ಭತ್ತಕ್ಕೆ 2500ರೂ. ಬೆಂಬಲ ಬೆಲೆ; ಬೇಡಿಕೆ ಈಡೇರದಿದ್ದರೆ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಎಚ್ಚರಿಕೆ
ನ.5ರವರೆಗೆ ರೈತರ ಗಡುವು

ಉಡುಪಿ, ನ.1: ಕರಾವಳಿಯ ರೈತರಿಗೆ ಒಂದು ಕ್ವಿಂಟಾಲ್ ಭತ್ತಕ್ಕೆ 2500ರೂ. ಬೆಂಬಲ ಬೆಲೆಯನ್ನು ನೀಡಬೇಕು. ಈ ಬಗ್ಗೆ ನ.5ರೊಳಗೆ ರಾಜ್ಯ ಸರಕಾರ ಕ್ರಮ ಕೈಗೊಳ್ಳದಿದ್ದರೆ ಮೊದಲ ಹಂತವಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ರೈತರ ಶಕ್ತಿ ಪ್ರದರ್ಶನ ಮಾಡಲಾಗುವುದು ಎಂದು ರೈತ ಮುಂದಾಳು, ಉಡುಪಿ ಜಿಲ್ಲಾ ಜನಪರ ಹೋರಾಟ ಸಮಿತಿಯ ಪ್ರಮುಖರಾದ ಉಮಾನಾಥ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂತರ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ರೈತರ ಸಭೆ ಕರೆದು ನಮ್ಮ ಬೇಡಿಕೆಗಳನ್ನು ಸಲ್ಲಿಸಲಾಗುವುದು. ಇದಕ್ಕೆಲ್ಲ ಸರಿಯಾಗಿ ಸ್ಪಂದನೆ ಸಿಗದಿದ್ದರೆ ಮುಂದೆ ಉಗ್ರ ರೀತಿಯಲ್ಲಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ನಮ್ಮಲ್ಲಿ ಶೇ.60ರಷ್ಟು ರೈತರಿದ್ದರೂ ಅವರ ಸಮಸ್ಯೆ ಕೇಳಲು ಜಿಲ್ಲಾಧಿಕಾರಿ ಮಟ್ಟದ ಅಧಿಕಾರಿಗಳೇ ಇಲ್ಲ. ಅಬಕಾರಿ ಇಲಾಖೆ ಯಂತೆ ಕೃಷಿ ಇಲಾಖೆಗೆ ಜಿಲ್ಲಾಧಿಕಾರಿಗಳು ಇಲ್ಲದಿರುವುದು ನಮ್ಮ ದುರಂತ. ಹೀಗಿರುವಾಗ ರೈತರ ಸಮಸ್ಯೆಗಳನ್ನು ಕೇಳುವ ವರು ಯಾರು ಎಂದು ಅವರು ಪ್ರಶ್ನಿಸಿದರು.
ಕೃಷಿಕ ಶಿವಮೂರ್ತಿ ಕೋಟ ಮಾತನಾಡಿ, ರೈತರಿಗೆ ಭತ್ತ ಬೆಳೆಯಲು ಪ್ರತಿ ಎಕರೆಗೆ 30ಸಾವಿರ ರೂ. ಖರ್ಚು ಬೀಳುತ್ತದೆ. ಕಟಾವು ಯಂತ್ರಕ್ಕೆ 2800ರೂ. ಬಾಡಿಗೆ ನೀಡಬೇಕು. ಆದುದರಿಂದ ಭತ್ತಕ್ಕೆ ಕನಿಷ್ಠ 2500ರೂ. ಬೆಂಬಲ ನೀಡ ಬೇಕು. ಆದರೆ ಪ್ರಸ್ತುತ 1940ರೂ. ಬೆಂಬಲ ಬೆಲೆ ಇದ್ದರೂ ಮಿಲ್ನವರು 1000ರೂ.ಗೆ ಖರೀದಿಸುತ್ತಿದ್ದಾರೆ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯ. ಕೇರಳ ರಾಜ್ಯದಲ್ಲಿ ಒಂದು ಕ್ವಿಂಟಾಲ್ ಭತ್ತಕ್ಕೆ 2748ರೂ. ನೀಡಲಾಗುತ್ತಿದೆ. ರೈತರಲ್ಲಿ ಈ ರೀತಿ ತಾರತಮ್ಯ ಮಾಡುವುದು ಸರಿಯಲ್ಲ ಎಂದು ದೂರಿದರು.
ಜಯರಾಮ ಶೆಟ್ಟಿ ಮಾತನಾಡಿ, ರೈತರಿಗೆ ನ್ಯಾಯ ದೊರೆಯದಿದ್ದರೆ ಮುಂದೆ ನಡೆಯುವ ರೈತ ದಿನಾಚರಣೆಯನ್ನು ಕರಾವಳಿ ರೈತರು ವಿರೋಧಿಸುತ್ತೇವೆ. ಈವರೆಗೆ ಶಾಂತಿಯುತ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ಕರಾವಳಿ ರೈತರು ಇನ್ನು ಉಗ್ರ ರೀತಿಯಲ್ಲಿ ಹೋರಾಟ ಮಾಡಬೇಕಾಗುತ್ತದೆ. ಈ ರೀತಿಯಾದರೆ ಇದಕ್ಕೆಲ್ಲ ನೇರ ಅಧಿಕಾರಿಗಳೇ ಹೊಣೆಯಾಗುತ್ತಾರೆಯೇ ಹೊರತು ರೈತರಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜನಪರ ಹೋರಾಟ ಸಮಿತಿಯ ಪ್ರಮುಖರಾದ ವಿಕಾಸ್ ಹೆಗ್ಡೆ, ಕೆ.ಭೋಜ ಪೂಜಾರಿ, ವಸಂತ ಗಿಳಿಯಾರು ಮೊದಲಾದವರು ಉಪಸ್ಥಿತರಿದ್ದರು.
ಕೇಂದ್ರದ ಕೃಷಿ ಕಾಯಿದೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಮನಾಥ್ ಶೆಟ್ಟಿ, ಕಾಯಿದೆ ಜಾರಿಗೆ ತರುವ ಮೊದಲು ಕೇಂದ್ರ ಸರಕಾರ ರೈತರ ಜೊತೆ ಮಾತು ಕತೆ ನಡೆಸಬೇಕು. ಪ್ರತಿಯೊಂದು ಕಾಯಿದೆಯಲ್ಲೂ ಬೇಕು ಬೇಡ ಎಂಬುದು ಇರುತ್ತದೆ. ಅದರ ಬಗ್ಗೆ ಚರ್ಚೆ ನಡೆಸಬೇಕು. ಅದು ಬಿಟ್ಟು ಏಕಾಏಕಿ ಕಾಯಿದೆ ಜಾರಿಗೆ ತರುವುದು ಸರಿಯಲ್ಲ ಎಂದು ತಿಳಿಸಿದರು.







