ಸಾಕ್ಷರತೆಯಿಂದ ಹಕ್ಕುಗಳ ಅರಿವು ಸಾಧ್ಯ: ನ್ಯಾ. ಶರ್ಮಿಳಾ

ಉಡುಪಿ, ನ.1: ಯಾವುದೇ ವ್ಯಕ್ತಿ ಸಾಕ್ಷರನಾದರೆ ತನ್ನ ಹಕ್ಕುಗಳ ಬಗ್ಗೆ ಅರಿವು ಹೊಂದಲು ಸಾದ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಅಕ್ಷರ ಜ್ಞಾನ ಹೊಂದುವುದು ಅತ್ಯಂತ ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾಯದರ್ರ್ಶಿ ಶರ್ಮಿಳಾ ಅಭಿಪ್ರಾಯಪಟ್ಟಿದ್ದಾರೆ.
ಹಿರಿಯಡ್ಕ ಸಮೀಪದ ಅಂಜಾರಿನ ಕಾಜಾರಗುತ್ತುನಲ್ಲಿರುವ ಜಿಲ್ಲಾ ಕಾರಾಗೃಹ ದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಉಡುಪಿ, ಕಾರಾಗೃಹ ಮತ್ತು ಸುಧಾರಣಾ ಸೇವೆ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಉಡುಪಿ, ಜಿಲ್ಲಾ ಕಾರಾಗೃಹ ಉಡುಪಿ ಇವರ ಸಹಯೋಗದಲ್ಲಿ ಶಿಕ್ಷಣದಿಂದ ಬದಲಾವಣೆ ಕಾರಾಗೃಹದ ಅನಕ್ಷರಸ್ಥ ಹಾಗೂ ಅರೆ ಅನಕ್ಷರಸ್ಥ ಬಂಧಿಗಳಿಗೆ ಆಯೋಜಿಸಿದ್ದ ಸಾಕ್ಷರತಾ ಕಾರ್ಯಕ್ರಮವನ್ನು ಉ್ಘಾಟಿಸಿ ಅವರು ಮಾತನಾಡುತಿದ್ದರು.
ಸಾಕ್ಷರತೆ ಪಡೆಯುವುದು ವ್ಯಕ್ತಿಯ ಘನತೆ ಹಾಗೂ ಹಕ್ಕು ಆಗಿದೆ. ವ್ಯಕ್ತಿ ಸಾಕ್ಷರತೆಯ ಜೊತೆಗೆ ಮಾನವೀಯ ವೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಅನಕ್ಷರತೆಯಿಂದ ಬಡತನ, ಜನಸಂಖ್ಯೆ ನಿಯಂತ್ರಣ ಸಮಸ್ಯೆ, ಲಿಂಗ ಅಸಮಾನತೆ ಉಂಟಾಗಲಿದ್ದು, ಇದನ್ನು ತೊಡೆದು ಹಾಕಿ ದೇಶವನ್ನು ಸಮಗ್ರ ವಾಗಿ ಅಭಿವೃದ್ದಿ ಪಡಿಸಲು ಸಾಕ್ಷರತೆಯಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ, ಪ್ರತಿಯೊಬ್ಬರಿಗೂ ಕನಿಷ್ಠ ಓದುವ ಸಾಮರ್ಥ್ಯ ಅಗತ್ಯ. ಇದರಿಂದ ತಮ್ಮ ದೈನಂದಿನ ವ್ಯವಹಾರಗಳನ್ನು ಸುಗಮವಾಗಿ ಮಾಡಲು ಸಾಧ್ಯ. ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡುವ ಜವಾಬ್ದಾರಿ ವಿದ್ಯಾವಂತರದ್ದಾಗಿದೆ. ವಯಸ್ಕರ ಶಿಕ್ಷಣ ಇಲಾಖೆಯಿಂದ ಸಿದ್ದಪಡಿಸಿರುವ ಪಠ್ಯವು ಅತ್ಯಂತ ಸರಳವಾಗಿದ್ದು, ಇದರಿಂದ 2 ತಿಂಗಳಲ್ಲಿ ಅನಕ್ಷರಸ್ಥರು ಸಾಕ್ಷರ ರಾಗಲು ಸಾದ್ಯವಿದೆ ಎಂದರು.
ಜಿಲ್ಲಾ ಕಾರಾಗೃಹದಲ್ಲಿರುವ 7 ಮಂದಿ ಅನಕ್ಷರಸ್ಥರು ಮತ್ತು 20 ಮಂದಿ ಅರೆ ಅನಕ್ಷರಸ್ಥರಿಗೆ ಈ ತರಬೇತಿಯನ್ನು ಆಯೋಜಿಸಲಾಗಿದೆ. ಕಾರಾಗೃಹದಲ್ಲಿ ತೆರೆದಿರುವ ಗ್ರಂಥಾಲಯವನ್ನು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್ ಉದ್ಘಾಟಿಸಿದರು.
ಎಎಸ್ಪಿ ಕುಮಾರಚಂದ್ರ ಕಾರಾಗೃಹದಲ್ಲಿರುವ ಅನಕ್ಷರಸ್ಥರು ಮತ್ತು ಅರೆ ಅನಕ್ಷರಸ್ಥರಿಗೆ ಕಲಿಕಾ ಪುಸ್ತಕಗಳನ್ನು ವಿತರಿಸಿದರು.
ಹಿರಿಯ ವಕೀಲೆ ಅಮೃತಕಲಾ ಉಪಸ್ಥಿತರಿದ್ದರು. ಜಿಲ್ಲಾ ಕಾರಾಗೃಹದ ಅಧೀಕ್ಷಕ ಶ್ರೀನಿವಾಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಜಯ್ ಕುಮಾರ್ ವಂದಿಸಿದರು.








