ಕನ್ನಡ ಅನುಷ್ಠಾನದ ಕಾನೂನುಗಳಿಗೆ ಮತ್ತಷ್ಟು ಬಲ ತುಂಬಬೇಕು: ಟಿ.ಎಸ್.ನಾಗಾಭರಣ
ಚಿಕ್ಕೋಡಿ, ನ.3: ಕನ್ನಡದ ಅನುಷ್ಠಾನಕ್ಕೆಂದು ಇರುವ ಕಾನೂನುಗಳಿಗೆ ಮತ್ತಷ್ಟು ಬಲ ತುಂಬಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ತಿಳಿಸಿದರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿಯಲ್ಲಿ ಅಲ್ಲಮಪ್ರಭು ಸಿದ್ಧಸಂಸ್ಥಾನ ಮಠದ ಗಡಿ ಕನ್ನಡಿಗರ ಬಳಗದಿಂದ ಮಂಗಳವಾರ ಆಯೋಜಿಸಿದ್ದ 66ನೇ ಕನ್ನಡ ರಾಜ್ಯೋತ್ಸವದಲ್ಲಿ ‘ಮುಸ್ಲಿಂ ದೇಹ ಕನ್ನಡ ಮನಸ್ಸು’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಆಧುನಿಕ ಕಾಲಘಟ್ಟದಲ್ಲಿ ತಂತ್ರಜ್ಞಾನ ವ್ಯಾಪಕವಾಗಿ ಬೆಳೆಯುತ್ತಿದೆ. ಹೀಗೆ ಬೆಳೆಯುತ್ತಿರುವ ತಂತ್ರಜ್ಞಾನ ಕ್ಞೇತ್ರದಲ್ಲಿಯೂ ಕನ್ನಡವನ್ನು ಬೆಳೆಸುವತ್ತ ಕನ್ನಡಿಗರು ಚಿತ್ತ ಹರಿಸಬೇಕು. ಇದು ಮೊಬೈಲ್ ಯುಗವಾಗಿದ್ದು, ಮೊಬೈಲ್ ಬಳಸಿಕೊಂಡು ಕನ್ನಡ ಭಾಷೆ ಮತ್ತು ಪರಂಪರೆ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಹೊಣೆಗಾರಿಕೆಯಾಗಿದೆ ಎಂದು ಅವರು ಹೇಳಿದರು.
ಕನ್ನಡ, ಕನ್ನಡಿಗರು, ಕರ್ನಾಟಕ ಎಂಬ ಧ್ಯೇಯವನ್ನು ಇಟ್ಟುಕೊಂಡು ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಹಬ್ಬದಂತೆ ಆಚರಿಸುವ ಬಗ್ಗೆ ಯೋಚಿಸಲಾಗುತ್ತಿದೆ. ಕೇವಲ ಕಾನೂನು ಕಾಯ್ದೆಗಳಿಂದ ಕನ್ನಡ ಬೆಳೆಯಲು ಸಾಧ್ಯವಿಲ್ಲ. ಕನ್ನಡಿಗರ ಮನಸ್ಸಿನಲ್ಲಿ ಕನ್ನಡತನವನ್ನು ಬೆಳೆಸುವ ಇಚ್ಛಾಶಕ್ತಿ ಇರಬೇಕು ಎಂದ ಅವರು, ಆಡಳಿತ ಸೇರಿದಂತೆ ಇತರೆ ಕಡೆಗಳಲ್ಲಿ ಕನ್ನಡ ಅನುಷ್ಠಾನಕ್ಕೆ ಇರುವ ಕಾನೂನುಗಳನ್ನು ಇನ್ನಷ್ಟು ಬಲಪಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಕೃತಿ ಬಿಡುಗಡೆಗೊಳಿಸುವುದಕ್ಕೂ ಮೊದಲು ಮಂಜುಳಾ ಕಿಲ್ಲೇದಾರ ಎಂಬ ಮಹಿಳೆ ಬುತ್ತಿ ಗಂಟನ್ನು ಹೊತ್ತು ತರುವಂತೆ ಬಿಡುಗಡೆಯಾಗಬೇಕಿದ್ದ ಪುಸ್ತಕದ ಬುತ್ತಿ ಗಂಟನ್ನು ತಲೆ ಮೇಲೆ ಹೊತ್ತು ವೇದಿಕೆಯತ್ತ ಆಗಮಿಸಿದ್ದು ವಿಶೇಷವಾಗಿತ್ತು.
ಚಿಂಚಣಿಯ ಸಿದ್ಧ ಸಂಸ್ಥಾನ ಮಠದ ಶ್ರೀ ಅಲ್ಲಮಪ್ರಭು ಸ್ವಾಮೀಜಿ, ಚಿಕ್ಕೋಡಿಯ ಸಂಪಾದನಾ ಮಠದ ಶ್ರೀ ಸಂಪಾದನಾ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೆ.ಎಲ್.ಇ ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶೇಖರ, ನಿಪ್ಪಾಣಿ ತಹಶೀಲ್ದಾರ್ ಮೋಹನ್ ಭಸ್ಮೆ, ನಿಪ್ಪಾಣಿ ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ, ಸಿಡಿಪಿಒ ಸುಮಿತ್ರಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.