ಭತ್ತಕ್ಕೆ ಬೆಂಬಲ ಬೆಲೆ ನೀಡುವಂತೆ ರೈತರ ಆಗ್ರಹ; ರಾ.ಹೆದ್ದಾರಿ ಮಧ್ಯೆ ಹಡಿಮಂಚವಿಟ್ಟು ಭತ್ತ ಬಡಿದು ಪ್ರತಿಭಟನೆ
![ಭತ್ತಕ್ಕೆ ಬೆಂಬಲ ಬೆಲೆ ನೀಡುವಂತೆ ರೈತರ ಆಗ್ರಹ; ರಾ.ಹೆದ್ದಾರಿ ಮಧ್ಯೆ ಹಡಿಮಂಚವಿಟ್ಟು ಭತ್ತ ಬಡಿದು ಪ್ರತಿಭಟನೆ ಭತ್ತಕ್ಕೆ ಬೆಂಬಲ ಬೆಲೆ ನೀಡುವಂತೆ ರೈತರ ಆಗ್ರಹ; ರಾ.ಹೆದ್ದಾರಿ ಮಧ್ಯೆ ಹಡಿಮಂಚವಿಟ್ಟು ಭತ್ತ ಬಡಿದು ಪ್ರತಿಭಟನೆ](https://www.varthabharati.in/sites/default/files/images/articles/2021/11/6/312785-1636207995.jpg)
ಬ್ರಹ್ಮಾವರ, ನ.6: ಭತ್ತದ ಕ್ವಿಂಟಾಲ್ಗೆ 2500ರೂ. ನೀಡುವಂತೆ ಆಗ್ರಹಿಸಿ ಜನಪರ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಶನಿವಾರ ಬ್ರಹ್ಮಾವರದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಮಧ್ಯೆ ಹಡಿಮಂಚವಿಟ್ಟು ಭತ್ತದ ತೆನೆ ಬಡಿಯುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಕರಾವಳಿಯ ವಿವಿಧ ಕೃಷಿಕ ಸಂಘಟನೆಗಳು ಒಂದಾಗಿ ರಚಿಸಿರುವ ಈ ಸಮಿತಿಯ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು 5 ನಿಮಿಷಗಳ ಕಾಲ ರಾಷ್ಟ್ರೀಯ ಹೆದ್ದಾರಿ 66 ತಡೆದು ಸರಕಾರಕ್ಕೆ ರೈತರ ಒಗ್ಗಟ್ಟಿನ ಸ್ಪಷ್ಟ ಸಂದೇಶ ರವಾನಿಸಲಾಯಿತು.
ಇದಕ್ಕೂ ಮೊದಲು ಬ್ರಹ್ಮಾವರ ಬಂಟರ ಭವನದ ಬಳಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ ಮಣೂರು, ಭತ್ತಕ್ಕೆ ಬೆಂಬಲ ಬೆಲೆ ನೀಡುವಂತೆ ಎರಡು ವರ್ಷಗಳ ಹಿಂದೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಸರಕಾರ ನಮ್ಮ ಮನವಿಗೆ ಕಿವಿ ಕೊಡಲಿಲ್ಲ. ಈಗ ನಾವು ಹೋರಾಟ ಮಾಡದೆ ಬೇರೆ ವಿಧಿಯೇ ಇಲ್ಲ. ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.
ಕೇರಳದಲ್ಲಿ ಭತ್ತದ ಕ್ವಿಂಟಾಲ್ಗೆ 2,740ರೂ. ನೀಡಲಾಗುತ್ತಿದೆ. ಆದರೆ ಕರ್ನಾಟಕ ದಲ್ಲಿ ಕೇವಲ 1700ರೂ. ನೀಡುತ್ತಿದ್ದಾರೆ. ಇಲ್ಲಿ ತಾನು ಬೆಳೆದ ಭತ್ತಕ್ಕೆ ರೈತ ಬೆಲೆ ನಿಗದಿಪಡಿಸುತ್ತಿಲ್ಲ. ಬದಲಾಗಿ ರೈಸ್ ಮಿಲ್ ಮಾಲಕರೇ ಬೆಲೆ ನಿಗದಿ ಪಡಿಸುತ್ತಿದ್ದಾರೆ. ರೈತ ತಾನು ಬೆಳೆದ ಭತ್ತವನ್ನು ಕೆಜಿಯೊಂದಕ್ಕೆ 17ರೂಗೆ ನೀಡಿ ಅಕ್ಕಿಯನ್ನು ರೂ.32ಕ್ಕೆ ಖರೀದಿಸುತ್ತಿದ್ದಾನೆ. ಈಗ ಒಂದು ಎಕರೆಗೆ ಭತ್ತ ಬೆಳೆಸಲು 32000ರೂ. ವೆಚ್ಚ ತಗಲುತ್ತದೆ. ಮಿಲ್ನಲ್ಲಿ ಸಿಗುವ 16000ರೂ. ದರ ಯಾವುದಕ್ಕೂ ಸಾಕಾಗುವುದಿಲ್ಲ. ಆದುದರಿಂದ ಭತ್ತಕ್ಕೆ ಕಿಂಟ್ವಾಲ್ಗೆ 2500ರೂ. ಬೆಲೆ ನಿಗದಿ ಮಾಡಬೆೀಕು ಎಂದು ಅವರು ಒತ್ತಾಯಿಸಿದರು.
ಬಳಿಕ ಈ ಕುರಿತು ಬ್ರಹ್ಮಾವರ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹಂಗಾರಕಟ್ಟೆ ಬಾಳೆಕುದ್ರು ಮಠದ ಶ್ರೀನೃರಸಿಂಹಾಶ್ರಮ ಸ್ವಾಮೀಜಿ, ರೈತ ಮುಖಂಡರಾದ ಭೋಜ ಪೂಜಾರಿ ಕೋಟ, ಶಿವಮೂರ್ತಿ.ಕೆ, ಉದಯ ಶೆಟ್ಟಿ ಪಡುಕರೆ, ಮಹೇಶ್ ಶೆಟ್ಟಿ ಮಣೂರು, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಉಪಾಧ್ಯಕ್ಷ ಉಮಾನಾಥ ಶೆಟ್ಟಿ ಬೇಳೂರು, ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ವಿಕಾಸ್ ಹೆಗ್ಡೆ, ಜಿಪಂ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ಬಾರ್ಕೂರು ಶಾಂತಾರಾಮ ಶೆಟ್ಟಿ, ತಾಪಂ ಮಾಜಿ ಸದಸ್ಯ ಭರತ್ ಶೆಟ್ಟಿ ಗಿಳಿಯಾರು, ಕಲಾವಿದ ಮನು ಹಂದಾಡಿ, ರೈತ ಮುಖಂಡರಾದ ವಿಕಾಸ್ ಹೆಗ್ಡೆ, ರವೀಂದ್ರ ಐತಾಳ ಕೋಟ, ಭಾಸ್ಕರ ಶೆಟ್ಟಿ ಮಣೂರು, ಜಯರಾಮ ಶೆಟ್ಟಿ ಮಣೂರು, ಅಲ್ವಿನ್ ಅಂದ್ರಾದೆ ಪಾಂಡೇಶ್ವರ, ಭಾಕಿಸಂ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ಸಮಿತಿ ಸಂಚಾಲಕ ವಸಂತ್ ಗಿಳಿಯಾರ್ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಭಟನೆಯಲ್ಲಿ ಕೇಳಿಬಂದ ಬೇಡಿಕೆಗಳು
ಗ್ರಾಮ ಮಟ್ಟದಲ್ಲಿ ಭತ್ತ ಖರೀದಿ ಕೇಂದ್ರಗಳ ಸ್ಥಾಪಿಸಬೇಕು. ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಕೃಷಿ ನೀತಿ ಅಳವಡಿಸಬೇಕು. ಕೃಷಿಇಲಾಖೆ/ಎಪಿಎಂಸಿ ರೈತಸ್ನೇಹಿಯಾಗಿರುವಂತೆ ಸೂಕ್ತ ತಿದ್ದುಪಡಿ ತರಬೇಕು. ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ಶೀಘ್ರ ಬಿಡುಗಡೆ ಮಾಡಬೇಕು. ಕಟಾವು ಯಂತ್ರಗಳ ಬಾಡಿಗೆ ದರ ನಿಯಂತ್ರಣ ಮಾಡಬೇಕು. ಜಿಲ್ಲೆಯಲ್ಲಿ ವಾಣಿಜ್ಯ ಕೃಷಿ ಚಟುವಟಿಕೆಗಳನ್ನು ಪ್ರೋತ್ಸಾಹ ಜಿಲ್ಲೆಯ ವ್ಯವಸಾಯಿಕ/ ಸಹಕಾರಿ ಬ್ಯಾಂಕ್ಗಳು ಲೇವಾದಾವಿ ಹೊರತಾದ ಕೃಷಿ ಪೂರಕ ಚಟುವಟಿಕೆ ಗಳಲ್ಲಿ ತೊಡಗಿಸಿಕೊಳ್ಳುವಂತೆ ಅವುಗಳೊಂದಿಗೆ ಸರಕಾರ ಸಮನ್ವಯ ನಡೆಸಬೇಕು ರೈತರ ಘನತೆಯನ್ನು ಸರಕಾರ ಗೌರವಿಸಬೇಕು ಎಂದು ರೈತು ಸರಕಾರವನ್ನು ಒತ್ತಾಯಿಸಿದರು.
![](https://www.varthabharati.in/sites/default/files/images/galllery/2021/11/6/UD-N6 PROTEST.jpg)