ಮಕ್ಕಳಲ್ಲಿ ನ್ಯುಮೋನಿಯಾ ತಡೆಗೆ ತಪ್ಪದೇ ನ್ಯುಮೊಕೋಕಲ್ ಲಸಿಕೆ ಹಾಕಿಸಿ : ಡಾ.ನವೀನ್ ಭಟ್

ಉಡುಪಿ, ನ.4: ದೇಶದಲ್ಲಿ ನ್ಯುಮೋನಿಯಾದಿಂದ ಸಂಭವಿಸುವ ಸಾವುಗಳಲ್ಲಿ 5 ವರ್ಷದೊಳಗಿನ ಮಕ್ಕಳ ಪ್ರಮಾಣ ಶೇ.15ರಷ್ಟಿದೆ ಎಂದು ವರದಿಗಳಿದ್ದು, ಮಕ್ಕಳನ್ನು ನ್ಯುಮೋನಿಯಾದಿಂದ ರಕ್ಷಿಸಲು ಪೋಷಕರು ತಪ್ಪದೇ ಮಕ್ಕಳಿಗೆ ನ್ಯುಮೊಕೋಕಲ್ ಲಸಿಕೆಯನ್ನು ಕೊಡಿಸುವಂತೆ ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ನವೀನ್ ಭಟ್ ವೈ. ಹೇಳಿದ್ದಾರೆ.
ಉಡುಪಿ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ವತಿಯಿಂದ ನಗರದ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಮೆಮೋರಿಯಲ್ ಹಾಜಿ ಅಬ್ದುಲ್ಲಾ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಗುರುವಾರ, ಜಿಲ್ಲೆಯಲ್ಲಿ ನ್ಯುಮೊಕೋಕಲ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲೆ ನೀಡಿ ಅವರು ಮಾತನಾಡುತಿದ್ದರು.
ಮಕ್ಕಳಿಗೆ ನ್ಯುಮೋನಿಯಾದಿಂದ ರಕ್ಷಣೆ ನೀಡುವ ನ್ಯುಮೊಕೋಕಲ್ ಲಸಿಕೆ ಯನ್ನು ಪ್ರಸ್ತುತ ಸಾರ್ವತ್ರಿಕ ಲಸಿಕಾ ಕಾರ್ಯ ಕ್ರಮದಲ್ಲಿ ಪ್ರಾರಂಭಿಸಲಾಗಿದ್ದು, ಮಕ್ಕಳು ಹುಟ್ಟಿದ ಮೊದಲನೇ ವರ್ಷದಲ್ಲಿ ಗಂಭೀರ ನ್ಯುಮೊಕೋಕಲ್ ಕಾಯಿಲೆ ಉಂಟಾಗುವ ಸಾಧ್ಯತೆಗಳು ಅಧಿಕವಾಗಿದ್ದು, ಈ ಲಸಿಕೆಯನ್ನು 1.5 ತಿಂಗಳು, 3.5 ತಿಂಗಳು ಮತ್ತು 9ನೇ ತಿಂಗಳಲ್ಲಿ ಒಟ್ಟು 3 ಡೋಸ್ಗಳಲ್ಲಿ ನೀಡಲಾಗುವುದು ಎಂದರು.
ಈ ಲಸಿಕೆಯು ಮುಂಚೆ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿದ್ದು, ಪ್ರಸ್ತುತ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಈ ಲಸಿಕೆಯನ್ನು ಕೊಡಿಸುವ ಮೂಲಕ ಮಕ್ಕಳನ್ನು ನ್ಯುಮೋನಿಯಾ ಮುಕ್ತ ಮಾಡಲು ಸರಕಾರದೊಂದಿಗೆ ಕೈ ಜೋಡಿಸುವಂತೆ ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ನ್ಯುಮೋನಿಯಾದಿಂದ ರಕ್ಷಣೆಗೆ ನೀಡುವ ನ್ಯುಮೊಕೋಕಲ್ ಲಸಿಕೆಯಿಂದ ಮಕ್ಕಳಲ್ಲಿ ಯಾವುದೇ ಅಡ್ಡ ಪರಿಣಾಮಗಳಿರುವುದಿಲ್ಲ. ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಈ ಲಸಿಕೆಯನ್ನು ಕೊಡಿಸಬೇಕು. ಜಿಲ್ಲೆಯಲ್ಲಿ ನವೆಂಬರ್ ತಿಂಗಳಲ್ಲಿ ಒಟ್ಟು 1150 ಮಕ್ಕಳಿಗೆ ನ್ಯುಮೊಕೋಕಲ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞರಾದ ಡಾ.ಸ್ವರ್ಣಲತಾ, ಡಾ.ಗುರುಪ್ರಸಾದ್, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಡಾ.ರಾಮರಾವ್, ರೋಟರಿ ಕ್ಲಬ್ನ ಐ.ಕೆ.ಜಯಚಂದ್ರ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞರಾದ ಡಾ.ಸ್ವರ್ಣಲತಾ, ಡಾ.ಗುರುಪ್ರಸಾದ್, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸು ದೇವ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ಎಂ.ಜಿ.ರಾಮ ಸ್ವಾಗತಿಸಿದರು. ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ವಂದಿಸಿದರು.








