ಉಡುಪಿ ಜಿಲ್ಲೆಯಲ್ಲಿ ಮುಂದುವರೆದ ಸಿಡಿಲಿನ ಅಬ್ಬರ: ಜಾನುವಾರು ಸಾವು, ಹಲವು ಮನೆಗಳಿಗೆ ಅಪಾರ ಹಾನಿ
![ಉಡುಪಿ ಜಿಲ್ಲೆಯಲ್ಲಿ ಮುಂದುವರೆದ ಸಿಡಿಲಿನ ಅಬ್ಬರ: ಜಾನುವಾರು ಸಾವು, ಹಲವು ಮನೆಗಳಿಗೆ ಅಪಾರ ಹಾನಿ ಉಡುಪಿ ಜಿಲ್ಲೆಯಲ್ಲಿ ಮುಂದುವರೆದ ಸಿಡಿಲಿನ ಅಬ್ಬರ: ಜಾನುವಾರು ಸಾವು, ಹಲವು ಮನೆಗಳಿಗೆ ಅಪಾರ ಹಾನಿ](https://www.varthabharati.in/sites/default/files/images/articles/2021/11/6/312794-1636210095.jpg)
ಉಡುಪಿ, ನ.6: ಜಿಲ್ಲೆಯಾದ್ಯಂತ ನ.5ರಂದು ರಾತ್ರಿ ವೇಳೆ ಸಿಡಿಲಿನ ಅಬ್ಬರಕ್ಕೆ ಒಂದು ಜಾನುವಾರು ಮೃತಪಟ್ಟು, ಹಲವು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದ ಸಂಜು ಮೊಗವೀರ ಎಂಬವರ ಮನೆಯ ಕೊಟ್ಟಿಗೆಗೆ ಸಿಡಿಲು ಬಡಿದ ಪರಿಣಾಮ ಒಂದು ಜಾನುವಾರು ಮೃತಪಟ್ಟಿದ್ದು, ಇದರಿಂದ ಸುಮಾರು 45,000ರೂ. ನಷ್ಟ ಉಂಟಾಗಿದೆ. ಅದೇ ರೀತಿ ಸಿಡಿಲು ಬಡಿದು ಉಡುಪಿ ತಾಲೂಕಿನ 41 ಶೀರೂರು ಗ್ರಾಮದ ಮಮತಾ ಪ್ರಭು ಎಂಬವರ ಮನೆಯ ಗೋಡೆಗೆ ಭಾಗಶಃ ಹಾನಿಯಾಗಿ 20,000ರೂ., ಬೈರಂಪಳ್ಳಿ ಗ್ರಾಮದ ಬೊಗ್ಗು ಹಾಂಡ ಎಂಬವರ ಮನೆಯ ಗೋಡೆಗೆ ಭಾಗಶಃ ಹಾನಿಯಾಗಿ 23,000ರೂ., ಕಾಪು ತಾಲೂಕಿನ ಕೋಟೆ ಗ್ರಾಮದ ಯಶೋದ ಶ್ರೀಯಾನ್ ಎಂಬವರ ಗೋಡೆಗೆ ಹಾನಿಯಾಗಿ ಒಂದು ಲಕ್ಷ ರೂ., ಕುರ್ಕಾಲು ಗ್ರಾಮದ ಜೂಲಿಯಾನ ಡಿಸೋಜ ಎಂಬವರ ಮನೆಗೆ 30,000ರೂ., ಕುರ್ಕಾಲು ಗ್ರಾಮದ ವೆಂಕಟರಮಣ ಆಚಾರ್ಯ ಎಂಬವರ ಮನೆಗೆ 80,000ರೂ. ನಷ್ಟ ಉಂಟಾಗಿದೆ.
ಮಳೆಯಿಂದಾಗಿ ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ನಾಲ್ಕು, ಕರ್ಕುಂಜೆ ಗ್ರಾಮದ ಮೂರು, ಕಾವ್ರಾಡಿ ಎರಡು, ಗುಲ್ವಾಡಿ ಮೂರು ಸೇರಿದಂತೆ ಒಟ್ಟು 13 ಮನೆಗಳಿಗೆ ಹಾನಿಯಾಗಿದ್ದು, ಇದರಿಂದ ಸುಮಾರು 4.90ಲಕ್ಷ ರೂ. ನಷ್ಟ ಉಂಟಾಗಿರುವ ಬಗ್ಗೆ ಅಂದಾಜಿಸಲಾಗಿದೆ.
ಪರ್ಕಳದ ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಹಿಂಬದಿ ಕೊಂಬೆ ಎಂಬಲ್ಲಿ ಉಷಾ ನಾಯಕ್ ಎಂಬವರ ಮನೆಯ ಶೆಡ್ ಮೇಲೆ ಬೃಹತ್ ಮರವೊಂದು ಬಿದ್ದಿದೆ. ಇದರಿಂದ ಕೃಷಿಗೆ ಬಳಸುವ ಪೈಪು, ಸರ್ವಿಸ್ ವಯರ್, ಶೆಡ್ಡಿನ ಗೋಡೆ ಸಂಪೂರ್ಣ ಹಾನಿಯಾಗಿ ಅಂದಾಜು 25000ರೂ. ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.
ಕಳೆದ 24ಗಂಟೆ ಅವಧಿಯಲ್ಲಿ ಉಡುಪಿ-97.7ಮಿ.ಮೀ., ಬ್ರಹ್ಮಾವರ- 50.6ಮಿ.ಮೀ., ಕಾಪು- 82.4ಮಿ.ಮೀ., ಕುಂದಾಪುರ- 40.4ಮಿ.ಮೀ., ಬೈಂದೂರು- 35.0ಮಿ.ಮೀ., ಕಾರ್ಕಳ- 52.3ಮಿ.ಮೀ., ಹೆಬ್ರಿ-48.8 ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 51.7ಮಿ.ಮೀ. ಮಳೆಯಾಗಿ ರುವ ಬಗ್ಗೆ ವರದಿಯಾಗಿದೆ.
![](https://www.varthabharati.in/sites/default/files/images/galllery/2021/11/6/UD-N6 PARKALA1.jpg)