ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದಾರೆ: ಚಿ.ನಾ ರಾಮು

ಛಲವಾದಿ ನಾರಾಯಣಸ್ವಾಮಿ ಚಿ ನಾ ರಾಮು
ಬೆಂಗಳೂರು, ನ. 7: `ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣ ಅವರೊಬ್ಬ ಮತಾಂತರಿ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರೂ ಎಲ್ಲವನ್ನೂ ಜಾಣತನದಿಂದ ಮುಚ್ಚಿಟ್ಟು ಬಿಜೆಪಿ ನಡುಮನೆ ತೂರಿ ನಾಯಕರನ್ನು ವಂಚಿಸಿ, ದಿಕ್ಕುತಪ್ಪಿಸಿ ಅವರಿಗೆ ಸಂಬಂಧಪಡದ ಎಸ್ಸಿ ಮೋರ್ಚಾ ಸೇರಿದ್ದಾರೆ. ಹೀಗಾಗಿ ಅವರು ಹಿಂದೂಧರ್ಮಕ್ಕೆ ಘರ್ ವಾಪ್ಸಿ ಆಗಲಿ' ಎಂದು ಬಿಜೆಪಿ ಎಸ್ಸಿ ಮೋರ್ಚಾ ನಿಕಟಪೂರ್ವ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಚಿ.ನಾ ರಾಮು ಆಗ್ರಹಿಸಿದ್ದಾರೆ.
ರವಿವಾರ ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಬರಹವನ್ನು ಹಂಚಿಕೊಂಡಿದ್ದು, `ವಾರ್ತಾಭಾರತಿ' ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, `ನನ್ನ ಸಹೋದರರು ಆದ ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಅವರ ಬಗ್ಗೆ ಸುದ್ದಿಯೊಂದು ಸುತ್ತುತ್ತಿದೆ. ಆ ಸುದ್ದಿ ನಮಗೆ ತೀವ್ರ ಅಘಾತ ತಂದಿದೆ. ನಾರಾಯಣಸ್ವಾಮಿ ಗುಟ್ಟಾಗಿ ಪ್ರತಿ ರವಿವಾರ ಚರ್ಚ್ಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಅವರು ಕ್ರೈಸ್ತ ಧರ್ಮೀಯ ಹೆಣ್ಣನ್ನು ಮದುವೆ ಆದ ನಂತರ ಮತಾಂತರವಾದವರು. ಅವರ ಮಕ್ಕಳಿಗೂ ಅದೇ ಧರ್ಮದಲ್ಲಿ ಹೆಣ್ಣು ತಂದು ಇಡೀ ಕುಟುಂಬವೇ ಕ್ರೈಸ್ತಧರ್ಮವನ್ನು ಅತ್ಯಂತ ಶ್ರದ್ಧೆಯಿಂದ ಅನುಸರಿಸುತ್ತಿದೆ' ಎಂಬುದು ಅವರ ಮೇಲಿರುವ ಆರೋಪವಾಗಿದೆ. ಇದು ಅಕ್ಷರಶಃ ನಿಜ ಎಂದು ಅವರ ಕುಟುಂಬ, ಬಂಧು-ಬಾಂಧವ ಮೂಲಗಳೂ ಹೇಳುತ್ತಿವೆ' ಎಂದು ತಿಳಿಸಿದ್ದಾರೆ.
`ಇದು ನಿಜಕ್ಕೂ ಸೋಜಿಗ ಮತ್ತು ಕಳವಳ ಹುಟ್ಟಿಸುವ ವಿಷಯವಾಗಿದೆ. ನಾಜೂಕಾಗಿ ಇವರು ಮಾಡಿದ ಈ ಕೃತ್ಯ ದಿಗ್ಭ್ರಮೆಯ ಜೊತೆಗೆ ಪ್ರತಿ ಬಿಜೆಪಿ ಕಾರ್ಯಕರ್ತರಲ್ಲೂ ಆಕ್ರೋಶ ಉಂಟು ಮಾಡುವ ಸಂಗತಿಯಾಗಿದೆ. ಸಹೋದರ ನಾರಾಯಣಸ್ವಾಮಿ ಮೂಲ ಕ್ರೈಸ್ತ ಮತಾನುಯಾಯಿ ಆಗಿದ್ದರೆ ನಮ್ಮ ಆಕ್ಷೇಪವಿರಲಿಲ್ಲ. ಆದರೆ, ಹಿಂದೂಧರ್ಮದಿಂದ ಮತಾಂತರಗೊಂಡು, ತಮ್ಮ ಕುಟುಂಬವನ್ನೂ ಮತ ಪರಿವರ್ತನೆ ಮಾಡಿ ಅದನ್ನು ಮುಚ್ಚಿಕೊಂಡಿದ್ದರೆ, ಅದರ ಬಗ್ಗೆ ನಮ್ಮ ವಿರೋಧವಿದೆ.
ಹಿಂದೂಧರ್ಮದಿಂದ ಅನ್ಯ ಧರ್ಮಕ್ಕೆ ಮತಾಂತರ ಹೊಂದುವುದನ್ನು ಪ್ರತಿ ಬಿಜೆಪಿ ಕಾರ್ಯಕರ್ತ, ಪ್ರತಿ ಧರ್ಮನಿಷ್ಠ ಹಿಂದೂವು ವಿರೋಧಿಸುತ್ತಾನೆ. ನಮ್ಮ ಧರ್ಮ ವಿಶ್ವಕ್ಕೆ ಬೆಳಕು ತೋರಿದ, ಮನುಕುಲ ಪರಂಪರೆಗೆ ಮಾದರಿಯಾದ ಧರ್ಮವಾಗಿದೆ. ಹೀಗಿರುವಾಗ ಛಲವಾದಿ ನಾರಾಯಣಸ್ವಾಮಿ ಅವರು ಕದ್ದುಮುಚ್ಚಿ ಕ್ರೈಸ್ತಧರ್ಮ ಪಾಲನೆ ಮಾಡುತ್ತಿದ್ದಾರೆ ಎಂಬುದೇ ಸತ್ಯವೇ ಆಗಿದ್ದಾರೆ. ಅವರು ಕೂಡಲೇ `ಘರ್ ವಾಪಸಿ' ಆಗಬೇಕು. ಅಥವಾ ತಮ್ಮ ತಪ್ಪು, ಪಕ್ಷಕ್ಕೆ ಮಾಡಿದ ದ್ರೋಹ ಒಪ್ಪಿಕೊಂಡು ಎಲ್ಲ ನಮ್ಮ ಬಿಜೆಪಿ ನಾಯಕರ ಕ್ಷಮೆ ಕೇಳಿ ಎಲ್ಲರೂ ಕ್ಷಮಿಸಿದರೆ ಆಗ ಅಲ್ಪಸಂಖ್ಯಾತ ಮೋರ್ಚಾ ಸೇರಿಕೊಳ್ಳಬೇಕು ಎಂದು ಚೀನಾ ರಾಮು ಸಲಹೆ ನೀಡಿದ್ದಾರೆ.
`ಇಲ್ಲಾ ನಾನು ಹಿಂದೂ ಧರ್ಮೀಯನೇ ಎಂಬುದಾದರೆ ನಮ್ಮ ರಾಜ್ಯ ಕಚೇರಿ ಬಳಿಯೇ ಇರುವ ಗಂಗಮ್ಮನ ದೇಗುಲ, ಸಮೀಪದಲ್ಲೇ ಇರುವ ಸರ್ಕಲ್ ಮಾರಮ್ಮನ ದೇವಸ್ಥಾನ ಮತ್ತು ಅಣ್ಣಮ್ಮನ ದೇವಸ್ಥಾನಕ್ಕೆ ತಮ್ಮ ಕುಟುಂಬದೊಂದಿಗೆ ಬಂದು ಪೂಜೆ ಸಲ್ಲಿಸಿ ಹಿಂದೂ ಧರ್ಮದ ಬಗ್ಗೆ ಇರುವ ಶ್ರದ್ಧೆಯನ್ನು ವ್ಯಕ್ತಪಡಿಸಬೇಕು. ನಮ್ಮ ಕುಟುಂಬ ಕ್ರೈಸ್ತಧರ್ಮ ಅನುಸರಿಸುತ್ತಿದೆ. ನಾನು ಹಿಂದೂ ಅನ್ನುವುದಾದರೆ ಕೂಡಲೇ ಇಡೀ ಕುಟುಂಬದ `ಘರ್ ವಾಪಸಿ' ಮೂಲಕ ಬಿಜೆಪಿ ಪಕ್ಷ, ನಮ್ಮ ಪಕ್ಷದ ತತ್ವ ಸಿದ್ದಾಂತ ಪಾಲನೆ ಮಾಡಬೇಕು.
ಏಕೆಂದರೆ ಇಂದು ಮತಾಂತರ ಎಂಬ ಪಿಡುಗು ನಮ್ಮ ಧರ್ಮವನ್ನು ಕಾಡುತ್ತಿದೆ. ನಮ್ಮ ಪಕ್ಷದ ಶಾಸಕ ಗೂಳಿಹಟ್ಟಿ ಶೇಖರ್ ಅವರು ತಮ್ಮ ತಾಯಿಯನ್ನು ಮತಾಂತರಗೊಳಿಸಿದ್ದರ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತಿ ಮತ್ತೆ ಘರ್ ವಾಪಸಿ ಮಾಡಿಕೊಂಡರು. ಹಿಂದೂಧರ್ಮದ ಬಗ್ಗೆ ತಮಗಿರುವ ಶ್ರದ್ಧೆ ಎಂತದ್ದು ಎಂಬುದನ್ನು ಎತ್ತಿ ತೋರಿದರು. ಈಗ ನನ್ನ ಸೋದರ ಛಲವಾದಿ ನಾರಾಯಣಸ್ವಾಮಿ ಮೇಲೆ ಬಂದಿರುವ ಆರೋಪ ನನಗೆ ನೋವು ತಂದಿದೆ. ಅವರು ಈ ಆರೋಪದಿಂದ ಮುಕ್ತರಾಗಿ ಟೀಕಿಸುವ ವಿರೋಧಿಗಳಿಗೆ ತಕ್ಕ ಉತ್ತರ ನೀಡಬೇಕು ಎಂಬುದು ನಮ್ಮ ಆಶಯವಾಗಿದೆ. ಈ ವಿಷಯ ಕೇಳಿದಾಗಿನಿಂದ ಒಬ್ಬ ಹಿಂದೂ, ಒಬ್ಬ ದಲಿತನಾಗಿ ಹೇಳಿಕೊಳ್ಳಲಾರದಷ್ಟು ನೋವುಂಡ ನಂತರ ನಿಮ್ಮ ಮೇಲಿನ ಈ ಆರೋಪ ಸಹಿಸದೇ ಬಹಿರಂಗವಾಗಿ ಮನವಿ ಮಾಡುತ್ತಿದ್ದೇನೆ ದಯಮಾಡಿ ಸತ್ಯವನ್ನು ಹೊರಗಿಟ್ಟು ನಮ್ಮ ವಿರೋಧಿಗಳ ಬಾಯಿ ಮುಚ್ಚಿಸೋಣ. ಬನ್ನಿ' ಎಂದು ಚೀನಾ ರಾಮು ತಿಳಿಸಿದ್ದಾರೆ.
`ಬಿಜೆಪಿ, ಹಿಂದೂಧರ್ಮದಲ್ಲಿ ನಂಬಿಕೆ ಇಟ್ಟಿದ್ದು, ಅದೇ ತತ್ವ-ಸಿದ್ಧಾಂತ ಅನುಸರಿಸುತ್ತಿದೆ. ಛಲವಾದಿ ನಾರಾಯಣಸ್ವಾಮಿ ಕ್ರೈಸ್ತ ಧರ್ಮ ಅನುಸರಿಸುತ್ತಿದ್ದರೆ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಸ್ಥಾನದಲ್ಲಿರಲು ಸಾಧ್ಯವಿಲ್ಲ. ಅವರು ಬೇಕಿದ್ದರೆ ಅಲ್ಪಸಂಖ್ಯಾತ ಮೋರ್ಚಾದಲ್ಲಿ ಸೇರಿಕೊಳ್ಳಲಿ. ನಾರಾಯಣಸ್ವಾಮಿ ತಾನು `ಬುದ್ಧಿಷ್ಟ್' ಎಂದು ಹೇಳಿಕೊಳ್ಳುತ್ತಿದ್ದಾರೆಂದು ಗಮನಿಸಿದ್ದೇನೆ. ಮೀಸಲಾತಿ ಸಹಿತ ಇನ್ನಿತರ ಸೌಲಭ್ಯಗಳಿಗಾಗಿ ಒಂದು ಧರ್ಮ, ಆಚರಣೆಗೆ ಮತ್ತೊಂದು ಧರ್ಮ ಯಾವುದೇ ಕಾರಣಕ್ಕೂ ಸರಿಯಲ್ಲ. ಹೀಗಾಗಿ ಅವರು ಕೂಡಲೇ ಕ್ರೈಸ್ತ ಧರ್ಮ ತ್ಯಜಿಸಿ ಹಿಂದೂಧರ್ಮಕ್ಕೆ ಘರ್ ವಾಪ್ಸಿ ಆಗಬೇಕು'
ಡಾ.ಚಿ.ನಾ.ರಾಮು - ನಿಕಟಪೂರ್ವ ರಾಷ್ಟೀಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಎಸ್ಸಿ ಮೋರ್ಚಾ







