ಜೆಡಿಎಸ್ ತೊರೆದು ಬಿಜೆಪಿ ಸೇರುತ್ತೇನೆ ಎಂಬುದು ಸುಳ್ಳು: ವಿಧಾನ ಪರಿಷತ್ ಸದಸ್ಯ ಮನೋಹರ್

ಆನೇಕಲ್, ನ.6: ನಾನು ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗುತ್ತೇನೆ ವದಂತಿಯೊಂದು ಹಬ್ಬಿದ್ದು, ಆ ತರಹದ ಯಾವ ಆಲೋಚನೆಯೂ ಇಲ್ಲ ಎಂದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಸಿ.ಆರ್ ಮನೋಹರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸರ್ಜಾಪುರ ಪಟ್ಟಣದಲ್ಲಿರುವ ನಿವಾಸದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಪಕ್ಷ ಅಧಿಕಾರದಲ್ಲಿದ್ದಾಗ ನನ್ನನ್ನು ಕಡೆಗಣಿಸಲಾಗಿತ್ತು. ಆಗಲೂ ನಾನು ಪಕ್ಷಕ್ಕೆ ಮುಜುಗರ ಊಂಟು ಮಾಡುವ ಕೆಲಸ ಮಾಡಿಲ್ಲ. ವಿಧಾನ ಪರಿಷತ್ ಸದಸ್ಯತ್ವದ ಅವಧಿ ಇನ್ನೂ ಎರಡು ತಿಂಗಳು ಇದೆ. ಅವಧಿ ಮುಗಿದರೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಜೊತೆ ಸಮಾಲೋಚಿಸಿ ಮುಂದಿನ ನಿರ್ದಾರ ಕೈಗೊಳುತ್ತೇನೆ. ಈಗಾಗಲೇ ಇತರ ಪಕ್ಷಗಳು ಆಹ್ವಾನಿಸಿರುವುದು ನಿಜ. ನಿರ್ಧಾರ ತೆಗೆದುಕೊಂಡಿಲ್ಲ. ಇನ್ನೂ ಜೆಡಿಎಸ್ ಪಕ್ಷದಲ್ಲೇ ಉಳಿಯುತ್ತೇನೆ ಎಂದರು.
ಕೆಲವು ದಿನಗಳ ಹಿಂದೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ದೂರವಾಣಿ ಮೂಲಕ ಮಾತನಾಡಬೇಕು ಎಂದು ಹೇಳಿದ್ದರು. ಆದರೆ ಇದುವರೆಗೂ ಯಾವ ನಾಯಕರು ನನ್ನನ್ನು ಸಂಪರ್ಕಿಸಿಲ್ಲ ಎನ್ನುವ ಮೂಲಕ ಜೆಡಿಎಸ್ ಕುರಿತು ತಮಗಿರುವ ಅಸಹನೆಯನ್ನು ಬಹಿರಂಗಪಡಿಸಿದರು.







