಣದಲ್ಲಿ ಇರಿಸಲಾಗಿರುವ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಭಾವುಕರಾದರು.
ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ತೆಲುಗು ಚಲನಚಿತ್ರ ರಂಗದ ಮೆಗಾಸ್ಟಾರ್ ಚಿರಂಜೀವಿ, ನಂದಮೂರಿ ಬಾಲಕೃಷ್ಣ, ವಿಕ್ಟರಿ ವೆಂಕಟೇಶ್, ಜೂ.ಎನ್.ಟಿ.ಆರ್, ಪ್ರಭುದೇವ, ಶ್ರೀಕಾಂತ್, ಅಲಿ ಸೇರಿದಂತೆ ಪ್ರಮುಖರು ನಟ ಪುನೀತ್ ರಾಜ್ಕುಮಾರ್ ಅವರನ್ನು ನೆನೆದು ಭಾವುಕರಾದರು.
ಈ ವೇಳೆ ಪ್ರತಿಕ್ರಿಯಿಸಿದ ಚಿರಂಜೀವಿ, ಪುನೀತ್ ಬಹಳ ಒಳ್ಳೆಯ ಹುಡುಗ. ಸರಳ ಜೀವಿ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಆತ ನಿಧನನಾದ ವಿಷಯ ತಿಳಿದು ಆಘಾತವಾಗಿದೆ. ಡಾ.ರಾಜ್ಕುಮಾರ್ ಅವರ ಮಗನಾಗಿದ್ದರೂ ಆತನಿಗೆ ಕಿಂಚಿತ್ತೂ ಅಹಂ ಇರಲಿಲ್ಲ ಎಂದು ಗದ್ಗದಿತರಾದರು.
ನಂದಮೂರಿ ಬಾಲಕೃಷ್ಣ ಮಾತನಾಡಿ, ನಮ್ಮ ತಂದೆಯ ಕಾಲದಿಂದಲೂ ರಾಜ್ಕುಮಾರ್ ಕುಟುಂಬದೊಂದಿಗೆ ಉತ್ತಮ ಸಂಬಂಧವಿದೆ. ತಮ್ಮನಂತಿದ್ದ ಪುನೀತ್ ರಾಜ್ಕುಮಾರ್ನನ್ನು ಕಳೆದುಕೊಂಡಿರುವುದು ತೀವ್ರ ದುಃಖ ತಂದಿದೆ ಎಂದರು.
ನಟ ವಿಕ್ಟರಿ ವೆಂಕಟೇಶ್ ಮಾತನಾಡಿ, ಒಂದು ಸಹೃದಯಿ, ಕಂಚಿನ ಕಂಠದ ನಾಯಕನನ್ನು ಕಳೆದುಕೊಂಡಿದ್ದೇವೆ. ಇದು ನಿಜಕ್ಕೂ ಆಘಾತಕಾರಿ ಸುದ್ದಿ. ಇವರ ಕುಟುಂಬಕ್ಕೆ ಭರಿಸಲಾಗದ ಆಘಾತ. ಅವರ ನೋವಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಹೇಳಿದರು.
ನಟ ಶ್ರೀಕಾಂತ್ ಮಾತನಾಡಿ, ಇತ್ತೀಚೆಗೆ ನಾನು ಪುನೀತ್ ಅಭಿಯನದ 'ಜೇಮ್ಸ್' ಚಿತ್ರದಲ್ಲಿ ಅವರ ಜೊತೆ ಖಳನಾಯಕ ಪಾತ್ರದಲ್ಲಿ ನಟಿಸಿದ್ದೇನೆ. ಅವರೊಂದಿಗಿನ 45 ದಿನಗಳ ಪ್ರಯಾಣ ತುಂಬಾ ಖುಷಿಯಾಗಿತ್ತು. ಆದರೆ ಇಂದು ಅವರ ಅಗಲಿಕೆ ನನಗೆ ಸಾಕಷ್ಟು ನೋವುಂಟು ಮಾಡಿದೆ ಎಂದು ನುಡಿದರು.
ಖ್ಯಾತ ಹಾಸ್ಯ ನಟ ಅಲಿ ಮಾತನಾಡಿ, ರಾಜ್ಕುಮಾರ್ ಕುಟುಂಬಕ್ಕೂ ಹಾಗೂ ನನಗೂ 35 ವರ್ಷಗಳ ಸಂಬಂಧವಿದೆ. ಒಳ್ಳೆಯ ಮನುಷ್ಯರನ್ನು ಭಗವಂತ ಬಹುಬೇಗನೇ ಕರೆದುಕೊಳ್ಳುತ್ತಾನೆ. ಅಪ್ಪು ಕಳೆದುಕೊಂಡ ಅವರ ಕುಟುಂಬಕ್ಕೆ ದೇವರು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಇದೇ ವೇಳೆ ಬಹುಭಾಷಾ ನಟರಾದ ರಾಣಾ, ಅರ್ಜುಜ್ಸರ್ಜಾ, ಧ್ರುವ ಸರ್ಜಾ, ಡಾಲಿ ಧನಂಜಯ, ಅಭಿಷೇಕ್ ಅಂಬರೀಶ್, ನಟಿಯರಾದ ರಮ್ಯಾ, ರಚಿತಾ ರಾಮ್, ರಕ್ಷಿತಾ, ಪ್ರಿಯಾಂಕಾ ಉಪೇಂದ್ರ ಅವರೂ ಪುನೀತ್ ಜೊತೆಗಿನ ಒಡನಾಟ ನೆನೆದು ಕಣ್ಣೀರಿಟ್ಟರು.
ಬಿಬಿಸಿನಲ್ಲೂ ಪುನೀತ್!
ಪುನೀತ್ ರಾಜ್ಕುಮಾರ್ ನಿಧನದ ಸುದ್ದಿ ದೇಶ ವಿದೇಶಗಳ ಸುದ್ದಿ ವಾಹಿನಿಗಳಲ್ಲೂ ಪ್ರಸಾರವಾಗಿದೆ.
ಶುಕ್ರವಾರ ಬಿಬಿಸಿ ನ್ಯೂಸ್ನಲ್ಲಿ ಪುನೀತ್ ಸಾವು ಮತ್ತು ಅಭಿಮಾನಿಗಳ ಆಕ್ರಂದನದ ಬಗ್ಗೆ ವರದಿಯಾಗಿದೆ.
ಪುನೀತ್ ರಾಜ್ಕುಮಾರ್ ಅಪ್ರತಿಮ ಪ್ರತಿಭೆ. ಬಾಲನಟನಾಗಿಯೇ ಹೆಸರುವಾಸಿಯಾಗಿದ್ದರು. ಬಂಗಾರದಂತಹ ಮನುಷ್ಯ. ಹಿರಿಯರು, ಕಿರಿಯರು ಯಾರೇ ಇರಲಿ ಎಲ್ಲರಿಗೂ ಪ್ರೀತಿ ಹಂಚಿದ್ದರು. ನನ್ನ ಮನೆಯ ಮಗುವನ್ನು ಕಳೆದುಕೊಂಡಷ್ಟು ದುಃಖವಾಗಿದೆ.
-ಉಮಾಶ್ರೀ, ಹಿರಿಯ ನಟಿ
ಕೋವಿಡ್ ಸೋಂಕಿಗೂ ಮುನ್ನ ಪುನೀತ್ ರಾಜ್ಕುಮಾರ್ ಅವರನ್ನು ಭೇಟಿ ಮಾಡಿದ್ದೆ. ಇತ್ತೀಚೆಗೆ ಮೂರು ವಾರಗಳ ಹಿಂದೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದೆ. ಅಲ್ಲದೆ, ಚಿತ್ರರಂಗಕ್ಕೆ ಮತ್ತೆ ಮರಳಿ ಬರುವುದಾದರೆ ಅದು ನಿಮ್ಮ ಮೂಲಕ ಎಂದು ತಿಳಿಸಿದ್ದೆ. ಆದರೆ, ಅವರ ಜೊತೆ ಮರಳಿ ಸಿನಿಮಾ ಮಾಡುವ ಅವಕಾಶ ಸಿಗಲಿಲ್ಲ.
-ರಮ್ಯಾ, ನಟಿ






.jpg)
.jpg)
.jpg)
.jpg)

