ಉಪಚುನಾವಣೆ ಫಲಿತಾಂಶದಿಂದ ಧೃತಿಗೆಟ್ಟಿಲ್ಲ: ಎಚ್.ಡಿ.ದೇವೇಗೌಡ
''ಮುಂದಿನ ಚುನಾವಣೆಗೆ ನಾನೇ ಅಭ್ಯರ್ಥಿ ಆಯ್ಕೆ ಮಾಡುತ್ತೇನೆ''

ಹೊಸದಿಲ್ಲಿ, ನ.2: ಈ ಉಪಚುನಾವಣೆ ಫಲಿತಾಂಶದಿಂದ ಧೃತಿಗೆಟ್ಟಿಲ್ಲ. ಇನ್ನೂ ಒಂದುವರೆ ವರ್ಷ ಹೋರಾಡುತ್ತೇನೆ. ಮುಂದಿನ ಚುನಾವಣೆಗೆ ನಾನು ರಾಜ್ಯ ಪ್ರವಾಸ ಮಾಡುತ್ತೇನೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರವಾಸ ಮಾಡುತ್ತೇನೆ. ಒಂದು ತಿಂಗಳಲ್ಲಿ ಎರಡು ಜಿಲ್ಲೆಗೆ ಭೇಟಿ ನೀಡುತ್ತೇನೆ ಬಳಿಕ ನಾನೇ ಅಭ್ಯರ್ಥಿ ಆಯ್ಕೆ ಮಾಡುತ್ತೇನೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಮಂಗಳವಾರ ಹೊಸದಿಲ್ಲಿಯಲ್ಲಿ ಉಪ ಚುನಾವಣೆಯ ಫಲಿತಾಂಶದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಕಾಂಗ್ರೆಸ್ಗಿಂತ ಹೆಚ್ಚು ಹಣವನ್ನು ಬಿಜೆಪಿ ಖರ್ಚು ಮಾಡಿದೆ. ಒಂದು ಮತಕ್ಕೆ 10 ಸಾವಿರ ರೂ.ಕೊಟ್ಟಿದ್ದಾರೆ ಅಂತಾ ಚರ್ಚೆ ಇದೆ. ಕಾಂಗ್ರೆಸ್ನವರು ಚೆನ್ನಾಗಿ ಖರ್ಚು ಮಾಡಿದ್ದಾರೆ ಅಂತ ಹೇಳ್ತಾರೆ. ಆದರೆ, ಸಾರ್ವತ್ರಿಕ ಚುನಾವಣೆಯಲ್ಲಿ ಇಷ್ಟು ಹಣ ಸುರಿಯೋಕೆ ಆಗಲ್ಲ ಎಂದರು.
ಉತ್ತರ ಕರ್ನಾಟಕ ಭಾಗದಲ್ಲಿ ನಾನು ಹಾಗೂ ದಕ್ಷಿಣದಲ್ಲಿ ಕುಮಾರಸ್ವಾಮಿ ನೋಡಿಕೊಳ್ತಾರೆ. ಪಕ್ಷದ ಎಲ್ಲ ಮುಖಂಡರ ಜೊತೆ ಸೇರಿ ಒಟ್ಟಾಗಿ ಹೋರಾಡುತ್ತೇವೆ ಧೃತಿಗೆಡುವುದಿಲ್ಲ. ಸಿಂದಗಿಯಲ್ಲಿ ಹಸಿರು ತುಂಬಿದೆ, ಅಭಿವೃದ್ಧಿಯಾಗಿದೆ. ಇದಕ್ಕೆ ಯಾರು ಕಾರಣ? ವಿಜಾಪುರ, ಬಾಗಲಕೋಟೆ ಪ್ರದೇಶದಲ್ಲಿ 20 ಸಕ್ಕರೆ ಕಾರ್ಖಾನೆ ಕೊಟ್ಟಿದ್ದೇನೆ ಎಂದು ಅವರು ಹೇಳಿದರು.
ಇದುವರೆಗೂ ನಾನು ಉಪಚುನಾವಣೆ ಪ್ರಚಾರ ಮಾಡಿರಲಿಲ್ಲ. ಆದರೆ ಸಿಂದಗಿ ಉಪಚುನಾವಣೆಗೆ ಹೋಗಿದ್ದೆ. ಸಿಂದಗಿ ಜನರು ಕಷ್ಟದಲ್ಲಿದ್ದರು, ಕೂಲಿಗೆ ಮಹಾರಾಷ್ಟ್ರಕ್ಕೆ ಗುಳೆ ಹೋಗುತ್ತಿದ್ದರು. ಆ ಭಾಗದ ಜನರಿಗೆ ಏನ್ ಮಾಡಿದ್ದೇನೆ ಅನ್ನೊದನ್ನು ಜನರೇ ಹೇಳುತ್ತಾರೆ. ಎಂ.ಸಿ.ಮನಗೂಳಿ ಸಮಾಜವಾದಿ ಜನತಾ ಪಾರ್ಟಿಯಿಂದ ನಿಂತು ಸೋತರು ಮತ್ತೆ ನಮ್ಮ ಪಕ್ಷಕ್ಕೆ ಬಂದು ಗೆದ್ದರು. ಅವರನ್ನು 2 ಬಾರಿ ಮಂತ್ರಿ ಮಾಡಿದ್ದೆವು. ಆದರೆ, ಈಗ ಅವರ ಮಗ ಕಾಂಗ್ರೆಸ್ಗೆ ಹೋಗಿದ್ದನ್ನು ನಾನು ಚರ್ಚೆ ಮಾಡಲ್ಲ, ಅಲ್ಲಿನ ಜನತೆ ಮನಗೂಳಿ ಹಾಗೂ ನನ್ನ ಪ್ರತಿಮೆ ಮಾಡಿದ್ದಾರೆ ಎಂದು ದೇವೇಗೌಡ ಸ್ಮರಿಸಿದರು.
ಈ ಬಾರಿಯ ಉಪಚುನಾವಣೆಯಲ್ಲಿ ಮುಸಿಮ್ ಅಭ್ಯರ್ಥಿ ಆಯ್ಕೆ ಮಾಡಿದ್ದೆವು. ಸಿಂದಗಿಯಲ್ಲಿ ಅಂಗಡಿ ಕುಟುಂಬಕ್ಕೆ ಒಳ್ಳೆಯ ಹೆಸರಿದೆ ಸಿಂದಗಿಯಲ್ಲಿ ಹಿಂದು, ಮುಸ್ಲಿಮ್ ಎಂಬ ಭೇದ ಇಲ್ಲ. ಹಾಗಾಗಿ ನಾವು ಅಂಗಡಿ ಕುಟುಂಬಕ್ಕೆ ಟಿಕೆಟ್ ಕೊಟ್ಟೆವು. ನಮ್ಮ ಪಕ್ಷದ ಅಭ್ಯರ್ಥಿ ತೆಗೆದುಕೊಂಡು ಹೋಗಿ ಕಾಂಗ್ರೆಸ್ ಪಡೆದ ಮತ ಎಷ್ಟು? ಬರೀ ಕಾಂಗ್ರೆಸ್, ಬಿಜೆಪಿ ಆದ್ರೆ ನಾವೇನು ಮನೆಗೆ ಹೋಗಬೇಕಾ? ದೇವೆಗೌಡ ಇನ್ನು ಬದುಕಿದ್ದಾನೆ. 89 ವರ್ಷ ಆಗಿದ್ರು ಹೋರಾಟ ಮಾಡುತ್ತೇನೆ. ನಮ್ಮ ಪಕ್ಷದಲ್ಲಿ ನಾಯಕರಿದ್ದಾರೆ, ಹೋರಾಡುತ್ತೇವೆ ಎಂದು ದೇವೇಗೌಡ ತಿಳಿಸಿದರು.
ನನ್ನ ಚುನಾವಣೆ ಸೋತ ಮೇಲೆ ಗುಬ್ಬಿ ಶ್ರೀನಿವಾಸ್ ನೇತೃತ್ವದಲ್ಲೇ ಜಿಲ್ಲಾ ಪ್ರವಾಸ ಮಾಡೋಣ ಎಂದಿದ್ದೆ. ಮಂತ್ರಿ ಆಗಿದ್ದಾಗಲೇ ಕೇಳಿದ್ದೆ. ಜನರಿಗೆ ಧನ್ಯವಾದ ಹೇಳಲು ಮುಂದಾಗಿದ್ದೆ. ಆದರೆ ಏನಾಯಿತು ಅಲ್ಲಿನ ಜನತೆ ಅರ್ಥ ಮಾಡಿಕೊಳ್ಳುತ್ತಾರೆ. ಗುಬ್ಬಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡಿದೆ. ಅವರು ಅಭ್ಯರ್ಥಿ ಘೋಷಣೆ ಮಾಡಿದರೆ ನಾವು ಸುಮ್ಮನೆ ಕೂರಬೇಕಾ? ನಾವು ಪರ್ಯಾಯ ಹುಡುಕಬೇಕಾಗುತ್ತೆ ಎಂದು ಅವರು ಹೇಳಿದರು.
ಜಿ.ಟಿ.ದೇವೇಗೌಡ ಪಕ್ಷ ಬಿಟ್ಟಿದ್ದೇನೆ ಎಂದು ಹೇಳಿದ್ದಾರಾ? ಮಕ್ಕಳು ಕೂತು ಮಾತನಾಡಿದ್ದಾರೆ. ಜಿ.ಟಿ. ದೇವೇಗೌಡ ಮಗ ಹಾಗೂ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದಾರೆ. ಮುಂದೆ ಏನಾಗುತ್ತೆ ನೋಡೋಣ ಎಂದು ದೇವೇಗೌಡ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.







