ಮುಸ್ಲಿಂ ಮತಗಳನ್ನು ಪಡೆಯಲು ಅಖಿಲೇಶ್ ಯಾದವ್ ಮತಾಂತರವೂ ಆಗಬಹುದು: ಉತ್ತರಪ್ರದೇಶ ಸಚಿವ

TWITTER/@ANANDSWARUPBJP
ಬಲ್ಲಿಯಾ (ಉ.ಪ್ರ.): ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಬೆಂಬಲ ಪಡೆಯುತ್ತಿದ್ದಾರೆಂದು ಆರೋಪಿಸಿದ ಉತ್ತರ ಪ್ರದೇಶದ ಸಚಿವ ಆನಂದ್ ಸ್ವರೂಪ್ ಶುಕ್ಲಾ ಯಾದವ್ ಅವರು ಮುಸ್ಲಿಮರನ್ನು ಓಲೈಸಲು ಧಾರ್ಮಿಕ ಮತಾಂತರವೂ ಆಗಬಹುದು ಎಂದು ಹೇಳಿದ್ದಾರೆ.
ಯಾದವ್ ಅವರು ನೆರೆಯ ದೇಶದ ಐಎಸ್ಐನಿಂದ ಆರ್ಥಿಕ ಬೆಂಬಲವನ್ನು ಪಡೆಯುತ್ತಿರಬಹುದು ಎಂದು ಸಚಿವರು ಮಂಗಳವಾರ ಆರೋಪಿಸಿದ್ದಾರೆ.
"ಮುಖ್ಯಮಂತ್ರಿ ಆದಿತ್ಯನಾಥ್ ಅವರು ಇಸ್ಲಾಮಿಕ್ ಜಗತ್ತಿಗೆ ಸವಾಲಾಗಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಐಎಸ್ ಐಯಿಂದ ಎಲ್ಲಾ ಬೆಂಬಲವನ್ನು ಪಡೆಯುತ್ತಿದ್ದಾರೆ. ಅಖಿಲೇಶ್ ಅವರು ಐಎಸ್ಐನಿಂದ 'ಸಂರಕ್ಷಣ್ ಔರ್ ಸುಜಾವ್' (ಪ್ರೋತ್ಸಾಹ ಮತ್ತು ಸಲಹೆ) ಪಡೆಯುತ್ತಿದ್ದಾರೆ" ಎಂದು ಬಿಜೆಪಿ ನಾಯಕರಾದ ಶುಕ್ಲಾ ಹೇಳಿದ್ದಾರೆ.
ಅಖಿಲೇಶ್ ಯಾದವ್ ಅವರು ರವಿವಾರ ಹರ್ದೋಯ್ನಲ್ಲಿ ಮಾಡಿದ ಭಾಷಣದಲ್ಲಿ ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರು ಹಾಗೂ ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕರು ಎಂದು ಹೇಳಿದ್ದರು. ಈ ಹೇಳಿಕೆಗೆ ಶುಕ್ಲಾ ಈ ರೀತಿಯಾಗಿ ಪ್ರತಿಕ್ರಿಯಿಸಿದರು.





