ಪುತ್ತಿಗೆಯ ಮಿಲನ್ ಶರೀಫ್ ಗೆ 'ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ'
![ಪುತ್ತಿಗೆಯ ಮಿಲನ್ ಶರೀಫ್ ಗೆ ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ ಪುತ್ತಿಗೆಯ ಮಿಲನ್ ಶರೀಫ್ ಗೆ ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ](https://www.varthabharati.in/sites/default/files/images/articles/2021/11/3/312514-1635928346.jpg)
ಮುಹಮ್ಮದ್ ಶರೀಫ್
ಮಂಗಳೂರು : ಯುನಿವೆಫ್ ಕರ್ನಾಟಕ ಪ್ರತಿ ವರ್ಷ ನೀಡುತ್ತಿರುವ 'ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ'ಗೆ 2021 ರ ಸಾಲಿನಲ್ಲಿ ಮೂಡುಬಿದಿರೆ ಪುತ್ತಿಗೆಯ ಮುಹಮ್ಮದ್ ಶರೀಫ್ (ಮಿಲನ್ ಶರೀಫ್) ಆಯ್ಕೆಯಾಗಿದ್ದಾರೆ.
ದ. ಕ. ಜಿಲ್ಲೆಯ ಮೂಡುಬಿದಿರೆಯ ಪುತ್ತಿಗೆಯ ಮುಹಮ್ಮದ್ ಶರೀಫ್ ಅವರು 'ಮಿಲನ್ ಶರೀಫ್' ಎಂದೇ ಪರಿಚಿತರಾಗಿರುವ ಇವರು ನಿಸ್ವಾರ್ಥ ಸಮಾಜ ಸೇವಕರು, ಧಾರ್ಮಿಕ ಕಾಳಜಿ ಉಳ್ಳವರು, ಜಾತಿ ಮತಗಳೆಂಬ ಬೇಧಭಾವವಿಲ್ಲದ ಸದ್ಗುಣರು. ನಾಯಕತ್ವ ಗುಣಗಳನ್ನು ಹೊಂದಿರುವ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿರುವ,ಕ್ರಿಯಾಶೀಲ ವ್ಯಕ್ತಿತ್ವ ಹೊಂದಿರುವವರು.
ನೂರಾನಿ ವೆಲ್ಫೇರ್ ಅಸೋಸಿಯೇಶನ್ ಇದರ ಅಧ್ಯಕ್ಷರಾಗಿ ಹಲವಾರು ಜನಪರ, ಸಾಮಾಜಿಕ, ಧಾರ್ಮಿಕ, ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಡ ಹೆಣ್ಣು ಮಕ್ಕಳ ವಿವಾಹ, ರೋಗಿಗಳಿಗೆ ಸಹಾಯ, ರಕ್ತದಾನ ಶಿಬಿರ, ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ಊರಿನ ರಸ್ತೆ ರಿಪೇರಿ, ಬೀದಿ ದೀಪ ಅಳವಡಿಕೆ ಮುಂತಾದ ಜನಪರ ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ತಮ್ಮ ಸಣ್ಣ ಆದಾಯದಲ್ಲೂ ಸಮಾಜಸೇವೆಗಾಗಿ ತಮ್ಮ ಹಣವನ್ನು ವಿನಿಯೋಗಿಸಿ ಮಾದರಿಯಾದವರು.
ಪ್ರಸ್ತುತ ಪುತ್ತಿಗೆಯ ನೂರಾನಿ ಮಸೀದಿ ಸಮಿತಿಯ ಸದಸ್ಯರಾಗಿರುವ ಇವರು ಸರ್ವ ಧರ್ಮ ಇಫ್ತಾರ್ ಕೂಟ, ಕಬರ್ ಸ್ಥಾನದ ಸ್ವಚ್ಛತೆ, ಮಸೀದಿಯ ಸ್ವಚ್ಛತೆಯ ಮೂಲಕ ಧಾರ್ಮಿಕ ರಂಗದಲ್ಲಿಯೂ ತಮ್ಮ ಛಾಪನ್ನು ಮೂಡಿಸಿದವರು. ಸರ್ವ ಧರ್ಮೀಯರನ್ನು ಒಗ್ಗೂಡಿಸಿ “ಸೌಹಾರ್ದ ಸಂಗಮ” ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾಮಾಜಿಕ ಸೌಹಾರ್ದತೆಯ ಹರಿಕಾರರಾದವರು.
ಪಂಚಾಯತ್ ಸದಸ್ಯರೂ ಆಗಿದ್ದು, ಮನೆ ದುರಸ್ತಿ, ಚರಂಡಿ ವ್ಯವಸ್ಥೆ, ಆಯುಷ್ಮಾನ್ ಕಾರ್ಡ್ ವಿತರಣೆ, ಕೋವಿಡ್ ಲಸಿಕೆಯ ಮಾಹಿತಿ, ಸರಕಾರದಿಂದ ದೊರಕುವ ಸೌಲಭ್ಯಗಳ ಮಾಹಿತಿ, ಆಧಾರ್ ಕಾರ್ಡ್, ರೇಶನ್ ಕಾರ್ಡ್ ಮುಂತಾದ ಅವಶ್ಯಕ ದಾಖಲೆಗಳ ಪೂರೈಕೆ ಇವೇ ಮುಂತಾದ ಸಾಮಾಜಿಕ ಕಾಳಜಿಯ ಕೆಲಸಗಳನ್ನು ಮಾಡಿ ಜನಪ್ರಿಯ ನಾಯಕರೆನಿಸಿಕೊಂಡವರು.
ಇವರಿಗೆ ಯುನಿವೆಫ್ ಕರ್ನಾಟಕ 2021 ರ ಸಾಲಿನ 'ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿ'ಯನ್ನು ನೀಡಿ ಗೌರವಿಸುತ್ತದೆ. ಪ್ರಶಸ್ತಿಯು ರೂ.10,000 ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ನ. 5 ರ ಸಂಜೆ 6.30 ಕ್ಕೆ ಕಂಕನಾಡಿಯ ಬಾಲಿಕಾಶ್ರಮ ರಸ್ತೆಯಲ್ಲಿರುವ ಜಮೀಅತುಲ್ ಫಲಾಹ್ ಹಾಲ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ವಿತರಿಸಲಾಗುವುದು.