ಮಂಗಳೂರು: ಶಕ್ತಿ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ

ಮಂಗಳೂರು : ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಸೋಮವಾರ ನಡೆಯಿತು.
ಕಾರ್ಯಕ್ರಮವನ್ನು ತುಳು ರಂಗಭೂಮಿ ಹಾಗೂ ಚಲನಚಿತ್ರ ನಟ ದೇವದಾಸ ಕಾಪಿಕಾಡ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಾವು ಯಾವುದೇ ಸಾಧನೆ ಮಾಡಲು ಗುರುಗಳ ನಿರಂತರವಾದ ಮಾರ್ಗದರ್ಶನ ಪಡೆಯಬೇಕು. ಗುರುಗಳು ಇದ್ದಾಗ ಮಾತ್ರ ಯಾವುದೇ ಸಾಧನೆ ಮಾಡಲು ಸಾಧ್ಯವಾಗುತ್ತದೆ. ನಾನು ಈ ಮಟ್ಟಕ್ಕೆ ಬೆಳೆಯಲು ಶಾಲೆ ಮತ್ತು ಕಾಲೇಜಿನ ವಾತಾವರಣವೇ ಕಾರಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶಕ್ತಿ ಕಾಲೇಜಿನ ಪ್ರಾಂಶುಪಾಲ ಟಿ. ರಾಜರಾಮ್ ರಾವ್ ಮಾತನಾಡಿ, ನಮ್ಮ ಮಾತೃ ಭಾಷೆಯ ವ್ಯವಹಾರ ಕನ್ನಡದಲ್ಲಿರಬೇಕು. ಇದರ ಜೊತೆಗೆ ಇತರ ಭಾಷೆಗಳಿಗೆ ಸಮಾನ ಗೌರವವನ್ನು ನೀಡಬೇಕು. ಕರ್ನಾಟಕದ ಇತಿಹಾಸ ತುಂಬಾ ದೊಡ್ಡದು ಇದರಲ್ಲಿ ಭಾಷೆ, ಸಂಸ್ಕೃತಿ ಹಾಗೂ ಸಂಸ್ಕಾರ ಅಡಗಿದೆ ಎಂದು ಅವರು ಹೇಳಿದರು.
ಶಕ್ತಿ ವಸತಿ ವಿದ್ಯಾರ್ಥಿಯಶವಂತ್ ಡಿ. ಕನ್ನಡ ರಾಜ್ಯೋತ್ಸವದ ಬಗ್ಗೆ ತನ್ನ ಅಭಿಪ್ರಾಯವನ್ನು ಭಾಷಣ ರೂಪದಲ್ಲಿ ವ್ಯಕ್ತಪಡಿಸಿದರು. ಕಾರ್ಯಕ್ರಮ ವೇದಿಕೆಯಲ್ಲಿ ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್, ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಯೋಜಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು.
ಸಂಸ್ಥೆಯ ಶಿಕ್ಷಕರು ನಾಡಗೀತೆಯನ್ನು ಹಾಡಿದರು. ಕನ್ನಡ ಅಧ್ಯಾಪಕ ಶರಣಪ್ಪಅತಿಥಿ ಪರಿಚಯ ಮಾಡಿದರು. ಕನ್ನಡ ಅಧ್ಯಾಪಕಿ ರೇಖಾ ಡಿಕೋಸ್ಟ ಸ್ವಾಗತಿಸಿ, ವಂದಿಸಿದರು. ವಿದ್ಯಾರ್ಥಿಗಳಾದ ಭೂಮಿಕ, ಶುಕ್ಲಾ ಕಾರ್ಯಕ್ರಮವನ್ನು ನಿರೂಪಿಸಿದರು.
ಬಳಿಕ ಶಾಲೆಯ ವಿದ್ಯಾರ್ಥಿಗಳು ಕನ್ನಡ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ನೃತ್ಯವನ್ನು ನಡೆಸಿಕೊಟ್ಟರು.


















