ವಂಚಕರಿಂದಲೇ ಹಣ ವಾಪಸ್ಸು ಪಡೆದ ನಿವೃತ್ತ ಡಿಜಿಪಿ!

ಬೆಂಗಳೂರು, ನ.4: ಆನ್ಲೈನ್ ವಂಚಕರ ಮೂಲಕ ಕಳೆದುಕೊಂಡಿದ್ದ ಹಣವನ್ನು ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ವಾಪಸ್ಸು ಪಡೆದಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚಿಗೆ ಬ್ಯಾಂಕ್ ಸಹಾಯವಾಣಿಯಂತೆ ಶಂಕರ್ ಬಿದರಿ ಅವರಿಗೆ ಕರೆ ಮಾಡಿದ್ದ ವಂಚಕರು, ಖಾತೆಯಿಂದ 89 ಸಾವಿರ ರೂ. ಹಣ ಸುಲಿಗೆ ಮಾಡಿದ್ದರು. ಈ ಸಂಬಂಧ ಶಂಕರ್ ಬಿದರಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತದನಂತರ ಸ್ವಯಃ ವಂಚಕರಿಗೆ ಕರೆ ಮಾಡಿರುವ ಶಂಕರ್ ಬಿದರಿ ಅವರು, ನನ್ನ ಹಣ ಹಿಂದಿರುಗಿಸಬೇಕು. ಇಲ್ಲವಾದಲ್ಲಿ ಎಲ್ಲೇ ಇದ್ದರೂ ನಿಮ್ಮನ್ನು ಹಿಡಿಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದಾದ ನಂತರ, ಅ.11ರಂದು ಶಂಕರ್ ಬಿದರಿ ಅವರ ಮೊಬೈಲ್ಗೆ ಸಂದೇಶ ಬಂದಿದ್ದು, ಹಣ ಪುನಃ ಜಮೆ ಮಾಡಿರುವ ವಿಚಾರ ಗೊತ್ತಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಶಂಕರ್ ಬಿದರಿ, ನಾನು ದುಬೈಗೆ ಹೊರಡಲು ಸಿದ್ಧನಾಗುತ್ತಿರುವ ಎಟಿಎಂನಿಂದ ಹಣ ಡ್ರಾ ಮಾಡಲು ತೆರಳಿದ್ದೆ. ಆಗ ಬ್ಯಾಂಕ್ ಸಿಬ್ಬಂದಿ ಹೆಸರಿನಲ್ಲಿ ಕರೆ ಮಾಡಿದ ವಂಚಕರು ಪ್ಯಾನ್ ನಂಬರ್ ಅಪ್ ಡೇಟ್ ಮಾಡಬೇಕಿದೆ. ಇಲ್ಲವಾದರೆ ನಿಮ್ಮ ಬ್ಯಾಂಕ್ ಖಾತೆ ನಿಷ್ಕ್ರಿಯಗೊಳ್ಳಲಿದೆ ಎಂದು ಹೇಳಿದ್ದರು.
ದುಬೈಗೆ ತೆರಳುವ ಅವಸರದಲ್ಲಿದ್ದ ನಾನು, ಮೊಬೈಲಿಗೆ ಬಂದ ಓಟಿಪಿ ನಂಬರ್ ಶೇರ್ ಮಾಡಿ, ಅವರ ಹೇಳಿದಂತೆ ಎಲ್ಲ ನಿಯಮ ಪಾಲಿಸಿದೆ. ಕೆಲ ದಿನಗಳ ನಂತರ ಆನ್ಲೈನ್ ಶಾಪಿಂಗ್ ಹಣ ಪಾವತಿಸುತ್ತಿರುವಾಗ ಮೊಬೈಲ್ನಲ್ಲಿ ಹಣ ಕಡಿತದ ಸಂದೇಶ ನೋಡಿದೆ. ಅಂದು 89 ಸಾವಿರ ರೂ. ನನ್ನ ಖಾತೆಯಿಂದ ಕಡಿತವಾಗಿತ್ತು ಎಂದರು ತಿಳಿಸಿದರು.







